ಒಳ್ಳೆಯವರ ಕಧೆ; ಮಳೆಗಾಗಿ ಒಂದು ವರ್ಷ ಕಾದ
Team Udayavani, Jun 23, 2017, 12:13 PM IST
ಈ ಚಿತ್ರದ ಮೇಲೆ ಕೋಟಿ ಕನಸು ಕಟ್ಟಿಕೊಂಡಿದ್ದೇನೆ. ನನಗೀಗ ಭಯ ಮತ್ತು ಖುಷಿ ಎರಡೂ ಆಗುತ್ತಿದೆ. ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ. ಚೆನ್ನಾಗಿದ್ದರೆ ಜನ ಮೆಚ್ಚಲಿ, ಇಲ್ಲವಾದರೆ ಬಿಡಲಿ…’
– ಹೀಗೆ ಹೇಳಿ ಹಾಗೊಂದು ನಗೆ ಬೀರಿದರು “ನಾನೊಬ್ನೆ ಒಳ್ಳೆಯವನು’ ನಿರ್ದೇಶಕ ಕಮ್ ನಟ ವಿಜಯ್ ಮಹೇಶ್. ಮತ್ತೆ ಮಾತು ಮುಂದುವರೆಸಿದರು. “ಚಿತ್ರ ತಡವಾಗಿದೆ. ಕಾರಣ ಮಳೆ. ಒರಿಜಿನಲ್ ಮಳೆಗಾಗಿಯೇ ಕಾದು ಸಿನಿಮಾ ಮಾಡಿದ್ದೇನೆ. ಮಳೆ ಎಫೆಕ್ಟ್ನಲ್ಲೇ ಸಾಂಗ್ ಮಾಡಲು ಅಣಿಯಾಗಿದ್ದಾಗ, ಮಳೆ ಬರಲಿಲ್ಲ. ಕೊನೆಗೆ ಇನ್ನೊಂದು ಮಳೆಗಾಲಕ್ಕೆ ಕಾದು ಸಾಂಗ್ ಮಾಡಲಾಗಿದೆ. ಇಲ್ಲಿ ಎಲ್ಲರೂ ಒಳ್ಳೇವೆ. ಸಿನಿಮಾ ನೋಡಿದ ಮೇಲೆ ಒಂದಷ್ಟು ಬದಲಾವಣೆ ಆಗುತ್ತೆ ಹೊರತು, ಯಾವುದೇ ಕೆಡಕಾಗುವುದಿಲ್ಲ ಎಂಬ ಭರವಸೆ ಕೊಟ್ಟರು ವಿಜಯ್ ಮಹೇಶ್.ನಾಯಕಿ ಸೌಜನ್ಯಗೆ ಈ ಚಿತ್ರದಲ್ಲಿ ಅವಕಾಶ ಸಿಕ್ಕಿದ್ದೇ ಅಚ್ಚರಿಯಂತೆ. “ಪಾತ್ರಕ್ಕೆ ನೂರು ಜನರ ಆಡಿಷನ್ ಆಗಿತ್ತು. ಆದರೆ, ನನ್ನ ನೋಡಿಮೇಲೆ ಆಡಿಷನ್ ಕೈ ಬಿಟ್ಟು, ಸೈನ್ ಮಾಡಿಸಿಕೊಂಡು ಫಿಕ್ಸ್ ಮಾಡಿಬಿಟ್ಟರು’ ಅಂತ ಖುಷಿಯಿಂದ ಹೇಳಿಕೊಂಡರು ಸೌಜನ್ಯ. “ಇದು ಹೊಸ ಅನುಭವ ಕೊಟ್ಟಿದೆ. ನಾಯಕಿ ಅಂದರೆ ಕೇವಲ ಗ್ಲಾಮರ್ಗೆ, ಮರಸುತ್ತೋಕೆ ಸೀಮಿತ ಎಂಬ ಮಾತಿದೆ. ಆದರೆ, ಇಲ್ಲಿ ಬೇರೆ ರೀತಿಯದ್ದೇ ಪಾತ್ರ ಸಿಕ್ಕಿದೆ’ ಅಂದರು ಸೌಜನ್ಯ. ರವಿತೇಜ ಕೂಡ ನಾಯಕರಾಗಿ ನಟಿಸಿದ್ದಾರಂತೆ. “ಪಾರ್ವತಿ ಪರಮೇಶ್ವರ’ ಧಾರಾವಾಹಿ ವೇಳೆಯೇ ಅವಕಾಶ ಬಂದಿದ್ದಾಗ, ಕಥೆ ಸೆಳೆದಿದ್ದರಿಂದ ಒಪ್ಪಿ, ನಟಿಸಿದ್ದಾಗಿ ಹೇಳಿದರು. “ಟೈಟಲ್ ಕೇಳಿದಾಗ, ಏನೋ ಅನಿಸಬಹುದು.
ಆದರೆ, ಪ್ರತಿಯೊಬ್ಬರ ಲೈಫ್ಗೂ ಹತ್ತಿರವಾಗುವ ವಿಷಯ ಇಲ್ಲಿದೆ’ ಅಂದರು ರವಿತೇಜ. ಆ್ಯನಿ ಪ್ರಿನ್ಸಿ ಎಂಬ ಮತ್ತೂಬ್ಬ ನಾಯಕಿಗೆ ಈ ಚಿತ್ರದ ಮೇಲೆ ಎಲ್ಲಿಲ್ಲದ ವಿಶ್ವಾಸ. “ಸಿಕ್ಕ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದೇನೆ. ಕನ್ನಡ ಭಾಷೆ ಗೊತ್ತಿಲ್ಲ. ಆದರೆ, ಸಿನಿಮಾ ಮುಗಿಯೋ ಹೊತ್ತಿಗೆ ಕನ್ನಡ ಸ್ವಲ್ಪ ತಿಳಿದುಕೊಂಡೆ. ಇಲ್ಲಿ ಗಟ್ಟಿನೆಲೆ ಕಾಣುವ ನಂಬಿಕೆ ನನಗಿದೆ’ ಎಂದರು ಆ್ಯನಿಪ್ರಿನ್ಸಿ. ಸುಧೀರ್ ಶಾಸಿŒ ಅವರಿಗೆ ಇದು ಮೊದಲ ಸಂಗೀತ ನಿರ್ದೇಶನದ ಚಿತ್ರವಂತೆ. ಅವರಿಲ್ಲಿ, ಸುಮಾರು 75 ವರ್ಷದ ಮುದುಕನ ಪಾತ್ರ ಮಾಡಿದ್ದಾಗಿ ಹೇಳಿಕೊಂಡರು. ಟಿ.ಎಂ.ಬಸವರಾಜ್ ಚಿತ್ರದ ನಿರ್ಮಾಣ
ಮಾಡಿದ್ದಾರೆ. ವಿಲಿಯಂ ಡೇವಿಡ್ ಕ್ಯಾಮೆರಾ ಹಿಡಿದಿದ್ದಾರೆ.