ಅಧ್ಯಕ್ಷನ ಸಮ್ಮುಖದಲ್ಲಿ ಒಂದಾದ ರಾಜ್-ವಿಷ್ಣು
Team Udayavani, Jul 21, 2017, 5:20 AM IST
ಅಧ್ಯಕ್ಷ’ ಚಿತ್ರದ ಮೈಸೂರು ವಿತರಣೆಯ ಹಕ್ಕನ್ನು ನಿರ್ಮಾಪಕ ರಾಮು ಪಡೆದಿದ್ದರಂತೆ. ಆ ಚಿತ್ರದ ಕಲೆಕ್ಷನ್ ನೋಡಿ ಅವರಿಗೆ ಆಶ್ಚರ್ಯವಾಯಿತಂತೆ. ಆ ಮಟ್ಟಕ್ಕೆ ಜನ ಶರಣ್ ಹಾಗೂ ಚಿಕ್ಕಣ್ಣ ಅವರ ಕಾಂಬಿನೇಶನ್ ಅನ್ನು ಇಷ್ಟಪಟ್ಟಿದ್ದರಂತೆ. ಆಗಲೇ ರಾಮು ತಲೆಯಲ್ಲಿ ಅವರಿಬ್ಬರನ್ನು ಹಾಕಿಕೊಂಡು ಸಿನಿಮಾ ಮಾಡುವ ಆಲೋಚನೆ ಬಂದಿದ್ದು. ಶರಣ್ ಹಾಗೂ ಚಿಕ್ಕಣ್ಣ ಅವರಿಗೆ ಹೊಂದುವಂತಹ ಕಥೆಗಾಗಿ ಎದುರು ನೋಡುತ್ತಿದ್ದಾಗ ರಾಮು ಅವರ ಕಣ್ಣಿಗೆ ಬಿದ್ದಿದ್ದು ತಮಿಳಿನ “ರಜನಿ ಮುರುಗನ್’ ಚಿತ್ರ. ಈ ಚಿತ್ರ ಶರಣ್ ಹಾಗೂ ಚಿಕ್ಕಣ್ಣ ಅವರಿಗೆ ಹೊಂದುತ್ತದೆಂದು ರೈಟ್ಸ್ ತಗೊಂಡ ರಾಮು ಈಗ ಸಿನಿಮಾ ಮಾಡಿಯೇ ಬಿಟ್ಟಿದ್ದಾರೆ. ಅದೇ “ರಾಜ್-ವಿಷ್ಣು’.
ಸುಮಾರು ಮೂರು ವರ್ಷಗಳ ನಂತರ ಶರಣ್ ಹಾಗೂ ಚಿಕ್ಕಣ್ಣ ಕಾಂಬಿನೇಶನ್ನಲ್ಲಿ ಬರುತ್ತಿರುವ ಈ ಚಿತ್ರ ಆಗಸ್ಟ್ 4
ರಂದು ತೆರೆಕಾಣುತ್ತಿದೆ.
“ಅಧ್ಯಕ್ಷ ಚಿತ್ರದ ಕಲೆಕ್ಷನ್ ನೋಡಿ ನನಗೆ ಆಶ್ಚರ್ಯವಾಯಿತು. ಆ ಚಿತ್ರ ತುಂಬಾ ಚೆನ್ನಾಗಿ ಕಲೆಕ್ಷನ್ ಮಾಡಿತು. ಈಗ “ರಾಜ್ ವಿಷ್ಣು’ ಚಿತ್ರವನ್ನು ಕೂಡಾ ಇಷ್ಟಪಡುತ್ತಾರೆಂಬ ವಿಶ್ವಾಸವಿದೆ. ಮೂಲ ಚಿತ್ರದ ಒಂದೆಳೆಯನ್ನಷ್ಟೇ ತಗೊಂಡು, ಉಳಿದಂತೆ ಸಂಪೂರ್ಣವಾಗಿ ಬದಲಾಯಿಸಿಕೊಂಡಿದ್ದೇವೆ.
ಸ್ವಮೇಕ್ ಸಿನಿಮಾಕ್ಕೆ ಯಾವ ರೀತಿ ಸ್ಕ್ರಿಪ್ಟ್ ಕೆಲಸ ನಡೆಯುತ್ತೋ ಅದೇ ರೀತಿ ಎಲ್ಲಾ ತಯಾರಿ ಮಾಡಿಕೊಂಡು
ಆ ನಂತರ ಚಿತ್ರೀಕರಣ ಆರಂಭಿಸಿದ್ದು’ ಎಂದು ಚಿತ್ರದ ಬಗ್ಗೆ ಹೇಳಿಕೊಂಡರು ರಾಮು. ಅಂದಹಾಗೆ, ಇದು ರಾಮು ಅವರ ಬ್ಯಾನರ್ನಲ್ಲಿ ತಯಾರಾಗುತ್ತಿರುವ 37ನೇ ಚಿತ್ರ. “ರಾಜ್ ವಿಷ್ಣು’ ಚಿತ್ರವನ್ನು ಮಾದೇಶ ನಿರ್ದೇಶಿಸಿದ್ದಾರೆ. ಈಗಾಗಲೇ ಹಲವು ರೀಮೇಕ್ ಸಿನಿಮಾಗಳನ್ನು ನಿರ್ದೇಶಿಸಿರುವ ಮಾದೇಶ ಅಕೌಂಟ್ಗೆ ಇದು ಮತ್ತೂಂದು ರೀಮೇಕ್ ಸಿನಿಮಾ. ಎಂದಿನಂತೆ ಮಾದೇಶ ಅವರು ಚಿತ್ರದ ಬಗ್ಗೆ ಹೆಚ್ಚೇನು ಮಾತನಾಡಲಿಲ್ಲ. “ಸಿನಿಮಾ ಚೆನ್ನಾಗಿ ಬಂದಿದೆ, ಬೆಂಬಲಿಸಿ’ ಎಂದಷ್ಟೇ ಹೇಳಿದರು. ನಾಯಕ ಶರಣ್ ಅವರಿಗೆ “ಅಧ್ಯಕ್ಷ’ ನಂತರ ಎಲ್ಲೇ ಹೋದರೂ “ನಿಮ್ಮ ಹಾಗೂ ಚಿಕ್ಕಣ್ಣ ಕಾಂಬಿನೇಶನ್ ಸಿನಿಮಾ ಮತ್ತೆ ಯಾವಾಗ’ ಎಂದು ಕೇಳುತ್ತಿದ್ದರಂತೆ. ಅದಕ್ಕೆ ಸರಿಯಾಗಿ ಈಗ “ರಾಜ್-ವಿಷ್ಣು’ ತಯಾರಾಗಿದೆ. “ನಾನು ಚಿತ್ರರಂಗಕ್ಕೆ ಬಂದು ಇಷ್ಟು ವರ್ಷವಾದರೂ ರಾಮು ಅವರ ಬ್ಯಾನರ್ನಲ್ಲಿ ನಾನು ನಟಿಸಿರಲಿಲ್ಲ. ಈಗ ನಟಿಸುವ ಅವಕಾಶ ಸಿಕ್ಕಿದೆ.
ಸಹಜವಾಗಿಯೇ ಜವಾಬ್ದಾರಿ ಜಾಸ್ತಿ ಇದೆ. ನಮ್ಮಿಬ್ಬರ ಕಾಂಬಿನೇಶನ್ನ “ಅಧ್ಯಕ್ಷ’ ಹಿಟ್ ಆಗಿರುವುದರಿಂದ ಈಗ ಈ
ಸಿನಿಮಾದ ನಿರೀಕ್ಷೆ ಹೆಚ್ಚಿದೆ. ಟ್ರೇಲರ್ ಕೂಡಾ ದೊಡ್ಡ ಹಿಟ್ ಆಗಿದೆ. ಸಿನಿಮಾವನ್ನು ಜನ ಇಷ್ಟಪಡುತ್ತಾರೆಂಬ ವಿಶ್ವಾಸವಿದೆ’ ಎನ್ನುವುದು ಶರಣ್ ಮಾತು.
ಚಿಕ್ಕಣ್ಣ ಕೂಡಾ “ಅಧ್ಯಕ್ಷ’ ನಂತರ ಮತ್ತೆ ಶರಣ್ ಜೊತೆ ನಟಿಸುತ್ತಿರುವ ಖುಷಿ ಹಂಚಿಕೊಂಡರು. ಚಿತ್ರದಲ್ಲಿ
ವೈಭವಿ ಶಾಂಡಿಲ್ಯ ನಾಯಕಿ. ಕನ್ನಡದಲ್ಲಿ ನಟಿಸುತ್ತಿರುವ ಮೊದಲ ಚಿತ್ರವೇ ದೊಡ್ಡ ಬ್ಯಾನರ್ನಲ್ಲಿ ಸಿಕ್ಕಿರುವುದರಿಂದ
ಖುಷಿಯಾಗಿದ್ದಾರಂತೆ. ಎಲ್ಲರಿಗೂ ಇಷ್ಟವಾಗುವಂತಹ ಪಾತ್ರ ಸಿಕ್ಕಿದೆ ಎನ್ನುವುದು ಅವರ ಮಾತು. ಚಿತ್ರದಲ್ಲಿ ಲೋಕಿ
ವಿಲನ್ ಆಗಿ ನಟಿಸಿದ್ದಾರಂತೆ. ತುಂಬಾ ಸೆಟಲ್ಡ್ ಆದ ಪಾತ್ರ ಸಿಕ್ಕ ಖುಷಿ ಅವರದು.