ಆಸರೆಯಾಗಬೇಕಿದ್ದ ಮಗನ್ನ ಬಲಿ ತಗೊಂಡ್ರು!
Team Udayavani, Feb 7, 2017, 3:45 AM IST
ಲಕ್ಷ್ಮೇಶ್ವರ: ಡ್ರೈವರ್ ಕೆಲಸಕ್ಕೆಂದು ಹೋದ ಮಗ ಶನಿವಾರ ಬೆಳಗಿನ ಜಾವ ಪೊಲೀಸರ ತೀವ್ರ ಹೊಡೆತದಿಂದ ಆಸ್ಪತ್ರೆಯಲ್ಲಿ ಪ್ರಾಣ ಬಿಟ್ಟಿದ್ದಾನೆ. ಇದ್ದೊಬ್ಬ ಮಗನನ್ನು ಪೊಲೀಸರು ಬಲಿ ತೆಗೆದುಕೊಂಡು ನಮ್ಮನ್ನು ಅನಾಥರನ್ನಾಗಿಸಿದ್ದಾರೆ. ಬದುಕಿನ ಆಸರೆಗಾಗಿ ಪೊಲೀಸ್ ಠಾಣೆ ಮುಂದೆ ಕುಳಿತು ನ್ಯಾಯ ಕೇಳುತ್ತೇವೆ ಎಂದು ಮೃತ ಶಿವಪ್ಪನ ತಂದೆ ಹಾಗೂ ತಾಯಿ ಗೋಳಾಡುತ್ತಿದ್ದ ದೃಶ್ಯ ಮನ ಕಲಕುವಂತಿತ್ತು.
ಗದಗ ಜಿಲ್ಲೆ ಲಕ್ಷ್ಮೇಶ್ವರದಲ್ಲಿ ಭಾನುವಾರದ ಘಟನೆಯ ಬಳಿಕ ಶಿವಪ್ಪನ ಮನೆ ಮತ್ತು ಸ್ವಗ್ರಾಮ ಬಟ್ಟೂರಲ್ಲಿ ನೀರವ ಮೌನ ಆವರಿಸಿದೆ. ಗ್ರಾಮದಲ್ಲಿ ಮೂರು ಎಕರೆ ಜಮೀನು ಮತ್ತು ಚಿಕ್ಕ ಮನೆ ಹೊಂದಿರುವ ಶಿವಪ್ಪನ ತಂದೆ ದುಂಡಪ್ಪಗೆ ಪತ್ನಿ ಹಾಗೂ ನಾಲ್ವರು ಪುತ್ರಿಯರಿದ್ದಾರೆ. ಇಬ್ಬರು ಹೆಣ್ಣು ಮಕ್ಕಳಿಗೆ ಮದುವೆಯಾಗಿದ್ದು, ಆಸರೆಯಾಗಿದ್ದ ಒಬ್ಬನೇ ಮಗ ನಮ್ಮಿಂದ ದೂರವಾದ ಎಂದು ಗೋಳಿಡುತ್ತಿದ್ದಾರೆ.
“ಮಗ ನಮ್ಮ ಮನಿ ಆಧಾರಸ್ತಂಭವಾಗಿದ್ದ. ಇನ್ನು ಮುಂದ ನಮ್ಮ ಮನಿಯ ಒಲಿ ಉರಿಯೋದ ಹೆಂಗಂತ ತಿಳೀದಂಗಾಗೈತಿ. ಯಾರಿಗೂ ಇಂತಹ ಗತಿ ಬರಬಾರದರಿ. ನಮ್ಮನ್ನ ಸಾಕೋರು ಯಾರೂ ಇಲ್ಲ’ ಎಂದು ತಾಯಿ ಚಿನ್ನವ್ವ ಸೆರಗಿನಿಂದ ಕಣ್ಣೀರು ಒರೆಸಿಕೊಳ್ಳುತ್ತ ಬಿಕ್ಕಳಿಸಿದರು.
ಬೆನ್ನಟ್ಟಿ ಹೊಡೆದಾರ:
“ಶನಿವಾರ ಬೆಳಗ್ಗೆ ಮಗ ಕೆಲಸಕ್ಕೆ ಹೋಗಿದ್ದು, ರಾತ್ರಿ ಲಾರಿ ಕ್ಲೀನರ್ ಆತನನ್ನು ಮನೆಗೆ ಬಿಟ್ಟು ಹೋದಾ. ಬರುವಾಗಲೇ ಏದುರುಸಿರು ಬಿಡುತ್ತಿದ್ದ. ನೀರು ಕುಡಿದು, ನನಗೆ ಪೊಲೀಸ್ರು ಬೆನ್ನಟ್ಟಿ ಹೊಡೆದಾರ, ನನಗ ತ್ರಾಸ್ ಆಗಾಕತೈತಿ ಅಂತಾ ಒದ್ದಾಡುತ್ತಿರುವಾಗ ಗಾಡಿ ಮಾಡಿಕೊಂಡು ಲಕ್ಷ್ಮೇಶ್ವರದ ಸರ್ಕಾರಿ ದವಾಖಾನೆಗೆ ಕರೆದೊಯ್ದೆವು. ಅಲ್ಲಿ ಡಾಕ್ಟರ್ ಬೇರೆ ದವಾಖಾನೆಗೆ ಒಯ್ಯಿರಿ ಎಂದರು. ಬೇರೆ ದವಾಖಾನಿಗೆ ಹೋಗೋದರಾಗ ಮಗ ನಮ್ಮ ಕೈಬಿಟ್ಟು ಹೋಗಿದ್ದ. ಅಲ್ಲಿಂದ ನಾವು ನಸುಕಿನಾಗ ಠಾಣೆಯಾಗ ಹೆಣಾ ತೆಗೆದುಕೊಂಡು ಹೋದಾಗ ಪೊಲೀಸರು ನಮಗ ಬೆದರಿಸಿ ಕಳಿಸ್ಯಾರ. ನಂತರ 7 ಗಂಟೆ ಮ್ಯಾಲೆ ಸರ್ಕಾರಿ ದವಾಖಾನಿಯಿಂದ ಮತ್ತ ಪೊಲೀಸ್ ಠಾಣೆಗೆ ಬಂದ ಕುಂತಿವಿ. ಆದರ ನನ್ನ ಮಗನ ನೋವಿನಾಗ ನಾವಿದ್ವಿ, ಯಾರೋ ಕೂಡಿ ಹಿಂಗೆಲ್ಲ ಮಾಡ್ಯಾರ. ಆದರೆ ನನಗೆ ನ್ಯಾಯ ದೊರಕಿಸಿ ಕೊಡೋವರೆಗೂ ಪೊಲೀಸ್ ಠಾಣೆ ಮುಂದನ ಕೂಡತಿನಿ’ ಎಂದು ದುಂಡಪ್ಪ ಆಕ್ರೋಶಭರಿತರಾಗಿ ನುಡಿದರು.
ಪೊಲೀಸ್ ಭದ್ರತೆ ನಡುವೆ ಅಂತ್ಯಸಂಸ್ಕಾರ
ವೈದ್ಯಕೀಯ ಪರೀಕ್ಷೆ ಬಳಿಕ ಭಾನುವಾರ ರಾತ್ರಿ ಪೊಲೀಸ್ ಭದ್ರತೆಯ ನಡುವೆ ಶಿವಪ್ಪನ ಅಂತ್ಯಸಂಸ್ಕಾರ ನಡೆದಿದೆ. ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿದ ಘಟನೆಗೆ ಸಂಬಂಧಪಟ್ಟಂತೆ ಗ್ರಾಮದ 13 ಜನರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ. ಬೆಳಿಗ್ಗೆ ಸುದ್ದಿ ತಿಳಿದ ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದಾರೆ. ಕೆಲವರು ಊರು ತೊರೆದಿದ್ದಾರೆ.
– ಮಲ್ಲಿಕಾರ್ಜುನ ಕಳಸಾಪುರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ
Loksabha Election; ತಮಿಳುನಾಡಿನಲ್ಲಿ ಮರು ಮತದಾನಕ್ಕೆ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆಗ್ರಹ
ತಾಲೂಕಿನೆಲ್ಲೆಡೆ ಮುಂಜಾನೆ ಭಾರಿ ಮಳೆ;ಕೆಸರುಮಯ ರಾಷ್ಟ್ರೀಯ ಹೆದ್ದಾರಿಯಾಗಿಸಿದ ಗುತ್ತಿಗೆದಾರರು
MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್
UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು