ಈಶ್ವರಪ್ಪ- ನನ್ನ ನಡುವೆ ಯಾವುದೇ ಗೊಂದಲವಿಲ್ಲ: ಬಿಎಸ್ವೈ
Team Udayavani, Mar 6, 2017, 3:45 AM IST
ಶಿವಮೊಗ್ಗ: ತಮ್ಮ ಹಾಗೂ ಕೆ.ಎಸ್ ಈಶ್ವರಪ್ಪ ಮಧ್ಯೆ ಯಾವುದೇ ಗೊಂದಲ ಅಥವಾ ಭಿನ್ನಾಭಿಪ್ರಾಯವಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಸ್ಪಷ್ಟಪಡಿಸಿದರು.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ತಮ್ಮಿಬ್ಬರ ನಡುವೆ ಗೊಂದಲವಿಲ್ಲ. ಯಾವುದೇ ಅತೃಪ್ತರ ಸಭೆ ನಡೆದಿಲ್ಲವೆಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು. ತಾವು ಯಾವ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತೇನೆ ಎಂಬುದರ ಬಗ್ಗೆ ಗೊಂದಲ ಬೇಡ. ನನಗೆ ರಾಜಕೀಯ ಆಶ್ರಯ ನೀಡಿದ ಶಿಕಾರಿಪುರದಿಂದಲೇ ಸ್ಪರ್ಧೆ ಮಾಡುತ್ತೇನೆ ಎಂದರು.
ಮಾ. 9ರಂದು ಕುಮಾರ್ ಬಂಗಾರಪ್ಪ ಅನೇಕ ಕಾಂಗ್ರೆಸ್ ಹಾಗೂ ಜೆಡಿಎಸ್ ಮುಖಂಡರೊಂದಿಗೆ ಬೆಂಗಳೂರಿನ ಪಕ್ಷದ ಕಚೇರಿಯಲ್ಲಿ ಬಿಜೆಪಿ ಸೇರ್ಪಡೆಯಾಗುತ್ತಾರೆ. ಪಕ್ಷಕ್ಕೆ ಆಗಮಿಸುತ್ತಿರುವವರಿಗೆ ಹಾಗೂ ಪಕ್ಷದಲ್ಲೇ ಇರುವವರಿಗೆ ಯಾರಿಗೂ ಶಾಸಕರನ್ನಾಗಿ ಮಾಡುತ್ತೇವೆಂದು ಭರವಸೆ ನೀಡಿಲ್ಲ. ಅಭ್ಯರ್ಥಿ ಆಯ್ಕೆ ಸಂದರ್ಭದಲ್ಲಿ ಜನಾಭಿಪ್ರಾಯ ಪಡೆದು ಸರ್ವೇ ಮಾಡಿಸಿ ನಂತರ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.