ಶಾಸಕರ ಹುಟ್ಟು ಹಬ್ಬದಲ್ಲಿ “ಸೀರೆ ಪಾಲಿಟಿಕ್ಸ್’ ಗದ್ದಲ
Team Udayavani, May 24, 2017, 10:26 AM IST
ಶ್ರೀರಂಗಪಟ್ಟಣ: ಶಾಸಕರ ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ಪಾಲ್ಗೊಂಡರೆ ಸೀರೆ ನೀಡುವುದಾಗಿ ಟೋಕನ್ಕೊಟ್ಟು ನಂತರ ಸೀರೆ ಕೊಡದೆ ವಂಚಿಸಿದ್ದಾರೆ ಎಂದು ಶ್ರೀರಂಗಪಟ್ಟಣ ಶಾಸಕ ರಮೇಶ್ ಬಂಡಿಸಿದ್ದೇಗೌಡರ ಬೆಂಬಲಿಗರ ವಿರುದ್ಧ ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದರು. ಜೆಡಿಎಸ್ ಉಚ್ಛಾಟಿತ ಶಾಸಕ ರಮೇಶ್ ಬಂಡಿಸಿದ್ದೇಗೌಡರ ಅವರ
ಅಭಿಮಾನಿಗಳು ಶ್ರೀರಂಗಪಟ್ಟಣದ ಶಿಕ್ಷಕರ ಭವನದಲ್ಲಿ ಶಾಸಕರ ಹುಟ್ಟುಹಬ್ಬ ಆಚರಿಸಿದರು. ಇದರ ಜೊತೆಗೆ
ಅಂಬೇಡ್ಕರ್ ಭವನದಲ್ಲಿ ಮಹಿಳೆಯರು ಮತ್ತು ಪುರುಷರಿಗೆ ಸೀರೆ, ಪಂಚೆ ನೀಡುವುದಾಗಿ ಹೇಳಿ ಹೆಚ್ಚಿನ ಮಹಿಳೆಯರನ್ನು ಕಾರ್ಯಕ್ರಮಕ್ಕೆ ಕರೆ ತರಲಾಗಿತ್ತು. ಸುಮಾರು 2 ಸಾವಿರ ಜನರಿಗೆ ಟೋಕನ್ಗಳನ್ನೂ ನೀಡಲಾಗಿತ್ತು. ಸೀರೆ ಸಿಗುವ ಆಸೆಯಿಂದ ಹಲವಾರು ಮಹಿಳೆಯರು ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಆದರೆ, ಆಯೋಜಕರು ಕೆಲವರಿಗಷ್ಟೇ
ಸೀರೆಗಳನ್ನು ನೀಡಿದ್ದು, ಸೀರೆ ವಂಚಿತ ಮಹಿಳೆಯರಿಗೆ ಸಬೂಬು ಹೇಳಿ ಶಾಸಕರ ಅಭಿಮಾನಿಗಳೆಲ್ಲರೂ ಸ್ಥಳದಿಂದ ಕಾಲ್ಕಿತ್ತರು. ಇದರಿಂದ ಆಕ್ರೋಶಗೊಂಡ ಮಹಿಳೆಯರು ಸೀರೆ ಕೊಡದಿದ್ದರೆ ಟೋಕನ್ ಕೊಟ್ಟು ಬಿಸಿಲಿನಲ್ಲಿ ಯಾಕೆ ಕರೆಯಿಸಬೇಕಿತ್ತು ಎಂದು ಶಾಸಕರ ಅಭಿಮಾನಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.