ಚಾಮುಂಡಿ ದೇವಿಗೆ 31 ಕೆಜಿ ತೂಕದ 2 ಬೆಳ್ಳಿ ಆನೆ ಸಮರ್ಪಿಸಿದ ಡಿಕೆಶಿ
Team Udayavani, Sep 25, 2017, 1:58 PM IST
ಮೈಸೂರು/ಚಾಮರಾಜನಗರ: ಆದಾಯ ತೆರಿಗೆ ಅಧಿಕಾರಿಗಳ ದಾಳಿ ಬಳಿಕ ಇಂಧನ ಸಚಿವ ಡಿಕೆ ಶಿವಕುಮಾರ್ ಅವರು 2ನೇ ಬಾರಿಗೆ ಕುಟುಂಬ ಸಮೇತರಾಗಿ ಚಾಮುಂಡಿ ತಾಯಿಯ ದರ್ಶನ ಪಡೆದು, ದೇವಸ್ಥಾನಕ್ಕೆ 2 ಬೆಳ್ಳಿ ಆನೆಗಳನ್ನು ಕಾಣಿಕೆಯಾಗಿ ನೀಡುವ ಮೂಲಕ ಹರಕೆಯನ್ನು ತೀರಿಸಿದ್ದಾರೆ.
ಚಾಮುಂಡಿ ತಾಯಿಗೆ ವಿಶೇಷ ಪೂಜೆ ಸಲ್ಲಿಸಿದ ಡಿಕೆ ಶಿವಕುಮಾರ್ ಅವರು 31ಕೆಜಿ ತೂಕದ 2 ಬೆಳ್ಳಿ ಆನೆಗಳನ್ನು ಹರಕೆಯಾಗಿ ನೀಡಿದರು. ಭಾನುವಾರ ಡಿಕೆಶಿ ಅವರು ಕುಕ್ಕೆ ಸುಬ್ರಹ್ಮಣ್ಯದಲ್ಲಿ ತುಲಾಭಾರ ನೆರವೇರಿಸಿ ಹರಕೆ ತೀರಿಸಿದ್ದರು.
ಸೋಮವಾರ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದ್ದ ಡಿಕೆಶಿ ಅವರು ಸುದ್ದಿಗಾರರ ಜತೆ ಮಾತನಾಡಿ, ಈ ಹಿಂದೆ ನೀಡಿದ್ದ ಬೆಳ್ಳಿ ಆನೆ ಸರಿ ಇರಲಿಲ್ಲ, ಹೀಗಾಗಿ ಈಗ ಹೊಸ ಬೆಳ್ಳಿ ಆನೆ ನೀಡಿದ್ದೇನೆ. ನಾನು ಮನಸ್ಸಿನಲ್ಲಿ ಅಂದುಕೊಂಡಿದ್ದನ್ನು ದೇವಿ ನೆರವೇರಿಸಿದ್ದಾಳೆ ಎಂದು ಹೇಳಿದರು.