ಭೂಮಿ ಒತ್ತುವರಿ ಮಾಡಿಲ್ಲ: ಮೋಟಮ್ಮ
Team Udayavani, Mar 9, 2017, 3:45 AM IST
ಮೂಡಿಗೆರೆ: ಮಂಜೂರಾಗಿರುವ ಭೂಮಿ ಹೊರತು ಪಡಿಸಿ ತಾವು ಯಾವುದೇ ಒತ್ತುವರಿ ಮಾಡಿಲ್ಲ. ಇಷ್ಟು ವರ್ಷ ಇಲ್ಲದ ವಿವಾದವನ್ನು ಈಗ ಹುಟ್ಟು ಹಾಕಲಾಗುತ್ತಿದೆ. ರಾಜಕೀಯವಾಗಿ ತಮ್ಮನ್ನು ತುಳಿಯಲು ಕೆಲವರು ಈ ಸಾಹಸಕ್ಕೆ ಕೈಹಾಕಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯೆ ಮೋಟಮ್ಮ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒತ್ತುವರಿ ತೆರವಿಗೆ ಸಂಬಂಧಿಸಿ ಮೂಡಿಗೆರೆ ತಹಶೀಲ್ದಾರರು ನೀಡಿದ್ದಾರೆ ಎನ್ನಲಾದ ನೋಟಿಸ್ ನನ್ನ ಕೈಸೇರಿಲ್ಲ. ನಾನು ಸೇರಿದಂತೆ 200 ಮಂದಿಗೆ ತಹಶೀಲ್ದಾರ್ ನೋಟಿಸ್ ನೀಡಿದ್ದಾರೆ. ಜನವಿರೋಧಿ ನಿರ್ಧಾರ ಕೈಗೊಳ್ಳುತ್ತಿರುವುದನ್ನು ಖಂಡಿಸಿ ತಹಶೀಲ್ದಾರರನ್ನು ವರ್ಗಾಯಿಸಬೇಕೆಂದು ಮುಖ್ಯಮಂತ್ರಿಗಳಲ್ಲಿ ಹೇಳಿದ್ದು ನಿಜ ಎಂದು ತಿಳಿಸಿದರು.
ಮುಖ್ಯಮಂತ್ರಿಗಳು ತಕ್ಷಣ ತಹಶೀಲ್ದಾರರನ್ನು ವರ್ಗಾಯಿಸಿ ಜಿಲ್ಲಾಧಿಕಾರಿ ಕಚೇರಿಯಲ್ಲಿರುವ ನಂದಕುಮಾರ್ ಅವರನ್ನು ತಾತ್ಕಾಲಿಕವಾಗಿ ಮೂಡಿಗೆರೆಗೆ ನೇಮಿಸಲು ಆದೇಶಿಸಿದ್ದರು. ಆದರೆ, ಆ ಆದೇಶದ ಬದಲು ಮತ್ತೆ ತಹಶೀಲ್ದಾರ್ ನಾಗೇಶ್ ಅವರನ್ನೇ ನೇಮಿಸಿ ಮರು ಆದೇಶ ಹೊರಡಿಸಲಾಗಿದೆ. ಇದರ ಹಿಂದೆ ಹಾಗೂ ತನ್ನ ಮೇಲೆ ಮಾಡಿರುವ ಆರೋಪದಲ್ಲಿ ಶಾಸಕ ನಿಂಗಯ್ಯ ಅವರ ಕೈವಾಡವಿದೆ ಎಂದು ಆರೋಪಿಸಿದರು.