ಜೀವನ-ಪರೀಕ್ಷೆ
Team Udayavani, Apr 7, 2017, 3:45 AM IST
ಬಾಲ್ಯದ ಆಟ ಆ ಹುಡುಗಾಟ ಇನ್ನೂ ಮರೆತಿಲ್ಲ’ ಆಹಾ…! ಬಾಲ್ಯದ ತುಂಟಾಟಗಳನ್ನು ನೆನಪು ಮಾಡಿಕೊಡುವಂತಹ ಎಷ್ಟೊಂದು ಸುಂದರ ಸಾಲುಗಳು.
ಇಂದಿನ ಜಂಜಾಟದ ಜೀವನದ ನಡುವೆ ಒಮ್ಮೆ ಬಿಡುವು ಮಾಡಿಕೊಂಡು ನಾವು ಸಾಗಿಬಂದ ಬಾಳ ಪಯಣವನ್ನೊಮ್ಮೆ ತಿರುಗಿ ನೋಡಿದರೆ ಎಷ್ಟೊಂದು ಸುಂದರ ಆ ಬಾಲ್ಯದ ನೆನಪುಗಳು.
ಮುಂಜಾನೆ ಬೇಗನೆ ಎಚ್ಚರವಾಗಿದ್ದರೂ, ಶಾಲೆಗೆ ಹೊರಡುವ ಸಮಯವಾಯಿತೆಂದು ತಿಳಿದಿದ್ದರೂ, ತಿಳಿಯದಂತೆ ನಟಿಸಿ, ಅಮ್ಮನ ಕರೆಗಾಗಿಯೇ ಕಾಯುತ್ತಾ ನಿದ್ರೆಯ ನಾಟಕವಾಡಿ ಹಾಸಿಗೆಯಲ್ಲೇ ಮಲಗಿಕೊಂಡಿರುತ್ತಿದ್ದ ಆ ಸುಂದರ ನೆನಪುಗಳ ಅನುಭವ ಎಷ್ಟೊಂದು ಮಧುರ. ಇಂದಿನ ಕಾರು-ಬಸ್ಸುಗಳಲ್ಲಿ ಮನೆಯಿಂದ ಎಲ್ಲೋ ದೂರ ಇರುವ ಶಾಲೆಗಳಿಗೆ ಪ್ರಯಾಣವಾಗಿರಲಿಲ್ಲ ಅಂದು. ಮನೆಯ ಅತೀ ಸಮೀಪವಿರುವ ಶಾಲೆಗಳಿಗೆ ಅಚ್ಚುಮೆಚ್ಚಿನ ಸ್ನೇಹಿತರೊಂದಿಗೆ ಕೂಡಿಕೊಂಡು ಒಂದಿಷ್ಟು ತರಲೆ ಮಾಡಿಕೊಂಡು, ಯಾರದೋ ತೋಟಕ್ಕೆ ಕಲ್ಲೆಸೆದು ಅವರಿಂದ ಒಂದಷ್ಟು ಬೈಗುಳಗಳ ಸುರಿಮಳೆಯನ್ನೇ ಸುರಿಸಿಕೊಂಡರೂ ಅದನ್ನೆಲ್ಲ ಲೆಕ್ಕಿಸದೇ ಕದ್ದು ತಂದ ಹಣ್ಣುಗಳನ್ನು ಗೆಳೆಯರೆಲ್ಲಾ ಸೇರಿ ತಿನ್ನುವುದೇ ಏನೋ ಒಂದು ರೀತಿಯ ಖುಷಿಯ ಅನುಭವ. ಅಂತಹ ಅನುಭವಗಳಿಂದಲೇ ಸಿಕ್ಕಿದ್ದನ್ನು ಒಬ್ಬರಿಗೊಬ್ಬರು ಹಂಚಿ ತಿನ್ನುವ ಮತ್ತು ನಮ್ಮ ತುಂಟಾಟಗಳಿಂದ ಇನ್ನೊಬ್ಬರ ಮನಸ್ಸಿಗೆ ಆಗುವ ನೋವುಗಳನ್ನು ಅರಿತುಕೊಳ್ಳುವಂತಹ ಎಷ್ಟೋ ಜೀವನದ ಪಾಠಗಳನ್ನು ಕಲಿತುಕೊಂಡ ನಿದರ್ಶನಗಳೂ ಇವೆ.
ಅಂದು ನಮ್ಮ ಪಾಲಿಗೆ ಶಾಲೆಯ ಪರೀಕ್ಷೆಗಳೆಂದರೆ ಮೌಲ್ಯಾಧಾರಿತ ಜೀವನ ಶೈಲಿಯನ್ನು ಎಷ್ಟರಮಟ್ಟಿಗೆ ಬದುಕಲು ಕಲಿತಿದ್ದೇವೆ ಎಂಬುವುದನ್ನು ಅಳೆಯುವ ಒಂದು ಸಾಧನ ಮಾತ್ರವಾಗಿತ್ತು. ಹಾಗಾಗಿ ಅಂಕಗಳ ಕಡೆಗೆ ಅಷ್ಟೊಂದು ಗಮನಹರಿಸದೇ “ಉತ್ತೀರ್ಣ’ ಎಂಬ ಒಂದೇ ಪದದ ನಿರೀಕ್ಷೆಯೊಂದಿಗೆ ಪರೀಕ್ಷೆಯ ನಂತರದ ರಜೆಯ ಸವಿಯನ್ನು ಸವಿಯುವ ದಿನಗಳಿಗಾಗಿ ಮನಸ್ಸು ಕಾಯುತ್ತಿತ್ತು.
ಆದರೆ ಇಂದು…
ಶಾಲೆಯ ಪರೀಕ್ಷೆಗಳು ಶುರುವಾಗುವುದಕ್ಕಿಂತ ಮೊದಲೇ ಪರೀಕ್ಷೆಯ ಭೀತಿಯಲ್ಲಿ ಮಕ್ಕಳು ಅತ್ಯಮೂಲ್ಯವಾದ ಜೀವನವನ್ನೇ ಕೊನೆಗೊಳಿಸುವ ಆತ್ಮಹತ್ಯೆಯೆಂಬ ಹಾದಿಯನ್ನು ತುಳಿಯುತ್ತಾರೆಂದರೆ, ಇಂದಿನ ಮಕ್ಕಳ ಮನಃಸ್ಥಿತಿ ಎಲ್ಲಿಯವರೆಗೆ ಯಾಂತ್ರಿಕ ಮಟ್ಟವನ್ನು ಮುಟ್ಟಿದೆ ಎಂಬುದನ್ನು ಚಿಂತಿಸಲೇಬೇಕು.
ಇನ್ನೂ ಮನೆಯವರೊಂದಿಗೆ, ಸ್ನೇಹಿತರೊಂದಿಗೆ, ನೆರೆಹೊರೆಯವರೊಂದಿಗೆ ಬೆರೆತು, ಜೀವನದಲ್ಲಿ ಎದುರಾಗುವ ಕಷ್ಟಗಳನ್ನು ಧೈರ್ಯದಿಂದ ಎದುರಿಸುವ ಪಾಠಗಳನ್ನು ಕಲಿಯಬೇಕಾದ ಮುಗ್ಧ ಮನಸ್ಸುಗಳು ಯಾವುದೋ ಒಂದು ಸಣ್ಣ ಪರೀಕ್ಷೆಯ ನೆಪದಿಂದ ಇಡೀ ಜೀವನವನ್ನೇ ಕೊನೆಗೊಳಿಸುವ ಮಟ್ಟಕ್ಕೆ ಚಿಂತಿಸುತ್ತಿದೆಯೆಂದರೆ ಇದು ನಮ್ಮ ಇಂದಿನ ಪೀಳಿಗೆ ಎಷ್ಟು ದುರ್ಬಲ ಮನಃಸ್ಥಿತಿಯನ್ನು ಹೊಂದಿದೆ ಎಂಬುವುದಕ್ಕೆ ಒಂದು ಉದಾಹರಣೆಯಷ್ಟೇ.
ಒಂದು ರೀತಿಯಲ್ಲಿ ಮಕ್ಕಳಿಗೆ ಸಣ್ಣಪುಟ್ಟ ಕಷ್ಟಗಳ ಅರಿವೇ ಇಲ್ಲದಂತೆ ಬೆಳೆಸುವ ಇಂದಿನ ತಂದೆ-ತಾಯಿಯರ ಅತಿಯಾದ ಪ್ರೀತಿ ಮತ್ತು ಮಕ್ಕಳ ಬಗೆಗಿನ ಅತಿಯಾದ ನಿರೀಕ್ಷೆಗಳು, ಮಕ್ಕಳ ಮಾನಸಿಕ ಒತ್ತಡವನ್ನು ಅಧಿಕಗೊಳಿಸುತ್ತಿವೆಯೇ? ಇನ್ನೂ ಜೀವನವೆಂದರೆ ಏನೆಂದು ಅರಿಯದ ಮನಸ್ಸುಗಳು ಶಾಲೆಯ ಪರೀಕ್ಷೆಗಳನ್ನೇ ಮುಂದಿನ ಇಡೀ ಜೀವನವನ್ನು ನಿರ್ಧರಿಸುವ ಮಾಪಕಗಳೆಂದುಕೊಂಡಿರುವರೇ?- ಈ ಬಗ್ಗೆ ನಾವಿಂದು ಚಿಂತಿಸಲೇಬೇಕು. ಜೀವನವೆಂಬುದು ಪರೀಕ್ಷೆಯ ಅಂಕಗಳಿಗಷ್ಟೇ ಸೀಮಿತವಲ್ಲ ಅದರಾಚೆಗೂ ಸುಂದರವಾದ ಬದುಕಿದೆ ಎಂಬುದನ್ನು ಇಂದಿನ ಯುವ ಮನಸ್ಸುಗಳಿಗೆ ತಿಳಿಯಪಡಿಸಬೇಕಾದ ಅನಿವಾರ್ಯತೆ ಇಂದು ನಮ್ಮ ಮುಂದಿದೆ. ಇಲ್ಲವಾದಲ್ಲಿ ಮುಂದೊಂದು ದಿನ ದುರ್ಬಲ ಮನಃಸ್ಥಿತಿಯ ಸಮಾಜ ನಿರ್ಮಾಣವಾಗುವುದರಲ್ಲಿ ಯಾವುದೇ ಸಂಶಯವಿಲ್ಲ.
ಶಮೀನಾ ಎಸ್., ಬೈಲೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Chitradurga; ನಾವು ಯಾರನ್ನೂ ಕಾಯಲ್ಲ, ನಾಮಿನೇಷನ್ ಪಕ್ಕಾ…: ಎಂ.ಚಂದ್ರಪ್ಪ
ಬಂಧನದಲ್ಲಿರುವ ಪತಿಯ ಬೆಂಬಲಕ್ಕಾಗಿ ವಾಟ್ಸ್ಆ್ಯಪ್ ಅಭಿಯಾನ ಆರಂಭಿಸಿದ ಕೇಜ್ರಿವಾಲ್ ಪತ್ನಿ
Sathish Ninasam- Rachita Ram: ಮ್ಯಾಟ್ನಿಯಲ್ಲಿ ಹಾರರ್ ಶೋ
ಕೋರ್ಟ್ ಮೇಲೆ ಪಟ್ಟಭದ್ರರ ಒತ್ತಡ: ವಕೀಲರ ಪತ್ರ
Income Tax; ಕಾಂಗ್ರೆಸ್ ಗೆ ಐಟಿ ಶಾಕ್; 1700 ಕೋಟಿ ರೂ ನೋಟಿಸ್ ನೀಡಿದ ಆದಾಯ ತೆರಿಗೆ ಇಲಾಖೆ