ಸ್ವಚ್ಛ ಭಾರತ್ ಮಿಶನ್ ಯಶಸ್ಸಿಗೆ ಬ್ಯಾಂಕ್ ಸಾಲ!
Team Udayavani, Apr 16, 2017, 11:57 AM IST
ರಾಯಚೂರು: ಬಯಲು ಶೌಚ ಮುಕ್ತ ಭಾರತ ನಿರ್ಮಾಣಕ್ಕೆ ಸರ್ಕಾರ ಏನೆಲ್ಲ ಸೌಲಭ್ಯ ಕಲ್ಪಿಸಿದರೂ ನಿರೀಕ್ಷಿತ ಯಶಸ್ಸು ಕಂಡಿಲ್ಲ. ಹೀಗಾಗಿ ಯೋಜನೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಬ್ಯಾಂಕ್ಗಳ ನೆರವು ಪಡೆಯಲು ಇಲ್ಲಿನ ಜಿಲ್ಲಾ ಪಂಚಾಯತ್ ಮುಂದಾಗಿದೆ.
ಪ್ರತಿ ಕುಟುಂಬಕ್ಕೂ ಶೌಚಗೃಹ ಕಟ್ಟಿಸಿಕೊಳ್ಳಲು ಸರ್ಕಾರ ಪ್ರೋತ್ಸಾಹಧನ ನೀಡುತ್ತಿದೆ. ಕಾಮಗಾರಿ ಮುಗಿದ ಮೇಲೆಯೇ ಅನುದಾನ ಫಲಾನುಭವಿಗಳ ಖಾತೆಗೆ ಜಮಾಗೊಳ್ಳುತ್ತದೆ. ಇದೇ ಕಾರಣಕ್ಕೆ ಸಾಕಷ್ಟು ಜನ ಯೋಜನೆಯ ಲಾಭ ಪಡೆಯಲು ಹಿಂಜರಿಯುತ್ತಿದ್ದಾರೆ. ಇದಕ್ಕೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಜಿಪಂ ಸಿಇಒ, ಬ್ಯಾಂಕ್ಗಳ ಮುಖ್ಯಸ್ಥರ ಸಭೆ ನಡೆಸಿ ಯೋಜನೆ ಯಶಸ್ಸಿಗೆ ಸಹಕರಿಸುವಂತೆ ಕೋರಿದ್ದಾರೆ.
ಶೌಚಗೃಹ ನಿರ್ಮಾಣಕ್ಕೆ ಖರ್ಚಾಗುವ ಹಣವನ್ನು ಸಾಲದ ರೂಪದಲ್ಲಿ ನೀಡುವಂತೆ ಸೂಚಿಸಿದ್ದಾರೆ. ಸರ್ಕಾರ ಫಲಾನುಭವಿಗಳ ಖಾತೆಗೆ ಹಣ ಜಮಾ ಮಾಡುತ್ತಿದ್ದಂತೆ ಹಿಂಪಡೆಯಲು ತಿಳಿಸಲಾಗಿದೆ. ಇದಕ್ಕೆ ಬ್ಯಾಂಕ್ಗಳೂ ಸಮ್ಮತಿಸಿವೆ.
ಸ್ವ-ಸಹಾಯ ಸಂಘಗಳ ಮಧ್ಯಸ್ಥಿಕೆ:
ಸಾಲವನ್ನು ನೇರವಾಗಿ ನೀಡುವ ಬದಲು ಸ್ವ ಸಹಾಯ ಸಂಘಗಳ ಮೂಲಕ ನೀಡಲು ನಿರ್ಧರಿಸಲಾಗಿದೆ. ಶೌಚಗೃಹ ನಿರ್ಮಿಸಿಕೊಳ್ಳಲು ಸರ್ಕಾರ ಎಸ್ಸಿ, ಎಸ್ಟಿ ಸಮಾಜದವರಿಗೆ 15 ಸಾವಿರ ರೂ., ಬಿಪಿಎಲ್ ಕಾರ್ಡ್ದಾರರಿಗೆ 12 ಸಾವಿರ ರೂ. ಪ್ರೋತ್ಸಾಹಧನ ನೀಡುತ್ತಿದೆ. ಇದೇ ಆಧಾರದಡಿ ಬ್ಯಾಂಕ್ಗಳು 1000 ರೂ.ಕಡಿತಗೊಳಿಸಿ ಕ್ರಮವಾಗಿ 14 ಹಾಗೂ 11 ಸಾವಿರ ರೂ. ನೀಡಲು ಸಿದ್ಧವಾಗಿವೆ.
ಶೇ.28ರಷ್ಟು ಮಾತ್ರ ಸಾಧನೆ:
ಜಿಲ್ಲೆಯಲ್ಲಿ ಸ್ವಚ್ಛ ಭಾರತ್ ಮಿಶನ್ ಪರಿಣಾಮಕಾರಿಯಾಗಿ ಜಾರಿಯಾಗಿಲ್ಲ. ಈವರೆಗೆ ಕೇವಲ ಶೇ.28ರಷ್ಟು ಸಾಧನೆ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಬೀದಿ ನಾಟಕ, ರೇಡಿಯೋ, ಗ್ರಾಪಂ, ಆರೋಗ್ಯ, ಶಿಕ್ಷಣ ಇಲಾಖೆ ಮೂಲಕವೂ ಸಾಕಷ್ಟು ಪ್ರಚಾರ ಮಾಡಲಾಗಿತ್ತು. ಆದರೂ ನಿರೀಕ್ಷಿತ ಗುರಿ ತಲುಪಲಾಗಿಲ್ಲ. ಗ್ರಾಮೀಣ ಭಾಗದ ಜನರಿಗೆ ಮುಖ್ಯವಾಗಿ ಬಯಲು ಶೌಚ ಮುಕ್ತದ ಬಗ್ಗೆ ಸರಿಯಾದ ತಿಳಿವಳಿಕೆ ಇಲ್ಲ. ಹೀಗಾಗಿ, ಕೆಲ ಸಂಘ-ಸಂಸ್ಥೆಗಳು ಆ ದಿಸೆಯಲ್ಲಿ ಸೇವೆ ಮಾಡುತ್ತಿದ್ದು, ಜಾಗೃತಿ ಮೂಡಿಸುತ್ತಿವೆ. ಜತೆಗೆ ಮಧ್ಯಸ್ಥಿಕೆ ವಹಿಸಿ ಬ್ಯಾಂಕ್ಗಳಿಂದ ಸಾಲ ಕೊಡಿಸುವಲ್ಲಿ ನೆರವಾಗುತ್ತಿವೆ.
ಬಡ್ಡಿ ನಿಗದಿಗೆ ಆಕ್ಷೇಪ:
ಬ್ಯಾಂಕ್ಗಳಿಂದ ನೀಡುವ ಸಾಲದ ಹಣಕ್ಕೆ ಒಂದು ರೂ.ಬಡ್ಡಿ ನಿಗದಿ ಮಾಡುವುದರಿಂದ ಕೆಲವರು ಆಕ್ಷೇಪವನ್ನೂ ವ್ಯಕ್ತಪಡಿಸುತ್ತಿದ್ದಾರೆ. ಸಾಲ ನೀಡಲು ಸಾಕಷ್ಟು ದಾಖಲೆಗಳನ್ನು ಸಲ್ಲಿಸಬೇಕಿರುವ ಕಾರಣ ಸಮಸ್ಯೆಯಾಗುತ್ತಿದೆ. ನೀಡುವುದಾದರೆ ಬಡ್ಡಿರಹಿತವಾಗಿ ಸಾಲ ನೀಡಲಿ ಎಂಬ ಒತ್ತಾಯವೂ ಕೇಳಿ ಬಂದಿದೆ.
ಸಾಲದ ಮಾದರಿ ಹೀಗಿದೆ:
ಲೀಡ್ ಬ್ಯಾಂಕ್ ಅಧಿಧೀನದ ಬ್ಯಾಂಕ್ಗಳು ತಮ್ಮ ಸೇವಾವ್ಯಾಪ್ತಿ ಪ್ರದೇಶದೊಳಗೆ ಬರುವ ಫಲಾನುಭವಿಗಳಿಗೆ ಸಾಲ ನೀಡಬಹುದು. ಆಯಾ ಬ್ಯಾಂಕ್ಗಳ ನಿಯಮಾನುಸಾರ ಬಡ್ಡಿ ನಿರ್ಧರಿಸಬಹುದು. ಯಾವುದೇ ಸೇವಾ ಶುಲ್ಕ ಪಡೆಯುವಂತಿಲ್ಲ. ಮೊದಲ ವರ್ಷ ಸಾಲ ಮರುಪಾವತಿಗೆ ವಿನಾಯಿತಿ ನೀಡಲಿದ್ದು, 36 ತಿಂಗಳ ಅವಧಿಧಿ ನೀಡಬೇಕಿದೆ. ಫಲಾನುಭವಿಗಳು ವಾರ್ಷಿಕ ಹಾಗೂ ಅರ್ಧವಾರ್ಷಿಕ ಕಂತುಗಳಲ್ಲಿ ಸಾಲ ಮರುಪಾವತಿಸಬಹುದು. ಮುಖ್ಯವಾಗಿ ಅಡಮಾನ, ಜಾಮೀನುಗಳಂತಹ ಯಾವುದೇ ಭದ್ರತೆ ಕೇಳುವಂತಿಲ್ಲ. ಪಿಡಿಒ ದೃಢೀಕರಣ ಪತ್ರದ ಜತೆಗೆ ಅಗತ್ಯ ದಾಖಲೆ ನೀಡಿದರೆ ಸಾಲ ಪಡೆಯಬಹುದು. ಒಂದೇ ಕಂತಿನಲ್ಲಿ ಸಾಲ ವಿತರಿಸಬೇಕಿದೆ.
ವೈಯಕ್ತಿಕ ಶೌಚಗೃಹ ನಿರ್ಮಿಸಿಕೊಳ್ಳಲು ಸಾಲ ಸೌಲಭ್ಯ ನೀಡುವಂತೆ ಬ್ಯಾಂಕ್ಗಳಿಗೆ ಸೂಚನೆ ಕಳುಹಿಸಲಾಗಿದೆ. ಸರ್ಕಾರದಿಂದ ಫಲಾನುಭವಿಗಳ ಖಾತೆಗೆ ಹಣ ಸಂದಾಯವಾಗಲು ಸಮಯ ಹಿಡಿಯುತ್ತದೆ. ಹೀಗಾಗಿ ಬ್ಯಾಂಕ್ಗಳು ಮುಂಗಡವಾಗಿ ಹಣ ನೀಡಿದರೆ, ಶೌಚಗೃಹ ನಿರ್ಮಿಸಿಕೊಳ್ಳಲು ಫಲಾನುಭವಿಗಳು ಮುಂದೆ ಬರುವ ಸಾಧ್ಯತೆ ಹೆಚ್ಚು.
– ಎಂ. ಕೂರ್ಮಾರಾವ್, ಜಿಪಂ ಸಿಇಒ, ರಾಯಚೂರು
ಗ್ರಾಮೀಣ ಭಾಗದ ಜನರಿಗೆ ಬಯಲು ಶೌಚ ಮುಕ್ತದ ಬಗ್ಗೆ ಸರಿಯಾದ ತಿಳಿವಳಿಕೆ ಇಲ್ಲ. ಈ ಬಗ್ಗೆ ಜಾಗೃತಿ ಮೂಡಿಸುತ್ತಿದ್ದೇವೆ. ಅದರ ಜತೆಗೆ ಬ್ಯಾಂಕ್ಗಳಿಂದ ಸಿಗುವ ಸಾಲ ಸೌಲಭ್ಯದ ಬಗ್ಗೆ ಅರಿವು ಮೂಡಿಸುತ್ತಿದ್ದು, ಸ್ವ-ಸಹಾಯ ಸಂಘಗಳಿಗೂ ಈ ಬಗ್ಗೆ ತಿಳಿವಳಿಕೆ ಮೂಡಿಸಲಾಗುತ್ತಿದೆ.
– ಅಫೊÅàಜ್ ಪಾಷಾ, ಮುಖಂಡ, ಸ್ವಾಮಿ ವಿವೇಕಾನಂದ ಯೂಥ್ ಮೂವ್ಮೆಂಟ್
– ಸಿದ್ಧಯ್ಯಸ್ವಾಮಿ ಕುಕನೂರು