ನಾಳೆಯಿಂದ ರಾಜ್ಯದಲ್ಲಿ ಮೋಡ ಬಿತ್ತನೆ ಆರಂಭ?
Team Udayavani, Aug 20, 2017, 6:10 AM IST
ಬೆಂಗಳೂರು: ಮೋಡ ಬಿತ್ತನೆಗೆ ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಆ.21ರಿಂದ (ಸೋಮವಾರ) ಬೆಂಗಳೂರಿನಲ್ಲಿ ಮೋಡ ಬಿತ್ತನೆ ಕಾರ್ಯಕ್ಕೆ ಚಾಲನೆ ಸಿಗಲಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್
ಇಲಾಖೆ ಮೂಲಗಳು ತಿಳಿಸಿವೆ.
ಮೊದಲು ಬೆಂಗಳೂರಿನಲ್ಲಿ ಮೋಡ ಬಿತ್ತನೆ ಆರಂಭಿಸಿ, 2-3 ದಿನಗಳ ನಂತರ ಸುರಪುರ ಹಾಗೂ ಗದಗದಲ್ಲಿ ಮೋಡ ಬಿತ್ತನೆಗೆ ಚಾಲನೆ ನೀಡಲಾಗುವುದು. ಈಗಾಗಲೇ ಬೆಂಗಳೂರಿನ ಜಿಕೆವಿಕೆಯಲ್ಲಿ ರೆಡಾರ್ ಸ್ಥಾಪನೆ ಕಾರ್ಯ ಮುಗಿದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
360 ಡಿಗ್ರಿ ರೆಡಿಯಸ್ನಲ್ಲಿ 200 ಕಿ.ಮೀ. ದೂರದಲ್ಲಿರುವ ಮೋಡ ಸಾಂದ್ರತೆಯ ತೀವ್ರತೆ ಹಾಗೂ ಮೋಡ ಬರುವಿಕೆ ಸಾಮರ್ಥಯವನ್ನು ರೆಡಾರ್ ಚಿತ್ರಗಳು ನಿಯಂತ್ರಣ ಕೊಠಡಿಯ ಕಂಪ್ಯೂಟರ್ಗೆ ತಲುಪುತ್ತವೆ. ಅಲ್ಲಿಂದ ವಿಎಚ್ ಎಫ್ ಸಂಪರ್ಕ ವಾಹಕದ ಮೂಲಕ ಮೋಡ ಬಿತ್ತನೆಯ ವಿಮಾನದ ಪೈಲೆಟ್ಗೆ ಸಂಕೇತಗಳನ್ನು ರವಾನಿಸಲಾಗುತ್ತದೆ. ತಾಂತ್ರಿಕ ತಂಡದ ಅನುಮತಿ ಬಳಿಕ ಮೋಡ ಬಿತ್ತನೆ ಮಾಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಳೆ ಕೊರತೆ ಹಿನ್ನೆಲೆಯಲ್ಲಿ ಸರ್ಕಾರ ಮೋಡ ಬಿತ್ತನೆಗೆ ನಿರ್ಧರಿಸಿ, ಇದರ ಹೊಣೆಯನ್ನು ಗ್ರಾಮೀಣಾಭಿವೃದ್ಧಿ ಇಲಾಖೆಗೆ ವಹಿಸಿತ್ತು. ಈ ನಿರ್ಧಾರಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಅದರ ನಡುವೆಯೂ ಆಗಸ್ಟ್ ಮೊದಲ ಅಥವಾ ಎರಡನೇ ವಾರದಲ್ಲಿ ಮೋಡ ಬಿತ್ತನೆಗೆ ತೀರ್ಮಾನಿಸಲಾಗಿತ್ತು. ಮೊದಲು ಆಗಸ್ಟ್ 7ಕ್ಕೆ ಮೋಡ ಬಿತ್ತನೆ ಆರಂಭವಾಗಲಿದೆ ಎಂದು ಹೇಳಲಾಗಿತ್ತು. ಆದರೆ, ನಂತರ ಆ.14 ಬಳಿಕ 18, ಮತ್ತೆ ಆ.20 ಎಂದು ಹೇಳಲಾಗಿತ್ತು. ಅಂತಿಮವಾಗಿ
ಆ.21ಕ್ಕೆ ಮೋಡ ಬಿತ್ತನೆ ಆರಂಭವಾಗುವ ವಿಶ್ವಾಸವನ್ನು ಗ್ರಾಮೀಣಾಭಿವೃದಿಟಛಿ ಇಲಾಖೆ ವ್ಯಕ್ತಪಡಿಸಿದೆ. ಇದರ ನಡುವೆಯೂ ಪರಿಸ್ಥಿತಿ ಆಧರಿಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾಜ್ಯದಲ್ಲಿ ಮಳೆಯ ಅಭಾವ ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಆಗಸ್ಟ್ 21 ರಂದು ಮೋಡ ಬಿತ್ತನೆ ಕಾರ್ಯ ನಡೆಯಲಿದೆ.
– ಸಿದ್ದರಾಮಯ್ಯ, ಮುಖ್ಯಮಂತ್ರಿ
ಅತಿವೃಷ್ಟಿ ಮುಂಜಾಗ್ರತಾ
ಕ್ರಮಕ್ಕೆ ಡಿಸಿಗಳಿಗೆ ಸೂಚನೆ
ಬೆಂಗಳೂರು: ರಾಜ್ಯದಲ್ಲಿ ಹವಾಮಾನ ವೈಪರೀತ್ಯದಿಂದ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಅತಿವೃಷ್ಟಿ ಹಾಗೂ ಪ್ರವಾಹದಿಂದ ಆಗುವ ಅನಾಹುತ ತಡೆಯಲು ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಜಿಲ್ಲಾಡಳಿತಗಳಿಗೆ ಕಂದಾಯ ಇಲಾಖೆ ಸೂಚನೆ ನೀಡಿದೆ. ಕೆಲವು ಜಿಲ್ಲೆಗಳಲ್ಲಿ ಅತಿವೃಷ್ಟಿಯಿಂದ ಜನ, ಜಾನುವಾರುಗಳಿಗೆ ತೊಂದರೆಯಾಗಿದ್ದು, ಬೆಳೆ ಹಾನಿಯಾಗಿರುವ ಬಗ್ಗೆ ವರದಿ ಬಂದಿವೆ. ಹೀಗಾಗಿ ಜಿಲ್ಲಾಡಳಿತ ಅತಿವೃಷ್ಟಿಗೊಳಗಾಗುವ ಪ್ರದೇಶಗಳನ್ನು ಗುರುತಿಸಿ, ಜನ ಜಾನುವಾರುಗಳನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಬೇಕು. ಪ್ರವಾಹಕ್ಕೆ ತುತ್ತಾಗಿರುವ ಜನರಿಗೆ ಸೂಕ್ತ
ವೈದ್ಯಕೀಯ ಚಿಕಿತ್ಸೆ, ಕುಡಿಯುವ ನೀರು, ಆಹಾರದ ವ್ಯವಸ್ಥೆ ಕಲ್ಪಿಸಬೇಕು ಎಂದು ಸೂಚಿಸಲಾಗಿದೆ.
ಪ್ರವಾಹ ಪೀಡಿತ ಪ್ರದೇಶದಲ್ಲಿ ಸಾಂಕ್ರಾಮಿಕ ರೋಗ ಹರಡದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳುವುದು. ಜಿಲ್ಲಾ
ಹಾಗೂ ತಾಲೂಕು ಮಟ್ಟದಲ್ಲಿ ಕಂಟ್ರೋಲ್ ರೂಂ ತೆರೆದು ದೂರುಗಳಿಗೆ ತಕ್ಷಣವೇ ಸ್ಪಂದಿಸುವುದು. ಪ್ರವಾಹದಲ್ಲಿ ಸಿಲುಕಿರುವ ಜನರ ರಕ್ಷಣೆಗೆ ತರಬೇತಿ ಹೊಂದಿದ ರಕ್ಷಣಾ ತಂಡ ಮತ್ತು ಸಾಮಗ್ರಿಗಳನ್ನು ಸಂಗ್ರಹಿಸಿಟ್ಟುಕೊಳ್ಳುವುದು. ಪ್ರತಿ ತಾಲೂಕಿಗೂ ಒಬ್ಬ ನೋಡಲ್ ಅಧಿಕಾರಿ ನೇಮಕ ಮಾಡಿಕೊಂಡು ಪ್ರವಾಹ ಪೀಡಿತ ಪ್ರದೇಶಗಳ ಸಮೀಕ್ಷೆ ನಡೆಸಿ, ಎನ್ಡಿಆರ್ಎಫ್ ನಿಯಮ ಪ್ರಕಾರ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ವರದಿ ನೀಡುವಂತೆ ಸೂಚಿಸಲಾಗಿದೆ.