ಉದ್ಯೋಗ ಕತ್ತರಿಗೆ ಯೋಜನೆ
Team Udayavani, Oct 2, 2017, 5:18 PM IST
80ರ ದಶಕದ ಮಾತು. ಸಾಂಪ್ರದಾಯಿಕ ಹೊಟೇಲ್ಗಳ ಎದುರು ಆಗ ದರ್ಶಿನಿಗಳು ನಿಧಾನವಾಗಿ ತಲೆ ಎತ್ತಿದವು. ಇನ್ಫ್ಯಾಕ್ಟ್, ಜನಪ್ರಿಯತೆ ಗಳಿಸಿದವು. 10-30 ಅಡಿ ವ್ಯಾಪ್ತಿಯ ಒಂದು ಜಾಗದಲ್ಲಿ ಎದ್ದು ನಿಂತ ಇಂತಹ ಹೊಟೇಲ್ನಲ್ಲಿ ಕಣ್ಣೆದುರಿನಲ್ಲಿಯೇ ಅಡುಗೆ ತಯಾರಾಗುತ್ತಿರುತ್ತದೆ. ಗ್ರಾಹಕ ಕುಕಿಂಗ್ ಕೌಂಟರ್ನಲ್ಲಿಯೇ ಹಣ ತೆತ್ತು ತನ್ನ ಆರ್ಡರ್ ಅನ್ನು ಪಡೆದುಕೊಳ್ಳಬೇಕು. ಚಿಕ್ಕ ಲಾಂಜ್ನಲ್ಲಿ ಹಾಕಿದ ರ್ಯಾಕ್ನ ಮೇಲೆ ತಿಂಡಿ ಇಟ್ಟುಕೊಂಡು ನಿಂತೇ ತಿಂದು ಮುಗಿಸಬೇಕು. ಸೆಲ್ಫ್ ಸರ್ವೀಸ್ ಎಂಬ ವರ್ಣನೆಯ ಜತೆ ಬಂದ ಇಂತಹ ದರ್ಶಿನಿಗಳು ಆಹಾರ ಒದಗಿಸುವಲ್ಲಿ ವಿಳಂಬ ಮಾಡದಿದ್ದುದೇ ಎದ್ದು ಬಿದ್ದು ತಿಂಡಿ ಮುಗಿಸಿ ಕೆಲಸಕ್ಕೆ, ಮನೆಗೆ ತೆರಳುವವರಿಗೆ ಆಕರ್ಷಕ ಎನಿಸಿತ್ತು. ಹೊಟೇಲ್ ಮಾಣಿ, ಕ್ಯಾರಿಯರ್, ಟೇಬಲ್ ಕ್ಲೀನರ್ ತರಹದ ವ್ಯವಸ್ಥೆಗಳಿಗೆ ಕೊಕ್ ನೀಡಿದ್ದರಿಂದ ಇಲ್ಲಿನ ತಿನಿಸುಗಳು ಕೂಡ ಸ್ವಲ್ಪ ಸಸ್ತಾ ಎನ್ನಿಸಿದ್ದವು.
ಕತ್ತರಿ ಯೋಜನೆಗೆ ಡಿಜಿಟಲ್ ವೇಷ!
ಇನ್ನೊಂದು ಮಗ್ಗುಲಿನಿಂದ ನೋಡಿದರೆ, ಇದು ಉದ್ಯೋಗ ಕತ್ತರಿ ಯೋಜನೆ ! ಹೊಟೇಲ್ ಉದ್ಯಮದ ಸ್ವರೂಪವನ್ನೇ ಬದಲಿಸಿ ಸಾವಿರಾರು ಜನರ ಕೆಲಸಕ್ಕೆ ಕಲ್ಲು ಹಾಕಿದ್ದು ಒಂದೆಡೆಯಾದರೆ, ಗ್ರಾಹಕನಿಂದಲೇ ಸೇವೆ ತೆಗೆದುಕೊಳ್ಳುವಂತೆ ಮಾಡಿ ಅವನಿಂದ ಹಣ ಪೀಕಿಸಿಕೊಂಡದ್ದೂ ವಾಸ್ತವವೇ. ಇಂಥದ್ದೇ ಚಿತ್ರಣವನ್ನು ಈಗ ಬ್ಯಾಂಕ್ಗಳಲ್ಲಿ ನೋಡಬಹುದು.
ಪಾಸ್ಬುಕ್ ಮುದ್ರಣಕ್ಕೆ ಈಗ ಕಿಯೋಸ್ಕ್ಗಳು ಬಂದಿವೆ. ಬ್ಯಾಂಕ್ ಖಾತೆದಾರ ತನ್ನ ಪಾಸ್ಬುಕ್ ಅನ್ನು ಇದರೊಳಗೆ ತೂರಿ ಪಾಸ್ಬುಕ್ ಅಪ್ಡೇಟ್ ಮಾಡಿಕೊಳ್ಳಬೇಕು. ತನ್ನ ಖಾತೆಗೆ ಹಣ ತುಂಬಲು ಕೂಡ ಯಂತ್ರ ಬಂದಿದೆ. ಹಣ ಕೊಡುವುದಕ್ಕಂತೂ ಎಟಿಎಂ ಬಂದು ದಶಕಗಳೇ ಕಳೆದಿವೆ. ಮುಂಚಿನಂತೆ ನಗದೀಕರಣಕ್ಕೆ ಸಲ್ಲಿಸುವ ಚೆಕ್ಗಳನ್ನು ಕೌಂಟರ್ನಲ್ಲಿರುವ ಅಧಿಕಾರಿಗೆ ಕೊಡುವ ಪದ್ಧತಿ ಇಲ್ಲ.
ಇಲ್ಲೂ ಗ್ರಾಹಕನಿಂದಲೇ ಕೆಲಸ ಮಾಡಿಸಿ ನಾವು ಸೇವೆ ಕೊಟ್ಟಿದ್ದೇವೆ ಎಂದು ಬ್ಯಾಂಕ್ಗಳು ಬೀಗುವ ವಾತಾವರಣ ಸೃಷ್ಟಿಯಾಗಿದೆ. ಇದೇ ವೇಳೆ ಸಾವಿರಾರು ಸಂಖ್ಯೆಯಲ್ಲಿ ಬ್ಯಾಂಕ್ ಉದ್ಯೋಗಿಗಳ ಸಂಖ್ಯೆ ಕಡಿತಗೊಳ್ಳುತ್ತಿದೆ. ಮತ್ತೂಮ್ಮೆ ಗಣಿತ ಸೋಲುತ್ತಿದೆ. ಮೋದಿ ಮಂತ್ರದ ಪ್ರಕಾರ, ದೇಶದ ಕೊನೆಯ ನಾಗರಿಕ ಕೂಡ ಬ್ಯಾಂಕಿಂಗ್, ಕಾಗದದ ನೋಟುಗಳ ಮೂಲಕ ವ್ಯವಹಾರ ಮಾಡುವುದು ನಿಲ್ಲಬೇಕು. ಈ ನೀತಿಯಿಂದಾಗಿ ಬ್ಯಾಂಕ್ ಗ್ರಾಹಕರ ಸಂಖ್ಯೆ ಹೆಚ್ಚುತ್ತಿದೆ. ಗಣಿತ ನಿಯಮದ ಪ್ರಕಾರ, ಬ್ಯಾಂಕ್ ಉದ್ಯೋಗಿಗಳ ಸಂಖ್ಯೆ ಅನುಪಾತ ಸ್ವರೂಪವಾಗಿ ಹೆಚ್ಚಬೇಕು. ಆಗುತ್ತಿರುವುದು ಸಂಪೂರ್ಣ ಭಿನ್ನ. ಬ್ಯಾಂಕಿಂಗ್ ತಜ್ಞರ ಪ್ರಕಾರ, ಮುಂದಿನ ಐದು ವರ್ಷಗಳಲ್ಲಿ ಶೇ. 30ರಷ್ಟು ಬ್ಯಾಂಕಿಂಗ್ ಉದ್ಯೋಗಗಳ ಸಂಖ್ಯೆ ಕಣ್ಮರೆಯಾಗಲಿದೆ. ಬ್ಯಾಂಕ್ಗಳು ಉದ್ಯೋಗಾವಕಾಶಗಳನ್ನು ಸೃಷ್ಟಿಸಿ ಆಸಕ್ತ ಅರ್ಹರನ್ನು ಆಹ್ವಾನಿಸಿಯೂ ಆ ಸ್ಥಾನ ಭರ್ತಿಗೆ ಜನ ಸಿಗದಿದ್ದರೆ ಅದನ್ನು ಖಾಲಿ ಇರುವ ಸ್ಥಾನಗಳು ಎಂದು ಗುರುತಿಸಲಾಗುತ್ತಿತ್ತು. ಆದರೆ ಆಟೋಮ್ಯಾಟಿಕ್ ತಂತ್ರಜ್ಞಾನದ ಅಳವಡಿಕೆಯ ಅನಂತರ ಬ್ಯಾಂಕ್ ಗಳೇ ಪ್ರಜ್ಞಾಪೂರ್ವಕವಾಗಿ ಈ ಹುದ್ದೆಗಳನ್ನೇ ಕೈಬಿಡುವುದರಿಂದ ಕಣ್ಮರೆ ಎಂಬ ಪದ ಬಳಕೆಯೇ ಸೂಕ್ತ.
ತಳಕ್ಕೆ ಮಾತ್ರ ಬೆಂಕಿ!
ಈ ತಂತ್ರಜ್ಞಾನದ ನೇರ ಪರಿಣಾಮ ಬ್ಯಾಂಕ್ಗಳ ಕೆಳ ಹಂತದ ಉದ್ಯೋಗಾವಕಾಶವನ್ನೇ ಹೆಚ್ಚು ಪ್ರಭಾವಿಸುತ್ತದೆ. ಮುಂದಿನ ಮೂರು ವರ್ಷಗಳಲ್ಲಿ ಬ್ಯಾಂಕ್ ಎಂಬುದು ಎಂದಿನ ಹಣ ತುಂಬುವ, ತೆಗೆಯುವ, ದೃಶ್ಯವೇ ಇಲ್ಲದ ವ್ಯವಸ್ಥೆ ಆಗಿಬಿಡಬಹುದು. ಆಕ್ಸಿಸ್ನಂಥ ಖಾಸಗಿ ಬ್ಯಾಂಕ್ ದೇಶಾದ್ಯಂತ ಒಂದೂವರೆ ಸಾವಿರಕ್ಕೂ ಹೆಚ್ಚು ಹಣ ತುಂಬುವ ಮಿಷನ್ಗಳನ್ನು ಅಳವಡಿಸಿಕೊಂಡಿದೆ. ಆನ್ಲೈನ್ ವ್ಯವಸ್ಥೆಯ ಕಾರಣ ಡಿಜಿಟಲ್ ಆಗಿಯೇ ಈ ಬ್ಯಾಂಕ್ನ ಶೇ. 75ರಷ್ಟು ಜನ ಚೆಕ್ಬುಕ್ ಬೇಡಿಕೆಯ ಸೌಲಭ್ಯವನ್ನು ಪೂರೈಸಿಕೊಳ್ಳುತ್ತಾರೆ. ಐಸಿಐಸಿಐ, ಎಚ್ಡಿಎಫ್ಸಿ ತರಹದ ಖಾಸಗಿ ಬ್ಯಾಂಕ್ಗಳು ಮಾನವ ಆಧಾರಿತ ಬ್ಯಾಂಕಿಂಗ್ನಿಂದ ದೂರ ಹೋಗುತ್ತಿವೆ. ಒಂದರ್ಥದಲ್ಲಿ ತಾಂತ್ರಿಕತೆ ಗ್ರಾಹಕನೇ ಹೆಚ್ಚು ಕೆಲಸವನ್ನು ಮಾಡಿಕೊಳ್ಳುವಂತೆ ಉಪಾಯ ಹೂಡಿದೆ.
ಮುಂದೊಂದು ದಿನ ಬ್ಯಾಂಕ್ನಲ್ಲಿ ಹಣ ಕಟ್ಟಿದರೆ, ತೆಗೆದರೆ ಅಥವಾ ಪಾಸ್ಬುಕ್ನಲ್ಲಿ ಎಂಟ್ರಿ ಮಾಡಿದರೆ ಶುಲ್ಕ. ಅದರ ಬದಲು ಯಂತ್ರಗಳನ್ನು ಜನ ಕಡ್ಡಾಯವಾಗಿ ಬಳಸುವಂತಾಗಬೇಕು ಎಂಬುದು ಎಟಿಎಂ ಕಾರ್ಡ್ಗಳ ಜನನ ಸಮಯದಲ್ಲಿ ಪ್ರತಿಪಾದನೆಯಾಗುತ್ತಿತ್ತು. ಈಗ ಬ್ಯಾಂಕ್ ಒಳಗೆ ನಿಗದಿತ ನಗದಿ ವ್ಯವಹಾರದ ಅನಂತರ ಶುಲ್ಕ ಜಾರಿಗೆ ಬಂದು ಮೊದಲ ಮಾತನ್ನು ನಿಜವಾಗಿಸಿದೆ. ಇದರ ಜತೆಗೆ ಎಟಿಎಂ ಬಳಕೆಯನ್ನೂ ದುಬಾರಿಯಾಗಿಸಿದೆ. ಕಳೆದ ಮೂರು ತಿಂಗಳಲ್ಲಿ ಮಿನಿಮಮ್ ಬಾಲನ್ಸ್ ಚೆಕ್ ಶುಲ್ಕ, ಅಕೌಂಟ್ ಕ್ಲೋಸರ್ ಫೀ ತರಹದ ಅಸ್ತ್ರ ಬಳಸಿ ಎಸ್ಬಿಐ ಗ್ರಾಹಕರಿಂದ 250 ಪ್ಲಸ್ ಕೋಟಿ ರೂ. ದಂಡ ಪೀಕಿದೆ. ಉಳಿದ ಖಾಸಗಿ ಬ್ಯಾಂಕ್ಗಳು ನಮಗಿಂತ ಜಾಸ್ತಿ ದಂಡ ಶುಲ್ಕ ದರವನ್ನು ಹೊಂದಿವೆ ಎಂಬ ಷರಾ ಕೂಡ ಅದರದ್ದು. ಈ ಹಿನ್ನೆಲೆಯಲ್ಲಿ ಬ್ಯಾಂಕಿಂಗ್ ಶುಲ್ಕದ ವಿರುದ್ಧ ಜನಾಂದೋಲನವೊಂದು ಹುಟ್ಟಬೇಕಾಗಿದೆ. ಆರು ಲಕ್ಷ ಕೋಟಿಯ ಎನ್ಪಿಎ ಭಾರವನ್ನು ಸಾಮಾನ್ಯ ಗ್ರಾಹಕ ಯಾಕಾದರೂ ಹೊರಬೇಕು?
ಎಂ.ವಿ.ಎಸ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ