ವೆನ್ಲಾಕ್ ಆಸ್ಪತ್ರೆಯ ಉನ್ನತ ಸೇವಾ ಪರಂಪರೆಯ ಸಂರಕ್ಷಣೆ ನಮ್ಮ ಆಶಯ
Team Udayavani, Feb 27, 2017, 12:35 AM IST
ಮಂಗಳೂರಿನ ಜಿಲ್ಲಾ ವೆನ್ಲಾಕ್ ಆಸ್ಪತ್ರೆ ಕರ್ನಾಟಕದ ಸುಮಾರು 8 ಜಿಲ್ಲೆಗಳ ಬಡರೋಗಿಗಳ ಪಾಲಿಗೆ ಅಪತ್ಭಾಂಧವ ಎನಿಸಿದೆ. ಶಿವಮೊಗ್ಗ, ದಾವಣಗೆರೆ, ಚಿಕ್ಕಮಗಳೂರು, ಕೊಡಗು, ಉತ್ತರ ಕನ್ನಡ, ಉಡುಪಿ, ಹಾಸನ ಮುಂತಾದ ಜಿಲ್ಲೆಗಳಿಂದ ಮತ್ತು ನೆರೆಯ ಕಾಸರಗೋಡಿನಿಂದ ರೋಗಿಗಳು ಬರುತ್ತಿದ್ದಾರೆ. ಡಾ| ರಾಜೇಶ್ವರಿ ದೇವಿ ಇದೀಗ ಈ ಆಸ್ಪತ್ರೆಯ ಆಡಳಿತ ಚುಕ್ಕಾಣಿಯ ಮುಖ್ಯಸ್ಥೆ. ಮೂರೂವರೆ ವರ್ಷಗಳಿಂದ ಜಿಲ್ಲಾ ಸರ್ಜನ್ ಮತ್ತು ಅಧೀಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಉತ್ತಮ ಸೇವೆಗಾಗಿ ರಾಜ್ಯ ಸರಕಾರದಿಂದ ಕೊಡಮಾಡುವ 2016-17ನೇ ಸಾಲಿನ ಜಿಲ್ಲಾ ಸೇವಾ ಸರ್ವೋತ್ತಮ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಸುಮಾರು 30 ವರ್ಷಗಳಿಂದ ವೈದ್ಯರಾಗಿ ಸರಕಾರಿ ಸೇವೆಯಲ್ಲಿರುವ ಡಾ| ರಾಜೇಶ್ವರಿ ದೇವಿ ಅವರು ಚಿತ್ರದುರ್ಗ ಜಿಲ್ಲಾ ಸರಕಾರಿ ಆಸ್ಪತ್ರೆ, ಶಿವಮೊಗ್ಗದ ಜಿಲ್ಲಾ ಮೆಗ್ಗಾನ್ ಆಸ್ಪತ್ರೆ, ದಾವಣಗೆರೆ ಚಿಗಟೇರಿ ಜನರಲ್ ಆಸ್ಪತ್ರೆ ಮುಂತಾದೆಡೆ ಸೇವೆ ಸಲ್ಲಿಸಿದ್ದಾರೆ. ಜಿಲ್ಲಾ ವೆನ್ಲಾಕ್ ಆಸ್ಪತ್ರೆಯ ಸೇವೆ, ಸೌಲಭ್ಯಗಳು ಮತ್ತು ಸೇವೆ ಮತ್ತು ಸೌಲಭ್ಯಗಳ ಇನ್ನಷ್ಟು ಉನ್ನತೀಕರಣದ ನಿಟ್ಟಿನಲ್ಲಿ ಕೇಶವಕುಂದರ್ ಅವರೊಂದಿಗೆ ಅವರು ತಮ್ಮ ಚಿಂತನೆಗಳು ಹಂಚಿಕೊಂಡಿದ್ದಾರೆ.
ವೆನ್ಲಾಕ್ ಆಸ್ಪತ್ರೆಯ ಒಟ್ಟು ಚಿತ್ರಣ
167 ವರ್ಷಗಳ ಇತಿಹಾಸವನ್ನು ಹೊಂದಿರುವ ಮಂಗಳೂರಿನ ಜಿಲ್ಲಾ ವೆನ್ಲಾಕ್ ಆಸ್ಪತ್ರೆ ಉನ್ನತ ಪರಂಪರೆ ಹಾಗೂ ಐತಿಹಾಸಿಕ ಮಹತ್ವವನ್ನು ಹೊಂದಿದೆ. ಇದು ಕೇವಲ ದಕ್ಷಿಣ ಕನ್ನಡ ಜಿಲ್ಲೆಗೆ ಸೀಮಿತಗೊಳ್ಳದೆ ನೆರೆಯ 8 ಜಿಲ್ಲೆಗಳು ಮಾತ್ರವಲ್ಲದೆ ನೆರೆಯ ಕಾಸರಗೋಡಿನಿಂದಲೂ ರೋಗಿಗಳು ಬರುತ್ತಿದ್ದಾರೆ. ಸರಕಾರಿ ಆಸ್ಪತ್ರೆಗಳಲ್ಲಿ ಇಡೀ ರಾಜ್ಯಕ್ಕೆ ಒಂದು ಮಾದರಿ ಆಸ್ಪತ್ರೆಯಾಗಿ ವೆನ್ಲಾಕ್ ಕಾರ್ಯನಿರ್ವಹಿಸುತ್ತಾ ಬಂದಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಲಭ್ಯವಾಗುವ ಅನೇಕ ಅತ್ಯಾಧುನಿಕ ಚಿಕಿತ್ಸೆಗಳು, ಸೌಲಭ್ಯಗಳು ಇಲ್ಲಿದ್ದು ಬಡವರ್ಗಕ್ಕೆ ಉಚಿತವಾಗಿ ದೊರೆಯುತ್ತದೆ. ಲಭ್ಯ ಆರ್ಥಿಕ ಸಂಪನ್ಮೂಲ, ಮಾನವ ಸಂಪನ್ಮೂಲವನ್ನು ಬಳಸಿಕೊಂಡು, ದಾನಿಗಳ ನೆರವು ಪಡೆದುಕೊಂಡು ಉತ್ತಮ ಸೇವೆ ನೀಡುವ ಬದ್ಧತೆಯೊಂದಿಗೆ ಕಾರ್ಯ ನಿರ್ವಹಿಸುತ್ತಿದ್ದೇವೆ.
ಸೇವೆ ಮತ್ತು ಸೌಲಭ್ಯಗಳು
ಎಲ್ಲ ವಿಭಾಗಗಳು ಸೇರಿ ಒಟ್ಟು 920 ಬೆಡ್ಗಳು ಇಲ್ಲಿವೆ. ಖಾಸಗಿ ಆಸ್ಪತ್ರೆಯಯಲ್ಲಿರುವ ಬಹುತೇಕ ಸೌಲಭ್ಯಗಳು, ಚಿಕತ್ಸೆಗಳನ್ನು ಅಳವಡಿಸಿಕೊಂಡು ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ ಮತ್ತು ಆರೈಕೆಯತ್ತ ಮುನ್ನಡೆಯುತ್ತಿದೆ. ವಿವಿಧ ಚಿಕಿತ್ಸಾ ವಿಭಾಗಗಳು, ಅತ್ಯಾಧುನಿಕ ಪಿಸಿಯೋಥೆರಪಿ ಸೆಂಟರ್, ಅತ್ಯಾಧುನಿಕ, ಸುಸಜ್ಜಿತ ಮಕ್ಕಳ ಚಿಕಿತ್ಸಾ ಕೇಂದ್ರ, ಆಯುಷ್ ಪದ್ಧತಿಯ ಸಮಗ್ರ ಚಿಕಿತ್ಸಾ ಸೆಂಟರ್, ಸಾಮಾನ್ಯ ಔಷಧಗಳಿಗೆ ಸ್ಪಂದಿಸದ ಕ್ಷಯರೋಗಿಗಳಿಗೆ ಚಿಕಿತ್ಸೆ ನೀಡುವ ಡಾಟ್ಪ್ಲಸ್ ಸೈಟ್ ಕೇಂದ್ರ, ಎಪಿಎಲ್, ಬಿಪಿಎಲ್ ತಾರತಮ್ಯವಿಲ್ಲದೆ ಎಲ್ಲ ವರ್ಗದ 0-18 ವರ್ಷದವರೆಗಿನ ಮಕ್ಕಳಿಗೆ ಚಿಕಿತ್ಸೆ ನೀಡುವ, ರೋಗಗಳ ಶೀಘ್ರ ಗುರುತಿಸುವಿಕೆ ಹಾಗೂ ಚಿಕಿತ್ಸಾ ಕೇಂದ್ರ ( ದ.ಕ. ಜಿಲ್ಲಾ ಅರ್ಲಿ ಇಂಟರ್ವೆನ್ಸನ್ ಸೆಂಟರ್), ಡಯಾಲಿಸಿಸ್ ಸೆಂಟರ್, ಬ್ಲಿಡ್ಬ್ಯಾಂಕ್ ಸೇರಿದಂತೆ ಹಲವಾರು ವಿಭಾಗಗಳು, ಸೇವೆಗಳು ಲಭ್ಯವಿವೆ. ಹಿಂದಿನ ಆರೋಗ್ಯ ಸಚಿವ ಯು.ಟಿ. ಖಾದರ್ ಅವರ ಮುತುವರ್ಜಿಯಿಂದ ದೇಶದಲ್ಲೆ ಪ್ರಥಮವಾಗಿ ಉಚಿತ ಪೆರಿಟೋನಿಯಲ್ ಡಯಾಲಿಸಿಸ್ ಕೇಂದ್ರ ಇಲ್ಲಿ ಕಾರ್ಯಾರಂಭ ಮಾಡಿತು. ಆರ್ಎಪಿಸಿಯಲ್ಲಿ ಎನ್ಎಚ್ಎಂನಿಂದ ಸುಸುಜ್ಜಿತ ನವಜಾತ ಶಿಶು ಘಟಕ ಕಾರ್ಯಾಚರಿಸುತ್ತಿದೆ. ಇಲ್ಲಿರುವ ಫಿಸಿಯೋ ಥೆರಪಿ ಕೇಂದ್ರ ಅತ್ಯಾಧುನಿಕವಾಗಿದೆ. ಆಸ್ಪ ತ್ರೆಯ ಅಭಿವೃದ್ದಿಯಲ್ಲಿ ಹಿಂದಿನ ಆರೋಗ್ಯ ಸಚಿವ ಯು.ಟಿ. ಖಾದರ್ ಮಹತ್ತರ ಕೊಡುಗೆ ನೀಡಿದ್ದಾರೆ, ಪ್ರಸ್ತುತ ಆರೋಗ್ಯ ಸಚಿವ ರಮೇಶ್ ಕುಮಾರ್ ಅವರು ಕೂಡಾ ಉತ್ತಮ ಬೆಂಬಲ, ಪ್ರೋತ್ಸಾಹ ನೀಡುತ್ತಿದ್ದಾರೆ.
ಸುಸಜ್ಜಿತ ಬರ್ನ್ಸೆಂಟರ್ ಕೊರತೆ ಇದೆಯಲ್ಲ
ವೆನ್ಲಾಕ್ ಆಸ್ಪತ್ರೆಯಲ್ಲಿ ಲಯನ್ಸ್ ಸಂಸ್ಥೆಯವರು ನೀಡಿದ್ದ ಬರ್ನ್ಸೆಂಟರ್ ಕಾರ್ಯಾಚರಿಸುತ್ತಿದೆ. ಆದರೆ ಇದು ಅತ್ಯಾಧುನಿಕ ವ್ಯವಸ್ಥೆಗಳೊಂದಿಗೆ ಸುಸಜ್ಜಿತವಾಗಿ ರೂಪುಗೊಳ್ಳುವ ಆವಶ್ಯಕತೆ ಇದೆ. ಈ ನಿಟ್ಟಿನಲ್ಲಿ ನಮ್ಮ ಪ್ರಯತ್ನಗಳು ಸಾಗಿವೆ. ಸರಕಾರಕ್ಕೆ ಕೋರಿಕೆ ಸಲ್ಲಿಸಿದ್ದೇವೆ.
ಸೇವೆಯ ಬಗ್ಗೆ ಕೆಲವು ಬಾರಿ ದೂರುಗಳು ಬರುತ್ತಿವೆ
ನಮ್ಮ ವೈದ್ಯರು, ಸಿಬಂದಿಗಳು ಯಾವತ್ತೂ ರೋಗಿಗಳಿಗೆ ಚಿಕಿತ್ಸೆ, ಆರೈಕೆಯಲ್ಲಿ ನಿರ್ಲಕ್ಷ್ಯ ವಹಿಸುತ್ತಿಲ್ಲ. ಆಸ್ಪತ್ರೆಯಲ್ಲಿ ದಾದಿಯರು, ಗ್ರೂಫ್ ಡಿ ನೌಕರರ ಕೊರತೆ ಇದ್ದರೂ ಇದನ್ನು ನಿಭಾಯಿಸಿಕೊಂಡು ಶಕ್ತಿಮೀರಿ ನಮ್ಮವರು ಸೇವೆ ನೀಡುತ್ತಾರೆ. ಆಸ್ಪತ್ರೆಗೆ ಸುಮಾರು 8 ಜಿಲ್ಲೆಗಳಿಂದ ರೋಗಿಗಳು ಬರುತ್ತಾರೆ. ರೋಗಿಗಳ ದಟ್ಟನೆ ಇದ್ದರೂ ಸಾಧ್ಯವಾದಷ್ಟು ತ್ವರಿತಗತಿಯಲ್ಲಿ ಸೇವೆ ನೀಡಲು ಪ್ರಯತ್ತಿಸುತ್ತೇವೆ.
ಒಂದು ವಿಷಯವನ್ನು ಇಲ್ಲಿ ಗಮನಿಸಬೇಕು. ಶಿವಮೊಗ್ಗ, ದಾವಣಗೆರೆ, ಚಿಕ್ಕಮಗಳೂರು, ಕೊಡಗು, ಉತ್ತರ ಕನ್ನಡ, ಉಡುಪಿ, ಹಾಸನ, ಕಾಸರಗೋಡು ಜಿಲ್ಲೆಗಳಲ್ಲಿ ಜಿಲ್ಲಾ ಮಟ್ಟದ ಸರಕಾರಿ ಆಸ್ಪತ್ರೆಗಳಿವೆ. ಆದರೆ ರೋಗಿಗಳು ಅಲ್ಲಿಗೆ ಹೋಗದೆ ದೂರದ ಮಂಗಳೂರಿಗೆ ಯಾಕೆ ಬರುತ್ತಾರೆ. ಅಲ್ಲಿಯ ವೈದ್ಯರು ವೆನ್ಲಾಕ್ ಆಸ್ಪತ್ರೆ ಹೋಗುವಂತೆ ಯಾಕೆ ಸಲಹೆ ಮಾಡುತ್ತಾರೆ? ಇಲ್ಲಿಯ ಸೇವೆಯ ಬಗ್ಗೆ ವ್ಯಕ್ತವಾಗುವ ದೂರುಗಳಿಗೆ ಇದರಲ್ಲಿ ಉತ್ತರವಿದೆ. ಕಳೆದ ವರ್ಷ ಅಖೀಲ ಭಾರತ ಮಟ್ಟದ ಕಾಯಕಲ್ಪ ಪುರಸ್ಕಾರದಲ್ಲಿ ಕರ್ನಾಟಕ ರಾಜ್ಯದಲ್ಲಿ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ದ್ವಿತೀಯ ಪುರಸ್ಕಾರ ಬಂದಿದೆ.
ಅಭಿವೃದ್ದಿ ಯೋಜನೆಗಳು
ವೆನ್ಲಾಕ್ ಆಸ್ಪತ್ರೆಗೆ 176 ಹಾಸಿಗೆಗಳ ನೂತನ ಕಟ್ಟಡ ನಿರ್ಮಾಣಗೊಳ್ಳುತ್ತಿದೆ. ಒಟ್ಟು 15.10 ಕೋ. ರೂ. ವೆಚ್ಚದ ಯೋಜನೆಯಲ್ಲಿ 10 ಕೋ.ರೂ. ನಬಾರ್ಡ್ ನೆರವು ನೀಡಿದ್ದು 5.10 ಕೋ. ರೂ. ಆಸ್ಪತ್ರೆಯ ರಕ್ಷಾ ಸಮಿತಿ ನಿಧಿಯಿಂದ ಭರಿಸಲಾಗಿದೆ. ಪ್ರಥಮ ಅಂತಸ್ತಿನ ಕಾಮಗಾರಿ ಪೂರ್ಣಗೊಂಡಿದ್ದು ಶೀಘ್ರದಲ್ಲೇ ಕಾರ್ಯಾರಂಭ ಮಾಡಲಿದೆ. ಅತ್ಯಾಧುನಿಕ ಟ್ರಾಮಾ ಸೆಂಟರ್ಗೆ ಕೋರಿಕೆ ಸಲ್ಲಿಸಿದ್ದೇವೆ. ಶಸ್ತ್ರಚಿಕಿತ್ಸಾ ವ್ಯವಸ್ಥೆಯಲ್ಲಿ ಇನ್ನೂ ಹೆಚ್ಚಿನ ರೀತಿಯ ಅತ್ಯಾಧುನಿಕ ಸೌಲಭ್ಯಗಳನ್ನು ಅಳವಡಿಸುವ ಬಗ್ಗೆ ಬೇಡಿಕೆ ಇದೆ. ಸುಮಾರು 2.5 ಕೋ.ರೂ ವೆಚ್ಚದಲ್ಲಿ ಎಂಆರ್ಐ ಘಟಕ ಶೀಘ್ರದಲ್ಲೇ ಕಾರ್ಯಾರಂಭ ಮಾಡಲಿದೆ. ಐಸಿಯು ಬೆಡ್ಗಳು, ವೆಂಟಿಲೇಟರ್ಗಳ ಸಂಖ್ಯೆ ಕೂಡಾ ಹೆಚ್ಚಾಗಬೇಕು.
ದಾನಿಗಳು, ಸಂಸ್ಥೆಗಳ ಸ್ಪಂದನೆ
ಆಸ್ಪತ್ರೆಗೆ ಸರಕಾರದ ಜತೆಗೆ ದಾನಿಗಳು, ಸಂಘಸಂಸ್ಥೆಗಳು, ಕಾರ್ಪೊರೇಟ್ ಸಂಸ್ಥೆಗಳು ನಿರಂತರ ಪ್ರೋತ್ಸಾಹ ನೀಡುತ್ತಾ ಬಂದಿವೆ. ಬ್ಯಾಂಕ್ಗಳು, ರೋಟರಿ, ಲಯನ್ಸ್ ಸೇರಿದಂತೆ ಆನೇಕ ಸೇವಾ ಸಂಸ್ಥೆಗಳು, ಸ್ವಯಂಸೇವಾ ಸಂಸ್ಥೆ ಗಳು, ದಾನಿಗಳು ಸ್ಪಂದಿಸುತ್ತಾ ಬಂದಿದ್ದಾರೆ.
ವೈದ್ಯಧರ್ಮ
ವೈದ್ಯರಿಗೆ ವೈದ್ಯಧರ್ಮವೇ ಮುಖ್ಯ. ಸರಕಾರಿ ಆಸ್ಪತ್ರೆಗೆ ಬರುವವರು ಬಡವರು. ಅವರಿಗೆ ಉತ್ತಮ ಚಿಕಿತ್ಸೆ ದೊರೆಯಬೇಕು ಎಂಬುದು ನಮ್ಮ ಉದ್ದೇಶ. ನಮ್ಮ ಇತಿಮಿತಿಯೊಳಗೆ ಶಕ್ತಿಮೀರಿ ಸೇವೆ ನೀಡುವ ಗುರಿ ನಮ್ಮದಾಗಿದೆ. ಟೀಕೆಗಳನ್ನು ಸಲಹೆಗಳೆಂದು ಪರಿಗಣಿಸಿ ವ್ಯವಸ್ಥೆಯಲ್ಲಿ, ಸೇವೆಯಲ್ಲಿ ಇನ್ನಷ್ಟು ಸುಧಾರಣೆ ಮಾಡಿಕೊಳ್ಳುವಲ್ಲಿ ಪ್ರಾಮಾಣಿಕ ಪ್ರಯತ್ನ ನಮ್ಮದಾಗಿದೆ. ಜಿಲ್ಲಾ ವೆನ್ಲಾಕ್ ಆಸ್ಪತ್ರೆ ಸೂಪರ್ಸ್ಪೆಷಾಲಿಟಿ ಆಸ್ಪತ್ರೆಯಾಗಿ ರೂಪುಗೊಳ್ಳುವಲ್ಲಿ ಪ್ರಯತ್ನಗಳು ನಡೆದಿವೆ. ಕೆಎಂಸಿ ಕೂಡಾ ನಮಗೆ ನಿರಂತರ ಬೆಂಬಲ ನೀಡುತ್ತಾ ಬಂದಿದೆ.