ಪ್ರತಿ ರಾಜ್ಯದಲ್ಲೂ ಸಂಸ್ಕೃತ ವಿವಿಗಳು ಸ್ಥಾಪನೆಯಾಗಲಿ: ವಾಲಾ
Team Udayavani, Jan 19, 2017, 3:50 AM IST
ಚಿಕ್ಕಮಗಳೂರು: ಸಂಸ್ಕೃತ ಶಾಲೆಗಳಿಂದ ಮಕ್ಕಳಲ್ಲಿ ಸಂಸ್ಕಾರ ಬೆಳೆಯುತ್ತದೆ. ಈ ಹಿನ್ನೆಲೆಯಲ್ಲಿ ಪ್ರತಿ ರಾಜ್ಯದಲ್ಲೂ ಒಂದೊಂದು ಸಂಸ್ಕೃತ ವಿಶ್ವವಿದ್ಯಾಲಯ ಹಾಗೂ ಪ್ರತಿ ಜಿಲ್ಲೆಯಲ್ಲಿ ಒಂದೊಂದು ಸಂಸ್ಕೃತ ಕಾಲೇಜುಗಳು ಪ್ರಾರಂಭವಾಗಬೇಕು ಎಂದು ರಾಜ್ಯಪಾಲ ವಿ.ಆರ್.ವಾಲಾ ಸಲಹೆ ನೀಡಿದ್ದಾರೆ.
ಶೃಂಗೇರಿಯ ರಾಷ್ಟ್ರೀಯ ಸಂಸ್ಕೃತ ಸಂಸ್ಥಾನದ ರಜತ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ವೈದ್ಯಕೀಯ, ಇಂಜಿನಿಯರಿಂಗ್ ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಅಕ್ಷರ ಜ್ಞಾನ ಪಡೆದುಕೊಳ್ಳುತ್ತಾರೆ. ಆದರೆ ಸಂಸ್ಕೃತ ವಿವಿಗಳಲ್ಲಿ ಮಕ್ಕಳು ಅಕ್ಷರ ಜ್ಞಾನದೊಂದಿಗೆ ಸಂಸ್ಕಾರವನ್ನೂ ಪಡೆದುಕೊಳ್ಳುತ್ತಾರೆ. ಹಾಗಾಗಿ ಸಂಸ್ಕೃತ ಶಾಲೆಗಳಿಗೆ ಹೆಚ್ಚಿನ ಒತ್ತು ನೀಡುವ ಅವಶ್ಯಕತೆ ಇದೆ. ಈ ಕುರಿತು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಗಮನ ಹರಿಸಬೇಕು ಎಂದರು.
ಹಿಂದುತ್ವ ಹಾಗೂ ಸಂಸ್ಕಾರವನ್ನು ಉಳಿಸಿ ಬೆಳೆಸಲು ಎಲ್ಲರೂ ಸಂಘಟಿತರಾಗಿ ಹೋರಾಡುವ ಅಗತ್ಯವಿದೆ. ಈ ಮಾತು ಹೇಳಿದ ಕೂಡಲೇ ನಮ್ಮನ್ನು ಕೋಮುವಾದಿಗಳು ಎನ್ನಲಾಗುತ್ತದೆ. ನಾವು ಯಾವುದೇ ಧರ್ಮದ ವಿರೋಧಿಗಳಲ್ಲ. ಕ್ರೈಸ್ತ, ಮುಸ್ಲಿಂ ಎಲ್ಲ ಧರ್ಮಗಳೂ ಶ್ರೇಷ್ಠವಾದವು ಎಂದು ಭಾವಿಸುವವರು ನಾವು ಎಂದು ವಾಲಾ ತಿಳಿಸಿದರು.