ಹಿರಿತೆರೆಗೆ ಪ್ರೇರಣೆ
Team Udayavani, Mar 23, 2017, 6:14 PM IST
ಧಾರಾವಾಹಿಯಿಂದ ಸಿನಿಮಾಕ್ಕೆ ಅನೇಕ ನಟಿಯರಿಗೆ ಪ್ರಮೋಶನ್ ಸಿಕ್ಕಿದೆ. ಈ ಮೂಲಕ ಮುಂದೊಂದು ದಿನ ಸಿನಿಮಾ ನಟಿಯಾಗಬೇಕೆಂಬ ಕನಸು ಕಂಡ ಅದೆಷ್ಟೋ ನಟಿಯರ ಆಸೆ ಕೂಡಾ ಈಡೇರಿದೆ. ಈಗ ಆ ಸಾಲಿಗೆ ಹೊಸ ಸೇರ್ಪಡೆ ಪ್ರೇರಣಾ. ಯಾವ ಪ್ರೇರಣಾ ಎಂದರೆ ಈಗಷ್ಟೇ ಆರಂಭವಾಗಿರುವ “ಚೂರಿಕಟ್ಟೆ’ ಸಿನಿಮಾವನ್ನು ತೋರಿಸಬೇಕು. “ಚೂರಿಕಟ್ಟೆ’ ಚಿತ್ರಕ್ಕೆ ನಾಯಕಿಯಾಗುವ ಮೂಲಕ ಪ್ರೇರಣಾ ಈಗ ಚಿತ್ರರಂಗಕ್ಕೆ ಎಂಟ್ರಿಕೊಟ್ಟಿದ್ದಾರೆ.
ಅಂದಹಾಗೆ, ಪ್ರೇರಣಾಗೆ ಸಿನಿಮಾರಂಗ ಹೊಸದು. ಆದರೆ, ಬಣ್ಣದ ಲೋಕ ಹೊಸದಲ್ಲ. ಈಗಾಗಲೇ ಪ್ರೇರಣಾ “ನಾ ನಿನ್ನ ಬಿಡಲಾರೆ’ ಹಾಗೂ “ಹರ ಹರ ಮಹಾದೇವ’ ಧಾರಾವಾಹಿಯಲ್ಲಿ ನಟಿಸಿದ್ದಾರೆ. ಅಲ್ಲಿ ತನಗೆ ಸಿಕ್ಕ ಪಾತ್ರಗಳ ಮೂಲಕವೇ ತನ್ನ ಪ್ರತಿಭಾ ಪ್ರದರ್ಶನ ಮಾಡಿದ ಪ್ರೇರಣಾಗೆ ಈಗ ಸಿನಿಮಾದಲ್ಲಿ ಅವಕಾಶ ಸಿಕ್ಕಿದೆ. ನಿರ್ದೇಶಕ ರಾಘು ಪರ್ಫಾರ್ಮೆನ್ಸ್ಗೆ ಅವಕಾಶವಿರುವ ಪಾತ್ರ ಬರೆದು ನಾಯಕಿಗಾಗಿ ಹುಡುಕಾಟ ನಡೆಸುತ್ತಿದ್ದಾಗ ಕಣ್ಣಿಗೆ ಬಿದ್ದಿದ್ದು ಪ್ರೇರಣಾ. ಆಡಿಷನ್ನಲ್ಲಿ ಪಾಸಾದ ಪ್ರೇರಣಾ ಈಗ “ಚೂರಿಕಟ್ಟೆ’ಯಲ್ಲಿ ನಾಯಕಿ. ಚಿತ್ರದಲ್ಲಿ ಪ್ರೇರಣಾ ಕಾಲೇಜು ಹುಡುಗಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಕಾಲೇಜು ಹುಡುಗಿ ಎಂದಾಕ್ಷಣ ಕೇವಲ ಮರಸುತ್ತುವ ಪಾತ್ರವೇ ಎಂದು ನೀವು ಕೇಳುವಂತಿಲ್ಲ. “ಚೂರಿಕಟ್ಟೆ’ಯಲ್ಲಿನ ಪ್ರೇರಣಾ ಪಾತ್ರ ಕೇವಲ ಮರ ಸುತ್ತುವುದಿಲ್ಲ. ಮರ ಉಳಿಸುವಲ್ಲಿಯೂ ಪ್ರಮುಖ ಪಾತ್ರ ವಹಿಸುತ್ತದೆ. ಏಕೆಂದರೆ, ಇದು ಟಿಂಬರ್ ಮಾಫಿಯಾ ಕುರಿತಾದ ಸಿನಿಮಾ. “ಇಲ್ಲಿ ನಾಯಕಿಯ ಪಾತ್ರಕ್ಕೆ ಮಹತ್ವವಿದೆ. ತುಂಬಾ ಚೆನ್ನಾಗಿ ನಟಿಸುವಂತಹ, ಪಾತ್ರಕ್ಕೆ ನ್ಯಾಯ ಒದಗಿಸುವಂತಹ ನಾಯಕಿಯನ್ನು ಹುಡುಕುತ್ತಿದ್ದಾಗ ನಮಗೆ ಪ್ರೇರಣಾ ಸಿಕ್ಕಿದ್ದಾರೆ. ಚೆನ್ನಾಗಿ ನಟಿಸುತ್ತಿದ್ದಾರೆ. ಮುಂದೆ ಒಳ್ಳೆಯ ನಟಿಯಾಗುವ ಎಲ್ಲಾ ಲಕ್ಷಣ ಅವರಿಗಿದೆ’ ಎನ್ನುವುದು ನಿರ್ದೇಶಕ ರಾಘು ಶಿವಮೊಗ್ಗ ಮಾತು.
– ರವಿ ರೈ