ಐಸಿಸ್ ಮಾಹಿತಿ ಪೊಲೀಸರಿಗೆ ನೀಡಲಿ : ಸಚಿವ ಖಾದರ್
Team Udayavani, Oct 6, 2017, 8:35 AM IST
ಕಾರವಾರ: ಐಸಿಸ್ ಸಂಘಟನೆ ಮಂಗಳೂರು, ಬಂಟ್ವಾಳ, ಬಿ.ಸಿ. ರೋಡ್ನಲ್ಲಿ ಕ್ರಿಯಾಶೀಲವಾದ ಮಾಹಿತಿ ವ್ಯಕ್ತಿಯೊಬ್ಬರಲ್ಲಿ ಇದ್ದರೆ ಅದನ್ನು ಮಾಧ್ಯಮಗಳಿಗೆ ಹೇಳುವ ಬದಲು ಪೊಲೀಸರಿಗೆ ತತ್ಕ್ಷಣ ಮಾಹಿತಿ ನೀಡಲಿ. ಎಲ್ಲೋ ಭಾಷಣ ಮಾಡಿದರೆ ಆಗದು. ದೇಶಪ್ರೇಮಿಯಾಗಿದ್ದರೆ ಮೊದಲು ಆ ಮಾಹಿತಿಯನ್ನು ರಾಜ್ಯ ಪೊಲೀಸರ ಜತೆ, ಕೇಂದ್ರ ಸರಕಾರದ ತನಿಖಾ ಏಜೆನ್ಸಿಗಳ ಜತೆ ಹಂಚಿಕೊಳ್ಳಲಿ ಎಂದು ಆಹಾರ ಸಚಿವ ಯು.ಟಿ. ಖಾದರ್ ಹೇಳಿದ್ದಾರೆ. ದೇಶ ವಿರೋಧಿ ಚಟುವಟಿಕೆಯಲ್ಲಿ ತೊಡಗಿದವರ ಮಾಹಿತಿಯನ್ನು ಮೊದಲು ಪೊಲೀಸರಿಗೆ, ಗುಪ್ತಚರ ಇಲಾಖೆಗೆ ನೀಡಬೇಕು. ನೀಡಿದ ಮಾಹಿತಿ ನಿಜವೇ ಆಗಿದ್ದಲ್ಲಿ ಆಗ ಮಾಹಿತಿ ನೀಡಿದವರನ್ನು ಸಮ್ಮಾನಿಸೋಣ. ದಕ್ಷಿಣ ಕನ್ನಡದಲ್ಲಿ ಜನರು ಸೌಹಾರ್ದವಾಗಿಯೇ ಇದ್ದಾರೆ.
ಭಾಷಣದಲ್ಲಿ ಹೇಳಿದ ವ್ಯಕ್ತಿಯ ಹಿನ್ನೆಲೆಯನ್ನೂ ಗಮನಿಸಬೇಕು. ಎಲ್ಲೋ ಭಾಷಣ ಮಾಡಿದ್ದನ್ನು ನಂಬಿ ಅನುಮಾನ, ಊಹಾಪೋಹಗಳನ್ನು ಇಟ್ಟುಕೊಂಡು ಬದುಕುವುದಲ್ಲ. ಹೇಳಿದವರು ಯಾಕೆ ಹೇಳಿದರು, ಎಲ್ಲಿ ಹೇಳಿದರು ಎಂಬುದೂ ಮುಖ್ಯವಾಗುತ್ತದೆ. ಸುಳ್ಳು ಮಾಹಿತಿ ಹರಡಿದರೆ, ಹಾಗೆ ಮಾಡುವವರನ್ನೇ ಮೊದಲು ತನಿಖೆಗೆ ಒಳಪಡಿಸಬೇಕಾಗುತ್ತದೆ ಎಂದು ತಿಳಿಸಿದ್ದಾರೆ.