ಗೋವು ಮುಸಲ್ಮಾನರ ಆಹಾರವಲ್ಲ, ನಮ್ಮ ಸಂಸ್ಕೃತಿಗೆ ಗೌರವ ಕೊಡಲಿ; ಹೆಗಡೆ
Team Udayavani, May 27, 2017, 2:53 PM IST
ಕಾರವಾರ: ಗೋವು ಮುಸಲ್ಮಾನರ ಆಹಾರವಲ್ಲ. ಯಾವ ಮುಸ್ಲಿಂ ದೇಶವೂ ಗೋಹತ್ಯೆಗೆ ಬೆಂಬಲ ಕೊಡುವುದಿಲ್ಲ. ಆದರೆ ತಲೆ ಇಲ್ಲದವರು ಗೋ ಹತ್ಯೆ ನಿಷೇಧದ ವಿರುದ್ಧ ಮಾತನಾಡ್ತಿದ್ದಾರೆ. ಯಾಕೆಂದರೆ ಕೇಂದ್ರ ಸರ್ಕಾರ ಕೇವಲ ಗೋ ಹತ್ಯೆ ನಿಷೇಧ ಮಾತ್ರ ಜಾರಿಗೆ ತಂದಿಲ್ಲ. ಕೇಂದ್ರ ಪ್ರಾಣಿ ಹತ್ಯೆ ನಿಷೇಧ ಕಾನೂನು ಜಾರಿಗೆ ತಂದಿದೆ ಎಂದು ಸಂಸದ, ಬಿಜೆಪಿ ಮುಖಂಡ ಅನಂತ ಕುಮಾರ್ ಹೆಗಡೆ ಸಮಜಾಯಿಷಿ ನೀಡಿದ್ದಾರೆ.
ಕೇಂದ್ರ ಸರ್ಕಾರ ರಾಷ್ಟ್ರಾದ್ಯಂತ ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆಗೆ ಮಹತ್ವದ ತಿದ್ದುಪಡಿ ಮಾಡಿ ಆದೇಶ ಪ್ರಕಟಿಸಿರುವುದಕ್ಕೆ ಸಂಬಂಧಿಸಿದಂತೆ ತೀವ್ರ ಪರ, ವಿರೋಧದ ಚರ್ಚೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಅನಂತ ಕುಮಾರ ಹೆಗಡೆ ಈ ಪ್ರತಿಕ್ರಿಯೆ ನೀಡಿದ್ದಾರೆ.
ಮುಸಲ್ಮಾನರು ಸಂಖ್ಯಾತ ಹಿಂದೂಗಳ ಭಾವನೆಗೆ ಗೌರವ ಕೊಡಲಿ. ಈ ನೆಲದ ಅನ್ನ, ನೀರು ಕುಡಿದವರು ಸಂಸ್ಕೃತಿಗೂ ಗೌರವ ಕೊಡಲಿ. ಆದರೆ ಹಿಂದೂಗಳಿಗೆ ನೋವುಂಟು ಮಾಡಲು ಗೋ ಹತ್ಯೆ ಮಾಡಲಾಗುತ್ತಿದೆ. ಹಾಗಾಗಿ ಹಿಂದೂಗಳ ಭಾವನೆಗೆ ಗೌರವ ಕೊಟ್ಟು ಗೋ ಹತ್ಯೆ ನಿಷೇಧಕ್ಕೆ ಮುಸಲ್ಮಾನರು ಬೆಂಬಲ ನೀಡಲಿ ಎಂದು ಒತ್ತಾಯಿಸಿದ್ದಾರೆ.
ಇತ್ತೀಚೆಗಿನ ದಿನಗಳಲ್ಲಿ ಮುಸಲ್ಮಾನರೇ ಗೋ ಹತ್ಯೆ ನಿಷೇಧಕ್ಕೆ ಬೆಂಬಲ ನೀಡುತ್ತಿದ್ದಾರೆ. ಮುಸಲ್ಮಾನರೇ ಗೋವನ್ನು ತಾಯಿ ಎಂದು ಒಪ್ಪಿಕೊಂಡಿದ್ದಾರೆ. ಆದರೆ ತಲೆ ಇಲ್ಲದವರು ಮಾತ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.