10 ಗಂಟೆ ಬಳಿಕ ಬದುಕಿ ಬಂದಿದ್ದ ನವನಾಥ!
Team Udayavani, Apr 24, 2017, 12:06 PM IST
ಕಲಬುರಗಿ: ಏಳು ಹೆಣ್ಣು ಮಕ್ಕಳ ನಂತರ ಎಂಟನೆಯವನಾಗಿ ಹುಟ್ಟಿದ್ದ ಮಗ ಆರು ವರ್ಷದವನಿದ್ದಾಗ ಕೊಳವೆ ಬಾವಿಯಲ್ಲಿ ಬಿದ್ದ. ಹೆತ್ತವರ ಆಕ್ರಂದನ ಮುಗಿಲು ಮುಟ್ಟಿತ್ತು. ಕೊಳವೆ ಬಾವಿಯಲ್ಲಿ 50 ಅಡಿ ಆಳ ಸೇರಿದ್ದ ಮಗುವನ್ನು
ರಕ್ಷಿಸುವುದು ಹೇಗೆ ಎಂದು ಎಲ್ಲರೂ ಗಾಬರಿಯಾಗಿದ್ದರು. ಜಿಲ್ಲಾಡಳಿತವೇ ಬಂದು ನೆಲೆಯೂರಿತ್ತು. ಸತತ 10 ಗಂಟೆಗಳ
ಕಾರ್ಯಾಚರಣೆ ಫಲವಾಗಿ ನವನಾಥ ಬದುಕಿ ಬಂದಿದ್ದ. ಇದು ನಡೆದದ್ದು 2007ರ ಡಿಸೆಂಬರ್ನಲ್ಲಿ. ಆಳಂದ
ತಾಲೂಕಿನ ಭೂಸನೂರ ಸೀಮಾಂತರದ ಬಟ್ಟರಗಾಸಾಬ್ ಎಂಬುವರ ಕಬ್ಬಿನ ಗದ್ದೆಯಲ್ಲಿ. ಕೂಲಿ ಕೆಲಸಕ್ಕೆ ಬಂದಿದ್ದ
ದೇವಂತಗಿ ಗ್ರಾಮದ ಕಾಶೀನಾಥ -ಕಾಶೀಬಾಯಿ ದಂಪತಿ ಎಂಬುವರ ಆರು ವರ್ಷದ ಮಗ ನವನಾಥ ಅಂದು
ಬದುಕುಳಿದು ಸಾವಿರಾರು ಜನರ ಪ್ರಾರ್ಥನೆ ಈಡೇರಿತು.
ಪಾಲಕರು ಮಗುವಿನೊಂದಿಗೆ ಕಬ್ಬಿನ ಗದ್ದೆ ಕೆಲಸಕ್ಕೆ ಬಂದಿದ್ದರು. ಮಗು ಆಟವಾಡುತ್ತಾ ಹೊಲದಲ್ಲಿ ಕೊರೆಯಲಾದ ಬಾವಿಯೊಳಗೆ ಬಿದ್ದಿತ್ತು. ಸುದ್ದಿ ತಿಳಿದ ಜಿಲ್ಲಾಡಳಿತ ಸಕಲ ಸಿದ್ಧತೆಗಳೊಂದಿಗೆ ಸ್ಥಳಕ್ಕೆ ತೆರಳಿತು. ಸತತ 10 ಗಂಟೆಗಳ ಕಾಲ ಕಾರ್ಯಾಚರಣೆ ನಡೆಯಿತು. ಇದರಲ್ಲಿ ಭೂಸನೂರ ಗ್ರಾಮದ ಕಲ್ಯಾಣಿ ಜಮಾದಾರ ಎಂಬುವರು ಹಗ್ಗದ ತುದಿಗೆ ಕಬ್ಬಿಣದ ಕೊಂಡಿಯನ್ನು ಅಳವಡಿಸಿ, ಮಗುವನ್ನು ಮೇಲೆತ್ತುವಲ್ಲಿ ಯಶಸ್ವಿಯಾಗಿದ್ದರು. ಬಾಲಕ ನವನಾಥ ಈಗ ಆಳಂದ
ತಾಲೂಕಿನ ದೇವಂತಗಿ ಸರಕಾರಿ ಶಾಲೆಯಲ್ಲಿ 8ನೇ ತರಗತಿಯಲ್ಲಿ ಓದುತ್ತಿದ್ದಾನೆ.