ಮಲ್ಪೆಯ ಬೋಟ್ ಗಂಗೊಳ್ಳಿ ಬಳಿ ಮುಳುಗಡೆ
Team Udayavani, Aug 22, 2017, 6:35 AM IST
ಮಲ್ಪೆ: ಮಲ್ಪೆ ಬಂದರಿನಿಂದ ಮೀನುಗಾರಿಕೆಗೆ ತೆರಳಿದ ಆಳಸಮುದ್ರ ಬೋಟ್ ಆ. 18ರಂದು ಗಂಗೊಳ್ಳಿ ಸಮೀಪ ಮುಳುಗಡೆಗೊಂಡಿದ್ದು ಬೋಟಿನಲ್ಲಿದ್ದ ಆರು ಮಂದಿ ಮೀನುಗಾರರನ್ನು ರಕ್ಷಿಸಲಾಗಿದೆ.
ಕಾಪು ಪೊಲಿಪುವಿನ ಗಿರೀಶ್ ಕಾಂಚನ್ ಅವರಿಗೆ ಸೇರಿದ ಶ್ರೀ ದುರ್ಗಾಮಾಯಿ ಆಳಸಮುದ್ರ ಬೋಟ್ ಆ. 11ರಂದು ಮಲ್ಪೆಯಿಂದ ತೆರಳಿತ್ತು. ಆ. 18ರಂದು ಬೆಳಗ್ಗೆ ಗಂಗೊಳ್ಳಿ ಸಮೀಪ ಸುಮಾರು 25ರಿಂದ 30 ಮಾರು ಆಳ ದೂರ ಸಮುದ್ರ ಮಧ್ಯೆ ಅವಘಡ ಸಂಭವಿಸಿದೆ. ಸಮುದ್ರದ ಬೃಹತ್ ಅಲೆಯ ಹೊಡೆತಕ್ಕೆ ಬೋಟಿನ ಅಡಿಭಾಗ ಒಡೆದು ನೀರು ಒಳಗೆ ಬರ ಲಾರಂಭಿಸಿತು. ಪರಿಣಾಮ ಬೋಟ್ ನಿಧಾನವಾಗಿ ಮುಳುಗಡೆಗೊಂಡಿತು.
ಮೀನುಗಾರರಾದ ಭಟ್ಕಳದ ಲಕ್ಷ್ಮಣ ಎನ್., ಕುಮಾರ, ಗಣಪತಿ, ಮಾರುತಿ, ಗೋಪಾಲ ಖಾರ್ವಿ ಮತ್ತು ಲಕ್ಷ್ಮಣ ಗಣಪತಿ ಅವರನ್ನು ಸಮೀಪದಲ್ಲಿದ್ದ ಬಾಲಮಾರುತಿ ಬೋಟಿನವರು ಧಾವಿಸಿ ಬಂದು ರಕ್ಷಣೆ ಮಾಡಿದರು.
ಬೋಟ್ ಸಂಪೂರ್ಣ ಮುಳುಗಡೆಯಾಗಿದ್ದು, ಬೋಟಿನಲ್ಲಿ ಹಿಡಿದ ಉತ್ತಮ ಬೆಲೆಯ ಮೀನು, ಬಲೆ, ಡೀಸೆಲ್ ಸೇರಿದಂತೆ ಒಟ್ಟು 70 ಲಕ್ಷ ರೂ. ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.