ಪಕ್ಷಕ್ಕೆ ದ್ರೋಹ ಬಗೆದವರ ಹೆಡೆಮುರಿ ಕಟ್ಟುವೆ: ಎಚ್ಡಿಕೆ
Team Udayavani, Jun 3, 2017, 11:05 AM IST
ಮಂಡ್ಯ: ಜೆಡಿಎಸ್ಗೆ ದ್ರೋಹ ಬಗೆದವರ ಹಾಗೂ ನಮ್ಮ ವಿರುದ್ಧ ಸಿಡಿದು ನಿಂತವರ ಹೆಡೆಮುರಿ ಹೇಗೆ ಕಟ್ಟಬೇಕೆಂಬುದು ನಮಗೆ ಗೊತ್ತಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಎಚ್ಚರಿಕೆ ನೀಡಿದ್ದಾರೆ.
ಪಟ್ಟಣದಲ್ಲಿ ತಾಲೂಕು ಜೆಡಿಎಸ್ ಜನಪ್ರತಿನಿಧಿಗಳು, ನಾಯಕರು ಹಾಗೂ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ನಾವು ಸಾಕಿದವರೇ ನಮಗೆ ಕಚ್ಚಿ ಹೋಗಿದ್ದಾರೆ. ಇಂತಹ ದ್ರೋಹಕ್ಕೆ ಹೆದರುವ ಜಾಯಮಾನ ನಮ್ಮದಲ್ಲ. ಮತ್ತೆ ಪಕ್ಷವನ್ನು ಕಟ್ಟಿ ಕಾರ್ಯಕರ್ತರಿಂದಲೇ ಪಾಠ ಕಲಿಸುತ್ತೇವೆ ಎಂದು ಶಾಸಕ ರಮೇಶ್ ಬಂಡಿಸಿದ್ದೇಗೌಡರಿಗೆ ಕುಮಾರಸ್ವಾಮಿ ಪರೋಕ್ಷ ಎಚ್ಚರಿಕೆ ನೀಡಿದರು.
ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ ಶ್ರೀರಂಗಪಟ್ಟಣದ ಕ್ಷೇತ್ರದ ಶಾಸಕರು ಪಕ್ಷ ಸಂಘಟನೆಗೆ ಹಿನ್ನಡೆ ಉಂಟುಮಾಡಿದ್ದಾರೆ. ಜೆಡಿಎಸ್ ಕಾರ್ಯಕರ್ತರಿಗೆ ಕಿರುಕುಳ ನೀಡುತ್ತಾ ಅಟ್ಟಹಾಸದಿಂದ ಮೆರೆಯುತ್ತಿರುವ ಶಾಸಕರಿಗೆ ಪರ್ಯಾಯವಾಗಿ ಸಮರ್ಥ ನಾಯಕನೊಬ್ಬನನ್ನು ಹುಡುಕಿ ಚುನಾವಣಾ ಕಣಕ್ಕೆ ಇಳಿಸಲಾಗುವುದು. ಯಾರೂ ಹೆದರುವ ಅಗತ್ಯವಿಲ್ಲ ಎಂದು ಕಾರ್ಯಕರ್ತರಿಗೆ ಧೈರ್ಯ ತುಂಬಿದರು.