ತಳ್ಳುಗಾಡಿಯಲ್ಲಿ ತಾಯಿಯನ್ನು ಆಸ್ಪತ್ರೆಗೊಯ್ದ ಮಗ!
Team Udayavani, May 5, 2017, 10:26 AM IST
ಕುಷ್ಟಗಿ: ತಾಲೂಕಿನ ಜುಂಜಲಕೊಪ್ಪ ಗ್ರಾಮದಲ್ಲಿ ಹನುಮಪ್ಪ ದಾಸರ ತನ್ನ ಅಸ್ವಸ್ಥ ತಾಯಿಯನ್ನು ನೀರಿನ ತಳ್ಳುಗಾಡಿಯಲ್ಲಿ ಕೂರಿಸಿ ಆಸ್ಪತ್ರೆಗೆ ಕರೆದೊಯ್ದ ಸನ್ನಿವೇಶ, ಶ್ರವಣಕುಮಾರ ತನ್ನ ವೃದ್ಧ ತಂದೆ-ತಾಯಿಯನ್ನು ತೀರ್ಥಯಾತ್ರೆ ಮಾಡಿಸಿದ ಪೌರಾಣಿಕ ಕಥಾ ಪ್ರಸಂಗ ನೆನಪಿಸಿತು.
ಜುಂಜಲಕೊಪ್ಪದ ವೃದ್ಧೆ ಹನುಮವ್ವ ಕಲ್ಲಪ್ಪ ದಾಸರ (75) ಅವರಿಗೆ ನಾಲ್ವರು ಮಕ್ಕಳಿದ್ದು, ಒಬ್ಬರು ತೀರಿಕೊಂಡಿದ್ದಾರೆ. ಇರುವ 2 ಎಕರೆ ಜಮೀನು ಮಕ್ಕಳಿಗೆ ಹಂಚಿಕೆಯಾಗಿದೆ. ಈ ಕುಟುಂಬಕ್ಕೆ ಕೂಲಿಯೇ ಜೀವನಾಧಾರ. ಪಡಿತರ ಚೀಟಿಯ ಅಹಾರ ಧಾನ್ಯ, ವೃದ್ಧಾಪ್ಯ ವೇತನ ಕೊಂಚ ಆಸರೆಯಾಗಿದೆ.
ಹನುಮವ್ವ ಆರೋಗ್ಯ ಆಗಾಗ ಕೈಕೊಡುತ್ತಿದ್ದು, ಚಳಗೇರಾ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ತೋರಿಸಬೇಕಾಗುತ್ತಿದೆ. ಗ್ರಾಮಕ್ಕೆ ಬಸ್ ಸೌಕರ್ಯವಿಲ್ಲದೆ ಖಾಸಗಿ ವಾಹನಗಳನ್ನೇ ಆಶ್ರಯಿಸಬೇಕಾಗಿದೆ. ಅಷ್ಟು ಹಣವಿಲ್ಲದ ಹನುಮಪ್ಪ ತನ್ನ ತಾಯಿಯನ್ನು ನೀರು ತರುವ ತಳ್ಳುಗಾಡಿಯಲ್ಲಿ ಕೂರಿಸಿಕೊಂಡು, 3 ಕಿ.ಮೀ. ದೂರದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.
ಜುಂಜಲಕೊಪ್ಪ ಗ್ರಾಮದಲ್ಲಿ ಹಲವು ಕುಟುಂಬಗಳು ಇಂಥ ಸಂಕಷ್ಟ ಎದುರಿಸುತ್ತಿವೆ. ಜಿಲ್ಲಾಡಳಿತ ಗ್ರಾಮಕ್ಕೆ ಸಾರಿಗೆ ಸೌಲಭ್ಯ ಕಲ್ಪಿಸಬೇಕು ಎಂಬುದು ಗ್ರಾಮಸ್ಥರ ಆಗ್ರಹ.