ವೈದ್ಯ ಕೋರ್ಸ್ಗೆ ಏಕರೂಪ ಸಿಇಟಿ: ವಿಧೇಯಕ ಮಂಡನೆ
Team Udayavani, Mar 23, 2017, 10:47 AM IST
ವಿಧಾನಸಭೆ: ಇನ್ನು ಮುಂದೆ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್ಗಳಿಗೆ ಹಿಂದಿನಂತೆ ಪ್ರತ್ಯೇಕ ಸಿಇಟಿ ವ್ಯವಸ್ಥೆ ಇರುವುದಿಲ್ಲ. ರಾಜ್ಯ ಸರ್ಕಾರ ಮತ್ತು ಕಾಮೆಡ್ ಕೆ ಎಂಬ ಪ್ರತ್ಯೇಕ ಪ್ರವೇಶ ಪರೀಕ್ಷೆಗಳು ತಡೆಗಟ್ಟಲು ರಾಜ್ಯ ಸರ್ಕಾರ ಕರ್ನಾಟಕ ವೃತ್ತಿ ಶಿಕ್ಷಣ ಸಂಸ್ಥೆಗಳ ಪ್ರವೇಶ ನಿಯಂತ್ರಣ ಮತ್ತು ಶುಲ್ಕ ನಿಗದಿ ಕಾಯಿದೆಗೆ ತಿದ್ದುಪಡಿ ತರಲು ಬುಧವಾರ ವಿಧೇಯಕ ಮಂಡಿಸಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಉನ್ನತ ಶಿಕ್ಷಣ ಸಚಿವ
ಬಸವರಾಜ ರಾಯರೆಡ್ಡಿ ವಿಧಾನಸಭೆಯಲ್ಲಿ ತಿದ್ದುಪಡಿ ವಿಧೇಯಕ ಮಂಡಿಸಿದರು.
ಸಾಮಾನ್ಯ ಪ್ರವೇಶ ಪರೀಕ್ಷಾ ಸಮಿತಿ ರಚನೆ: ತಿದ್ದುಪಡಿ ನಿಯಮದ ಪ್ರಕಾರ ಎಲ್ಲಾ ಅನುದಾನಿತವಲ್ಲದ ಖಾಸಗಿ ವೃತ್ತಿ
ಶಿಕ್ಷಣ ಸಂಸ್ಥೆಗಳು, ಅನಿವಾಸಿ ಭಾರತೀಯ ವಿದ್ಯಾರ್ಥಿಗಳಿಗೆ ಮೀಸಲಿಟ್ಟ ಸೀಟುಗಳ ಹೊರತಾಗಿ ರಾಜ್ಯ ಸಾಮಾನ್ಯ ಪ್ರವೇಶ ಪರೀಕ್ಷಾ ಘಟಕದ ಮೂಲಕ ಭರ್ತಿ ಮಾಡಲು ಒಪ್ಪಿಕೊಂಡರೆ, ವೈದ್ಯಕೀಯ, ದಂತವೈದ್ಯಕೀಯ ಹಾಗೂ ಎಂಜನಿಯರಿಂಗ್ ಖಾಸಗಿ ಅನುದಾನಿತವಲ್ಲದ ವೃತ್ತಿ ಶಿಕ್ಷಣ ಸಂಸ್ಥೆಗಳ ಪ್ರತಿನಿಧಿಗಳನ್ನೊಳಗೊಂಡ ಸಾಮಾನ್ಯ ಪ್ರವೇಶ ಪರೀಕ್ಷಾ ಸಮಿತಿ ರಚಿಸಲು ಸರ್ಕಾರ ನಿರ್ಧರಿಸಿದೆ. ಅಲ್ಪ ಸಂಖ್ಯಾತ ಮತ್ತು ಅಲ್ಪ ಸಂಖ್ಯಾತೇತರ ಎಲ್ಲ ವೃತ್ತಿ ಶಿಕ್ಷಣ
ನೀಡುತ್ತಿರುವ ಖಾಸಗಿ ಶಿಕ್ಷಣ ಸಂಸ್ಥೆಗಳು ಸಾಮಾನ್ಯ ಪ್ರವೇಶ ಪರೀಕ್ಷೆ ಮೂಲಕವೇ ಪ್ರವೇಶ ನೀಡಬೇಕು. ಸರ್ಕಾರಿ ಸೀಟುಗಳನ್ನು ಹೊರತುಪಡಿಸಿದ ಸೀಟುಗಳಿಗಾಗಿ ಖಾಸಗಿ ವಿವಿಗಳು ಹಾಗೂ ಅನುದಾನಿತವಲ್ಲದ ಶಿಕ್ಷಣ ಸಂಸ್ಥೆಗಳು ಸಾಮಾನ್ಯ ಪ್ರವೇಶ ಪರೀಕ್ಷೆ ಸಮಿತಿಯಲ್ಲಿ ಸೇರಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ತಿದ್ದುಪಡಿ ವಿಧೇಯಕದ
ಪ್ರಕಾರ ಈವರೆಗೂ ರಾಜ್ಯ ಸರ್ಕಾರ ಮತ್ತು ಕಾಮೆಡ್ ಕೆ ನಡುವೆ ಹಂಚಿಕೆಯಾಗುತ್ತಿದ್ದ ವೈದ್ಯ ಮತ್ತು ದಂತವೈದ್ಯಕೀಯ ಸೀಟುಗಳ ಹಂಚಿಕೆಯಲ್ಲಿ ವ್ಯತ್ಯಾಸವಾಗಲಿದೆ. ಅಂದರೆ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳಲ್ಲಿ ರಾಜ್ಯ ಸರ್ಕಾರದ ಪಾಲು ಶೇ.20ರಿಂದ 25ಕ್ಕೆ ಏರಿಕೆಯಾಗಲಿದೆ ಎಂದು ಸಚಿವ ಬಸವರಾಜ ರಾಯರೆಡ್ಡಿ ತಿಳಿಸಿದರು.