ಧಾರಾಕಾರ ಮಳೆ; ಕರಾವಳಿ, ಕೊಡಗು, ಮಲೆನಾಡಲ್ಲಿ ಆರ್ಭಟಿಸಿದ ವರುಣ
Team Udayavani, Jul 20, 2017, 5:10 AM IST
ಬೆಂಗಳೂರು: ಮಲೆನಾಡು, ಕರಾವಳಿ, ಕೊಡಗು, ಉತ್ತರ ಕರ್ನಾಟಕ ಸೇರಿದಂತೆ ರಾಜ್ಯದ ಹಲವೆಡೆ ಮುಂಗಾರು ಚುರುಕುಗೊಂಡಿದ್ದು, ಧಾರಾಕಾರ ಮಳೆಯಾಗುತ್ತಿದೆ. ಬುಧವಾರ ಮುಂಜಾನೆ 8.30ಕ್ಕೆ ಅಂತ್ಯಗೊಂಡ 24 ತಾಸುಗಳ ಅವಧಿಯಲ್ಲಿ ಕೊಡಗಿನ ಭಾಗಮಂಡಲದಲ್ಲಿ ರಾಜ್ಯದಲ್ಲಿಯೇ ಅಧಿಕವೆನಿಸಿದ 20 ಸೆಂ.ಮೀ.ಗಳಷ್ಟು ಭಾರೀ ಮಳೆ ಸುರಿದಿದ್ದು, ಕೊಡಗಿನಲ್ಲಿ ಇಂದು ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನಲ್ಲಿ ಮನೆಯ ಚಾವಣಿ ಕುಸಿದು ವ್ಯಕ್ತಿಯೊಬ್ಬ ಮೃತಪಟ್ಟಿದ್ದಾನೆ. ಖಾನಾಪುರ, ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕುಗಳಲ್ಲಿ ನೆರೆಗೆ ಸೇತುವೆಗಳು ಕೊಚ್ಚಿಹೋಗಿವೆ.
ಸತತ ಮಳೆಯಿಂದ ಜಲಾಶಯಗಳ ಒಳಹರಿವು ಹೆಚ್ಚಿದ್ದು, ಪ್ರಮುಖ ನದಿಗಳಾದ ಶರಾವತಿ, ನೇತ್ರಾವತಿ, ಕಾವೇರಿ, ಅಘನಾಶಿನಿ, ತುಂಗಾ, ಭದ್ರಾ, ಕುಮದ್ವತಿ, ದಂಡಾವತಿ ಮೈದುಂಬಿ ಹರಿಯುತ್ತಿವೆ. ರಭಸದ ಮಳೆಯ ಜೊತೆಗೆ ಗಾಳಿಯೂ ಬೀಸುತ್ತಿರುವ ಕಾರಣ ಹಲವೆಡೆ ವಿದ್ಯುತ್ ಕಂಬಗಳು ಮುರಿದಿವೆ. ಇದರಿಂದಾಗಿ ಗ್ರಾಮೀಣ ಭಾಗದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.
ಮಳೆಗೆ ಮನೆಯ ಚಾವಣಿ ಕುಸಿದು ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಸಾಲಹಳ್ಳಿ (ಗುಡಕಟ್ಟಿ) ಗ್ರಾಮದ ಸಂತೋಷ ಮುದಕಪ್ಪ ಮಸ್ಕಿ (31) ಎಂಬುವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಉತ್ತರ ಕನ್ನಡ ಜಿಲ್ಲೆ ಜೋಯಿಡಾ ತಾಲೂಕಿನ ಅಸು ಗ್ರಾಮದ ಚಾಂದೇವಾಡಿ ಸೇತುವೆ ಮುಳುಗಿದ್ದು, ಪಾಂಡ್ರಿ ನದಿ ಉಕ್ಕಿ ಹರಿಯುತ್ತಿದೆ. ಶಾಲಾ ಮಕ್ಕಳು ದೋಣಿ ಮೂಲಕ ನದಿ ದಾಟುವ ಸಂಕಷ್ಟ ಎದುರಿಸುತ್ತಿದ್ದಾರೆ. ರೆಸಾರ್ಟ್ಗಳ ರಿವರ್ ರಾಫ್ಟಿಂಗ್ ದೋಣಿಗಳನ್ನು ವಿದ್ಯಾರ್ಥಿಗಳ ಅನುಕೂಲಕ್ಕೆ ಬಳಸಿಕೊಳ್ಳಲಾಗಿದೆ. ಯಲ್ಲಾಪುರ ತಾಲೂಕಿನ ಆನಗೋಡ ಗ್ರಾ.ಪಂ ವ್ಯಾಪ್ತಿಯ ಸಾವಗದ್ದೆ ಸಮೀಪದ ಶೇಡಿಗಾಳಿ ಬಳಿ ಮಳೆ-ಗಾಳಿಗೆ ಕೈಗಾ ಹೈಟೆನ್ಶನ್ ವಿದ್ಯುತ್ ತಂತಿ ಹರಿದು ಬಿದ್ದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಸಿದ್ದಾಪುರ ತಾಲೂಕಿನ ಹಾರ್ಸಿಕಟ್ಟಾ ಸಮೀಪದ ಮಾಣಿಹೊಳೆ ಸೇತುವೆ ಮತ್ತಷ್ಟು ಕುಸಿದಿದೆ.
ಮಳೆಯಿಂದಾಗಿ ಶಿವಮೊಗ್ಗ-ಸಾಗರ ನಡುವಿನ ರಾಷ್ಟ್ರೀಯ ಹೆದ್ದಾರಿ 206ರ ತುಪ್ಪೂರು ಗ್ರಾಮದಲ್ಲಿ ಬೃಹದಾಕಾರದ ಮರ ಹೆದ್ದಾರಿ ಮೇಲೆ ಉರುಳಿ ಬಿದ್ದು, ಸುಮಾರು 1 ಗಂಟೆಗೂ ಅಧಿಕ ಕಾಲ ವಾಹನ ಸಂಚಾರ ಸ್ಥಗಿತಗೊಂಡಿತ್ತು.
ದಕ್ಷಿಣ ಕನ್ನಡ ಜಿಲ್ಲೆಯ ಸುಬ್ರಹ್ಮಣ್ಯ ಸಮೀಪದ ಕುಮಾರಧಾರಾ ಸ್ನಾನಘಟ್ಟ ಮುಳುಗಡೆಯಾಗಿದೆ. ಇಲ್ಲಿನ ಹಳೆ ಸೇತುವೆ ಹಾಗೂ ಸುಬ್ರಹ್ಮಣ್ಯ-ಪುತ್ತೂರು ರಸ್ತೆಯಲ್ಲಿರುವ ಇನ್ನೊಂದು ಸೇತುವೆ ಕೂಡಾ ಭಾರೀ ಮಳೆಯಿಂದಾಗಿ ಮುಳುಗಡೆಯಾಗಿದೆ. ಕೊಲ್ಲೂರು ಪರಿಸರದಲ್ಲಿ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಭಾಗಮಂಡಲದಲ್ಲಿ 20 ಸೆಂ.ಮೀ.ಗಳಷ್ಟು ಮಳೆಯಾಗಿದ್ದು, ಕೊಡಗಿನಲ್ಲಿ ಇಂದು ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಶಿರಾಡಿ ಘಾಟ್ನಲ್ಲಿ ಮಣ್ಣಿನ ಕುಸಿತ ಉಂಟಾಗಿದ್ದು, ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿದೆ.
ಕರಾವಳಿ ಭಾಗದಲ್ಲಿ ಶೇ.100ರಷ್ಟು ಮಳೆ:
ಕರಾವಳಿ ಭಾಗದಲ್ಲಿ ಶೇ.100ರಷ್ಟು ಮಳೆ ಆವರಿಸಿದ್ದರೆ, ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡು ಪ್ರದೇಶಗಳಲ್ಲಿ ತಲಾ ಶೇ.80ರಷ್ಟು ಮಳೆ ಆವರಿಸಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಗರಿಷ್ಠ 111.9 ಮಿ.ಮೀ, ಉತ್ತರ ಕನ್ನಡ 105.9 ಮಿ.ಮೀ, ದಕ್ಷಿಣ ಕನ್ನಡ 104.5 ಮಿ.ಮೀ, ಚಿಕ್ಕಮಗಳೂರು 99.1.ಮೀ., ಉಡುಪಿ 87.1 ಮಿ.ಮೀ, ಹಾಸನ 64.5 ಮಿ.ಮೀ, ಬೆಳಗಾವಿ 63 ಮಿ.ಮೀ ಮಳೆ ಬಿದ್ದಿದೆ. ಉಳಿದಂತೆ ಮೈಸೂರು, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮಂಡ್ಯ, ಚಾಮರಾಜನಗರ, ಚಿಕ್ಕಬಳ್ಳಾಪುರ, ಕೋಲಾರ, ಧಾರವಾಡ, ಹಾವೇರಿ, ಕಲಬುರಗಿ, ಬೀದರ್, ಯಾದಗಿರಿ, ಕೊಪ್ಪಳ, ಚಿತ್ರದುರ್ಗ,ವಿಜಯಪುರದಲ್ಲಿ ಸಾಧಾರಣ ಮಳೆ ಆಗಿದೆ.
ರಾಯಚೂರು ಜಿಲ್ಲೆಯಲ್ಲಿ ಅತಿ ಕಡಿಮೆ 1 ಮಿ.ಮೀ ಮಳೆ ಬಿದ್ದಿದೆ. ಮುಂದಿನ ಎರಡು ದಿನಗಳಲ್ಲಿ ಭಾರಿ ಮಳೆಯಾಗಲಿದ್ದು, ಈ ವಾರ ಮುಂಗಾರು ಮಳೆ ರಾಜ್ಯವ್ಯಾಪಿ ಚುರುಕಾಗಿರಲಿದೆ ಎಂದು ಹವಾಮಾನ ಇಲಾಖೆ ಮೂಲಗಳು ತಿಳಿಸಿವೆ.