ಸುಮ್ಮನೆ ಒಂದು ಕತೆಯ ಹಾಗೆ ! ದಾರಿಯಲ್ಲಿ ಸಿಕ್ಕವನು !


Team Udayavani, Apr 7, 2017, 3:45 AM IST

traditional-indian-clothing.jpg

ಇಂದೇಕೋ ಅವನು ಇವಳಿಗೆ ತುಂಬಾ ನೆನಪಾಗ್ತಾ ಇದಾನೆ. ಅವನು ಎಂದರೆ ಇವಳ ಸಹೋದ್ಯೋಗಿ. ಆಗಷ್ಟೇ ಇವಳು ಕೆಲಸ ಬದಲಿಸಿ ಹೊಸ ಸಂಸ್ಥೆಗೆ ಸೇರಿದ್ದಳು. ಇವಳ ಮಟ್ಟಿಗೆ ಅಲ್ಲಿ ಎಲ್ಲವೂ ಹೊಸತು. ಏನೋ ಅಸಹಜತೆ, ಕಿರಿಕಿರಿ, ಬೇಸರ, ಮುಕ್ತ ವಾತಾವರಣ ಇಲ್ಲದ ಕಾರಣ ಇವಳು  ಹೊಂದಿಕೊಳ್ಳಲು  ಒದ್ದಾಡುತ್ತಿದ್ದಳು.  “ಥತ್‌ ಯಾಕಾದರೂ ಈ ಸಂಸ್ಥೆಗೆ ಸೇರಿದೆನೋ’ ಎಂದು ಗೊಣಗಿಕೊಳ್ಳುವಾಗ ಪರಿಚಯವಾದವನು ಅವನು.  “ರೀ… ನಂಗೆ ನಿಮ್ಮಂಥ ಹುಡುಗಿ ಹುಡುಕಿ ಕೊಡ್ರಿ, ಮದುವೆ ಆಗ್ತಿàನಿ’ ಎಂಬ ಅವನ ನೇರಾನೇರ ನುಡಿ ಕೇಳಿ ಇವಳು ಗಲಿಬಿಲಿಗೊಂಡಳು. ಅವನು ನಕ್ಕ. 

ಊಟದ ಸಮಯದಲ್ಲಿ ಕ್ಯಾಂಟೀನ್‌ ಊಟ ಅವನು ಹೆಚ್ಚು ಕಡಿಮೆ ಮುಟ್ಟಲೇ ಇಲ್ಲ. ಮಾರನೆಯ ದಿನ “ಓಹೋ ಏನ್ರೀ ವಾಂಗಿಭಾತ್‌ ತಂದಿದ್ದೀರಿ’ ಎಂದು ತಾನೇ ಇವಳ ಡಬ್ಬಿಗೆ ಕೈ ಹಾಕಿ, “ಥೇಟ್‌ ನಮ್ಮಮ್ಮ ಮಾಡಿದ ಹಾಗೆ ಇದೆ ವಾಂಗಿ ಭಾತ್‌’ ಎಂದು ಚಪ್ಪರಿಸಿಕೊಂಡು ತಿಂದ.  ಈಗ ಅಮ್ಮ ಮಾಡೋಲ್ಲವೇ, ವಯಸ್ಸಾಗಿದೆಯೇ ಅಥವಾ… ಇವಳು ಹೆಚ್ಚು ಕೆದಕಲಿಲ್ಲ.  ಮುಂದಿನ ಸಲ ವಾಂಗಿಭಾತ್‌ ಮಾಡಿದಾಗ ಅವನಿಗಾಗಿ ಒಂದು ಡಬ್ಬಿ  ಒಯ್ದಳು.  ತಡವಾಗಿ ತಿಳಿದದ್ದು ಅವನು ಮನೆಯಿಂದ ಹೊರಬಂದಿದ್ದ. ಏನೋ ಅಣ್ಣತಮ್ಮಂದಿರ ಮಧ್ಯೆ ವೈಮನಸ್ಸಂತೆ!   

 ಅದೊಂದು ದಿನ ಇವಳು ಆಫೀಸಿಗೆ ತಡವಾಗಿ ಬಂದಳು.  “ಮೀಟಿಂಗಿಗೆ  ಹೊತ್ತಾಗುತ್ತೆ’ ಅಂತ ತನ್ನ ಡೆಸ್ಕ್ನಲ್ಲೇ ಕೂತು ಒಂದು ಪುಟ್ಟ ಕನ್ನಡಿ ಬಾಚಣಿಗೆ ತೆಗೆದು ಮುಂದಲೆ ಸರಿಮಾಡಿಕೊಂಡಳು. ಎಲ್ಲಿದ್ದನೋ ಅವನು ಬಂದವನೇ, “ಇದೇನ್ರಿ, ನಮ್ಮ ಅಮ್ಮ ಗೌರಿ ಹಬ್ಬದ ಮರದ ಬಾಗಿನಕ್ಕೆ ಹಾಕೋ ಕನ್ನಡಿ ಇದ್ದಂಗಿದೆ’ ಎಂದು ನಕ್ಕ.  ಇವಳಿಗೆ ಅಪಮಾನವಾದಂತಾಯಿತು. ಕೆನ್ನೆ ಕೆಂಪಾಯಿತು.  ಇವನಿಗೆ ಯಾರು ಇಷ್ಟು ಸ್ವಾತಂತ್ರ್ಯ ಕೊಟ್ಟವರು ಎಂದು ರೇಗಿತು. ಮಾರನೇ ದಿನ ಇವಳ ಟೇಬಲ್ಲಿನ ಮೇಲೆ ಒಂದು ಪೇಪರ್‌ ಕವರ್‌ ಇತ್ತು. ತೆಗೆದು ನೋಡಿದರೆ ಅದರಲ್ಲಿ ಶ್ರೀಗಂಧದ ಚೆಂದದ ಕೆತ್ತನೆ ಮಾಡಿದ ಆನೆಗಳಿರುವ  ದುಂಡನೆಯ ಪುಟ್ಟ ಕನ್ನಡಿ. ಇವಳ ಮೈ ನವಿರಾಗಿ  ಕಂಪಿಸಿತು. ಅವನೇ ಇಟ್ಟಿದ್ದಾನೆ ಎಂದು ಊಹಿಸಿದಳು. ಎಷ್ಟು ಸುಂದರವಾಗಿದೆ. ಇವಳ ಬೆರಳುಗಳು ಕೆತ್ತನೆಯನ್ನು ನೇವರಿಸಿತು. ತನಗೆ ಇದುವರೆಗೆ ಹೀಗೆ ಯಾರೂ ಉಡುಗೊರೆ ಕೊಟ್ಟಿಲ್ಲ.  ಆದರೂ ತಾನು ಇಂಥಾಲ್ಲೆಲ್ಲ ಪ್ರೋತ್ಸಾಹಿಸಬಾರದು ಎಂದು ವಿವೇಕ ಎಚ್ಚರಿಸಿತು.  ಏಕೋ ತಿರಸ್ಕರಿಸಲು ಮನ ಒಪ್ಪಲಿಲ್ಲ.  ತೆಗೆದು ಬ್ಯಾಗಿನಲ್ಲಿ ಇಟ್ಟುಕೊಂಡಳು. 

ಇವಳು ತನಗರಿವಿಲ್ಲದಂತೆ ಬದಲಾಗತೊಡಗಿದಳು. ಉಡುಗೆ -ತೊಡುಗೆಗಳತ್ತ ಹೆಚ್ಚು ಗಮನ ಕೊಡತೊಡಗಿದಳು. ಸೀರೆ ಉಡುವಲ್ಲಿ ನಯ-ನಾಜೂಕು ಕಲಿತಳು. ಒಮ್ಮೆ ಇವಳು ಆಫೀಸಿಗೆ ಮಲ್ಲಿಗೆ ದಂಡೆ ಮುಡಿದು ಹೋದಳು. ಹೂವಿನವಳು ಬಿಗಿಯಾಗಿ ಹಣೆದಿರಲಿಲ್ಲ ಅಂತ ಕಾಣುತ್ತೆ.  ಇವಳು ನಡೆದಾಡಿದೆಡೆಯೆಲ್ಲ ಮಲ್ಲಿಗೆ ಹೂವು ಉದುರುತಿತ್ತು. ಅವನು “ಮೋಹಕ ಮಲ್ಲಿಗೆಯ ಕಂಪು, ನೀನು  ಹೆಜ್ಜೆ ಇಟ್ಟೆಡೆ ಒಂದು ದೊಡ್ಡ ಮಲ್ಲಿಗೆ ‘ ಎಂದು ಹಾಡಿ ಇವಳನ್ನು ಕಿಚಾಯಿಸಿದ. ಮುಜುಗರಗೊಂಡು ಹೂವು ತೆಗೆದು ಬದಿಗಿರಿಸಬೇಕೆಂದಿದ್ದ ಇವಳು ಅವನಿಗಾಗಿಯೋ ಎಂಬಂತೆ  ಮಲ್ಲಿಗೆ ದಂಡೆ ಮುಡಿದೇ ಇದ್ದಳು. ಅವನು ಹಾಡಿದ ಪಂಕ್ತಿಯ ಇತರ ಸಾಲುಗಳನ್ನು ನೆನಪಿಸಿಕೊಂಡು “ಇವಳು ಯಾರು ಬಲ್ಲೆ ಏನು… ಇವಳ ಹೆಸರ ಹೇಳಲೇನು… ಇವಳ ದನಿಗೆ ತಿರುಗಲೇನು… ಇವಳು ಏತಕೋ ಬಂದು ನನ್ನ ಸೆಳೆದಳು…’ ಎಂದು ತನ್ನಷ್ಟಕ್ಕೆ ಗುನುಗಿಕೊಂಡು ಅದರರ್ಥ ಚಿತ್ತಗಳಿಗೆ  ವಿಶೇಷತೆಯನ್ನು ಲೇಪಿಸಿ  ಪುಳಕಗೊಂಡಳು. 

ಪ್ರತಿ ಸಂಜೆ ತನ್ನ ಕೆಲಸ ಮುಗಿದಿದ್ದರೂ ಇವಳಿಗಾಗಿ ಕಾಯುತ್ತಿದ್ದ.  ಎರಡು ತೋಳುಗಳನ್ನು ಎದೆಗೆ ಅಡ್ಡವಾಗಿ ಮಡಚಿ ಕಟ್ಟಿ ಬೈಕ್‌ ಮೇಲೆ ಕೂತು ಇವಳ ಬರುವಿಕೆಯ ನಿರೀಕ್ಷೆಯಲ್ಲಿರುವ ಅವನ ಆ ಭಂಗಿ ಇವಳಿಗೆ ತುಂಬಾ ಇಷ್ಟವಾಗುತ್ತೆ. ಒಮ್ಮೆಮ್ಮೆ ಐಸ್‌ಕ್ರೀಮ್‌, ಕುಲ್ಫಿ , ಚುರುಮುರಿ ಎಂಬ ಅವನ ಬಯಕೆಗಳಿಗೆ ಜೊತೆಯಾಗೋದು,  ಇದ್ದಕ್ಕಿದ್ದಂತೆ ಬೆಂಗಳೂರಿನಲ್ಲಿ ಬರುವ ಮಳೆಯಲ್ಲಿ ಇವಳು ತೋಯದಿರಲೆಂದು ಅವನು  ತನ್ನ  ಜಾಕೆಟ್‌ ಇವಳಿಗೆ ಪಾಸ್‌ ಮಾಡಿ  ತೊಡಿಸೋದು… ಇವಳಿಗೆ ಇವೆಲ್ಲ ಬಹಳ ಆಪ್ಯಾಯಮಾನ. 

ಹಾದಿಯಲ್ಲಿ  “ನೋಡ್ರಿ ಆ ಕಾರಲ್ಲಿ ಕೂತಿರುವ ಹುಡುಗಿ ನನ್ನ ಕಡೆ ನೋಡೋ ಹಾಗೆ ಮಾಡ್ತೀನಿ’ ಎಂದು ಸಿಗ್ನಲ್‌ ಲೈಟಲ್ಲಿ ಕಾರ್‌ ನಿಂತಾಗ ಅದರ ಪಕ್ಕದಲ್ಲೇ  ಪಕ್ಕನೆ ಬ್ರೇಕ್‌ ಹಾಕಿ ನಿಲ್ಲಿಸಿದಾಗ ಕಾರಿನ ಹುಡುಗಿ ಚಕಿತಳಾಗಿ ಅವನತ್ತ ನೋಡಿದಾಗ ಬೈಕಿನ ಕನ್ನಡಿಯಿಂದಲೇ ಇವಳ ಮೊಗ ನೋಡಿ ಕಣ್ಣು ಮಿಟುಕಿಸುತ್ತಿದ್ದ. ಅಪ್ಪನನ್ನು ಕಳೆದುಕೊಂಡ ನಂತರ ಇವಳು ಅಹೋರಾತ್ರಿ ಜವಾಬ್ದಾರಿಯುತ ಯುವತಿಯಾಗಿ ಮಾರ್ಪಟ್ಟು ಬಿಟ್ಟಿದ್ದಳು.  ಈಗ ಅವನ ಸಾಂಗತ್ಯದಿಂದ ಅವಳಲ್ಲಿ ಸುಪ್ತವಾಗಿದ್ದ  ಎಳಸುತನ, ಚಂಚಲತೆ, ಜೀವನೋತ್ಸಾಹ ಹೊರಬಂದು ನಿರಾಳವಾಗತೊಡಗಿದಳು. 

“ರ್ರೀ… ನನಗೆ ನಿಮ್ಮಂಥ ಹುಡುಗಿ ಹುಡುಕಿ ಕೊಡ್ರಿ, ಮದುವೆ ಆಗ್ತಿàನಿ’ ಅಂದಿದ್ದನಲ್ಲವೆ?  ತಾನು ನಿಜಕ್ಕೂ ಅವನಿಗೆ ಹುಡುಗಿ ಹುಡುಕುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆಯೆ?  ಅಥವಾ ಅವನ ಸಾಂಗತ್ಯ ಎಲ್ಲಿ ತಪ್ಪಿ ಹೋಗುತ್ತೋ ಅಂತ ತನ್ನೊಡಲ್ಲೇ ಅವನನ್ನು ಮುಚ್ಚಿಟ್ಟುಕೊಂಡೆನೆ ? ಎಂಬ ತಪ್ಪಿತಸ್ಥ ಭಾವ ಕಾಡುತ್ತೆ.  ಇವಳ ಯಜಮಾನರ ಕಡೆ ಒಂದು ಒಳ್ಳೆ ಮದುವೆ ಸಂಬಂಧ ಇತ್ತು. ಅವನಿಗೂ ಆ ಹುಡುಗಿಗೂ ಒಳ್ಳೆ ಈಡು ಜೋಡು ಎನಿಸಿ ಅವನ ಬಳಿ ಪ್ರಸ್ತಾಪ ಮಾಡಿದಳು. ಆದರೆ ಅವನ ಪ್ರತಿಕ್ರಿಯೆ ಯಾಕೋ ಬಹಳ ಧಿಮಾಕಿನಿಂದ ಕೂಡಿತ್ತು ಎಂದು ಇವಳಿಗೆ ತೋರಿ “ಹಾಗಲ್ಲ ಹೀಗೆ’ ಎಂದು ತಿಳಿ ಹೇಳಿದಳು. ಅವನಿಗೆ ಸಿರ್ರ ಅಂತ ಸಿಟ್ಟು ನೆತ್ತಿಗೇರಿತು. ಆಮೇಲೆ ಇಬ್ಬರಿಗೂ ಮಾತಿಲ್ಲ , ಕತೆಯಿಲ್ಲ.  ಆದರೂ ಇವಳಿಗಾಗಿ ಕಾಯುವಿಕೆ, ಮನೆ ತನಕ ಡ್ರಾಪ್‌ ಮಾಡೋದು ನಿಲ್ಲೋಲ್ಲ.  ಇವಳನ್ನು ಮನೆ ಬಾಗಿಲ ತನಕ ತಲುಪಿಸುವುದು ತನ್ನ ಆದ್ಯ ಕರ್ತವ್ಯ ಎಂಬ ನಿಲುವು ಹೊತ್ತವನಂತೆ. ಇವಳಿಗೂ ರೇಗಿತು.  ತಾನೇಕೆ ಅವನೊಟ್ಟಿಗೆ ಹೋಗಬೇಕು?  ತಾನೇನು ಅವನ ಬಳಿ ಕರಾರು ಮಾಡಿಕೊಂಡಿದ್ದೇನಾ?  ಇಷ್ಟಕ್ಕೂ ತನಗೂ ಅವನಿಗೂ ಏನುಸಂಬಂಧ?  ಮಾರನೆಯ ದಿನ ಅವನನ್ನು ದಬಾಯಿಸಿ ಇವೆಲ್ಲ ಕೇಳಿಬಿಡಬೇಕು ಎಂದು ಇವಳು ಅಂದುಕೊಂಡಳು. 

 ಮಾರನೆಯ ದಿನ ಅವನು ಬರಲಿಲ್ಲ… ವಾರ ಕಳೆದರೂ ಬರಲಿಲ್ಲ.  ಅವಳು ಆತಂಕಗೊಂಡಳು. ಏನಾಯಿತೋ?  ಯಾರನ್ನು ಕೇಳಲಿ ಎಂಬ ಹಪಾಹಪಿ. ಹೇಗೋ ಧೈರ್ಯ ಮಾಡಿ ಆಫೀಸಿನ ರೆಕಾರ್ಡಿನಿಂದ ಅವನ ವಿಳಾಸ ಹೆಕ್ಕಿ ತೆಗೆದು ಅವನು ತಂಗಿದ್ದ ರೂಮಿಗೆ ಹೊರಟೇಬಿಟ್ಟಳು. ಎಂದೂ ಪರಪುರುಷನ ಕೋಣೆಗೆ ಒಬ್ಬಳೇ ಹೋಗದ ಇವಳಿಗೆ ಏನೋ ಮುಜುಗರ.  ಯಾರಾದರೂ ಪರಿಚಯಸ್ಥರ ಕಣ್ಣಿಗೆ ಬಿದ್ದರೆ ಎಂಬ ಆತಂಕ. ಹೋಗಿ ನೋಡಿದರೆ ಅವನ ಮೈ ಕೆಂಡದಂತೆ ಸುಡುತಿತ್ತು.  ಅರೆಪ್ರಜ್ಞಾವಸ್ಥೆಯಲ್ಲಿದ್ದ.  ಅವನನ್ನು ಹತ್ತಿರದ ಆಸ್ಪತ್ರೆಗೆ ಸೇರಿಸಿದಳು. ಮೂರು ಹಗಲು ಅವನೊಟ್ಟಿಗಿದ್ದು ಅವನ ಆರೈಕೆ ಮಾಡಿದಳು.  ಸಂಜೆ ಅವನ ಸ್ನೇಹಿತನೊಬ್ಬನ ಸುಪರ್ದಿಗೆ ಅವನನ್ನು ಬಿಟ್ಟು ಮನೆಗೆ ಹೋಗುತ್ತಿದ್ದಳು. 

ವಾರ ಕಳೆದು ಅವನು ಆಫೀಸಿಗೆ ಬಂದ.  ಮತ್ತದೇ ಕೀಟಲೆ, ಹುಡುಗಾಟಿಕೆ. ಇವಳಲ್ಲಿ ಮರೆಯಾಗಿ ಹೋಗಿದ್ದ ಲವಲವಿಕೆ ಮರುಕಳಿಸಿತು. “ಅಬ್ಟಾ ಎಷ್ಟು ಮಿಸ್‌ ಮಾಡಿಕೊಂಡೆ ಅವನನ್ನು !’  ತಮ್ಮಿಬ್ಬರ ಮೊದಲ ಭೇಟಿಯಿಂದ ಇಲ್ಲಿವರೆಗೆ ಅವನೊಂದಿಗೆ ಕಳೆದ ದಿನಗಳು, ಗಳಿಗೆಗಳು, ಕ್ಷಣಗಳನ್ನು ಮೆಲುಕು ಹಾಕ್ತಾಳೆ. ತನ್ನ ಬಗ್ಗೆ ಅವನು ತೋರಿಸುವ ಅಕ್ಕರಾಸ್ತೆ, ಕಾಳಜಿ, ಪ್ರೀತಿ ಇವಳ ಜೀವಕ್ಕೆ ತಂಪೆರೆದರೆ, ಅವನ ಹುಡುಗಾಟಿಕೆ, ಕೀಟಲೆ ಇವಳನ್ನು ಮತ್ತೆ ಚಿಕ್ಕ ಹುಡುಗಿಯನ್ನಾಗಿ ಮಾಡಿಬಿಡುತ್ತೆ. ಈ ರೀತಿಯ ನಡೆ-ನುಡಿಗಳು ಸದಾ ನೇರವಾಗಿ ಕಂಟಕಗಳಿಲ್ಲದೆ ಮುಂದುವರೆಯುತ್ತದೆ ಎನ್ನುವುದು ಹಿತ ಕೊಡುವ ಊಹೆ. ಇವಳು ಇಂಥದೇ ಕಲ್ಪನಾ ಪ್ರಪಂಚದಲ್ಲಿ ಇರಬಯಸಿದಳು.  ಇದು ಒಂದು ಸುಂದರ ಅನುಭೂತಿ.  ಈ ಕಾಲಘಟ್ಟ ಹೀಗೆ ತಟಸ್ಥವಾಗಿ ನಿಂತು ಬಿಡಬಾರದೇ ಎಂದು ಹಂಬಲಿಸುತ್ತಾಳೆ. 

ಯಜಮಾನರಿಗೆ ಬೇರೆ ಶಹರಿಗೆ ವರ್ಗವಾಗಿದೆ ಎಂದು ತಿಳಿದಾಗ ಇವಳು ಮಂಕಾದಳು. ಎರಡು ದಿನ ಬಿಟ್ಟು ಅವನಿಗೆ ಹೇಳಿದಾಗ “ಹಾಗಾದರೆ ಮತ್ತೆ ನಿಮ್ಮ ಕೈ ಊಟ ಯಾವಾಗ್ರೀ ಸಿಗೋದು ನಂಗೆ?’ ಎಂದು ಅವನು ನಕ್ಕ .  ಇವನಿಗೆ ನನ್ನ ಕೈ ಊಟದ್ದಷ್ಟೇ ಚಿಂತೆನಾ ಎಂದು ಇವಳು ಪೆಚ್ಚಾದಳು. ಆದರೂ ಒಳ ಮನಸ್ಸು ಅಷ್ಟೇ ಇರಲಿಕ್ಕಿಲ್ಲ, ತನ್ನಂತೆ ಅವನೂ ತನ್ನ  ಭಾವನೆಗಳನ್ನು ಬಚ್ಚಿಡುತ್ತಿದ್ದಾನೆ  ಎಂದು ಸಮಾಧಾನ ತಂದುಕೊಂಡಳು. 
.
 ಇಂದಿನ ಡಿಜಿಟಲ್‌ ಯುಗದಲ್ಲಿ ಅವನನ್ನು ಪತ್ತೆ ಮಾಡುವುದು ಕಷ್ಟವಲ್ಲ.  ಫೇಸ್‌ಬುಕ್‌, ಟ್ವೀಟರ್‌, ಲಿಂಕ್ಡ್ ಇನ್‌ ಎಲ್ಲಾದರೂ ಸಿಕ್ಕೇ ಸಿಗ್ತಾನೆ.  ಆದರೆ ಇವಳಿಗೆ ಅವನ “ಇಂದು’ ಬೇಕಿಲ್ಲ.  ಅವನೊಂದಿಗೆ ಕಳೆದ “ನೆನ್ನೆಗಳೇ’ ಸಾಕು.  ವರ್ಷಗಳು ಉರುಳಿದರೂ ಅವುಗಳ ಸವಿನೆನಪಿನ ಛಾಪು ಹೃದಯದಲ್ಲಿ ಜತನದಿಂದ ಕಾಪಿಟ್ಟುಕೊಂಡಿದ್ದಾಳೆ. 

 ಆಫೀಸಿನಿಂದ ಹೊರ ಬಂದವಳು ಕಾರಿನಲ್ಲಿ ತನಗಾಗಿ ಕಾಯುತ್ತಿದ್ದ ಯಜಮಾನರತ್ತ ದೃಷ್ಟಿ ಹರಿಸಿದಳು. ಪ್ರತಿದಿನದಂತೆ ಅವರು ಆಗಲೇ ಆಫೀಸಿನ ಕಾನ್ಕಾಲಿನಲ್ಲಿ ಇದ್ದರು. ಬಾಗಿಲು ತೆಗೆದು ಪಕ್ಕದಲ್ಲಿ ಕುಳಿತ ಇವಳತ್ತ ತುಸು ತಲೆ ಬಾಗಿಸಿ ಇವಳ ಬರುವಿಕೆಯನ್ನು ಗಮನಿಸಿದ ಸಂಕೇತ ನೀಡಿದರು.  ಡ್ರೈವರ್‌  ಕಾರು ಚಾಲೂ ಮಾಡಿದ. ಸಿಗ್ನಲ್‌ ಲೈಟ್‌ನಲ್ಲಿ ಕಾರು ನಿಂತಾಗ ಬದಿಯಲ್ಲಿ  ಒಬ್ಬ  ಯುವಕ  ಫ‌ಕ್ಕನೆ ಬ್ರೇಕ್‌ ಹಾಕಿ ಬೈಕ್‌ ನಿಲ್ಲಿಸಿದ.  ಚಕಿತಳಾಗಿ ನೋಡಿದ ಇವಳತ್ತ ನೋಡಿ ತುಂಟ ನಗೆ ಬೀರಿದ.  ನಸು ನಕ್ಕ ಇವಳು ಬ್ಯಾಗಿನಿಂದ ಮೊಬೈಲ್‌ ಮತ್ತು ಇಯರ್‌ ಫೋನ್‌ ತೆಗೆದು ಕಿವಿಗೆ ಸಿಗಿಸಿಕೊಂಡು ಎಫ್ಎಂ  ಚಾಲೂ ಮಾಡಿದಳು. “ಕೊಯಿ ನಹೀ ಹೈ ಫಿರ್‌ ಭೀ ಹೆ ಮುಜಕೋ ನಾ ಜಾನೆ ಕಿಸ್ಕಾ ಇಂತಜಾರ್‌’ ಎಂದು ಲತಾ ಮಂಗೇಶ್ಕರ್‌ ಹಾಡುತ್ತಿದ್ದಳು. 

ರಮಾ ಎಂ. ಎನ್‌.

ಟಾಪ್ ನ್ಯೂಸ್

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

1-aaaaaa

BJP ಮೋದಿ ಮಾಡೆಲ್ ಹೆಸರಿನಲ್ಲಿ ಚೊಂಬಿನ ಮಾಡೆಲ್ ನೀಡಿದೆ: ಸುರ್ಜೇವಾಲ

1-weqwewqe

Davangere: 10 ರೂ.ಗಳ ನಾಣ್ಯ ರೂಪದಲ್ಲಿ 25 ಸಾವಿರ ರೂ. ಠೇವಣಿ ಕಟ್ಟಿದ ಅಭ್ಯರ್ಥಿ!

Exam

CET ಸುಗಮವಾಗಿ ನಡೆದಿದೆ: ಆಕ್ಷೇಪಣೆ ಸಲ್ಲಿಕೆಗೆ ಏ.27ರವರೆಗೆ ಅವಕಾಶ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

1-aaaaaa

BJP ಮೋದಿ ಮಾಡೆಲ್ ಹೆಸರಿನಲ್ಲಿ ಚೊಂಬಿನ ಮಾಡೆಲ್ ನೀಡಿದೆ: ಸುರ್ಜೇವಾಲ

1-weqwewqe

Davangere: 10 ರೂ.ಗಳ ನಾಣ್ಯ ರೂಪದಲ್ಲಿ 25 ಸಾವಿರ ರೂ. ಠೇವಣಿ ಕಟ್ಟಿದ ಅಭ್ಯರ್ಥಿ!

Minchu

Bidar; ಬಿರುಗಾಳಿ‌ ಸಹಿತ ಭಾರಿ ಮಳೆ :ಸಿಡಿಲು ಬಡಿದು‌ ರೈತ ಸಾವು

1-wewqewqe

Kalaburgi: ಮಹಿಳೆಯ ಬಾತ್ ರೂಮ್ ವಿಡಿಯೋ ರೆಕಾರ್ಡ್ ಮಾಡಿದ ಸೆಕ್ಯೂರಿಟಿ ಗಾರ್ಡ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.