ಸುವರ್ಣ ಕಾಲ
Team Udayavani, Jul 21, 2017, 5:40 AM IST
ಚಿನ್ನಾ! ಬಂಗಾರ! ಓಹ್ ನಾನೇನು ಯಾರನ್ನೋ ಮುದ್ದು ಮಾಡ್ತಾ ಕರೀತಾ ಇದ್ದೇನೆ ಅಂದೊಳ್ಳಬೇಡಿ. ನಾನು ಹೇಳ್ತಾ ಇರೋದು ಅಪ್ಪಟ ಚಿನ್ನಾಭರಣದ ವಿಚಾರ. ಚಿನ್ನ ಅಂದಾಕ್ಷಣ ವಿಕೇಂದ್ರಿಕೃತವಾಗಿದ್ದ ಹೆಣ್ಣುಮಕ್ಕಳ ಮನಸ್ಸು ಆಕರ್ಷಣೆಗೊಂಡು, ಚಿನ್ನದತ್ತ ಏಕಾಗ್ರತೆಗೆ ಒಳಗಾಗುತ್ತೆ ಅನ್ನೋದು ಒಪ್ಪುವಂತಹ ಮಾತು. ಲೌಕಿಕ ಮನಸ್ಸುಳ್ಳವರಿಗಂತೂ ಈ ಹೊನ್ನು ಕೂಡಿಡಲು ಸಂಪತ್ತಿನ ರೂಪವೂ ಹೌದು, ತೋರ್ಪಡಿಕೆಯ ವಸ್ತುವೂ ಹೌದು. ಸಂಭ್ರಮಾಚರಣೆಯ ಸಂಕೇತವಾಗಿ, ಸಮಾರಂಭಗಳಲ್ಲಿ ಸೌಂದರ್ಯ ವರ್ಧನೆಗಾಗಿಯೂ ಆಭರಣ ಮಾಮೂಲಿ. ಅದರಲ್ಲೂ ನವ ವಿನ್ಯಾಸಗಳ ಆಕರ್ಷಣೆ ಹೊಸತೇನಲ್ಲ.
ಒಂದೊಂದು ಮೂಲೆಯಲ್ಲಿ ಒಂದೊಂದು ನಮೂನೆಯ ಒಡವೆಗಳ ವಿನ್ಯಾಸಗಳ ವಿಭಿನ್ನತೆ ನಮ್ಮ ದೇಶದ ಸಾಂಸ್ಕೃತಿಕವಾದ ವೈವಿಧ್ಯದ ಪ್ರತೀಕವೂ ಹೌದು. ಕೆಲವು ಮನೆತನಗಳಂತು ಪಾರಂಪರಿಕವಾದ ಒಡವೆಗಳು ತಲೆಮಾರಿನಿಂದ ತಲೆಮಾರಿಗೆ ಹಸ್ತಾತಂತರಗೊಂಡು ಬಂದಿರುತ್ತದೆ. ಹಿರಿಯರಿಂದ ಬಂದ ಒಡವೆಗಳನ್ನು ಜೀವದಷ್ಟೇ ಬೆಲೆಕೊಟ್ಟು ಕಾಪಾಡುವ ಮನಸ್ಸು ಕೆಲವು ಕಿರಿಯರದ್ದು. ಇನ್ನೊಂದೆಡೆ ಹೆಣ್ಣುಮಕ್ಕಳು ದುಡಿದದ್ದು, ಕೂಡಿಟ್ಟದ್ದು, ಚೀಟಿ ಹಾಕಿದ್ದು , ಕೈ ಸಾಲ- ಹೀಗೆ ಎಲ್ಲವನ್ನು ಕಲೆಹಾಕಿ ಬಂಗಾರದ ಆಭರಣವನ್ನು ಮಾಡಿಸುತ್ತಾರೆ. ಅದೇನೆ ಇರ್ಲಿ, ಚಿನ್ನದ ಮೌಲ್ಯ ಗಗನ ಮುಟ್ಟುವಂತಹ ಅದೆಷ್ಟೇ ಎತ್ತರದ್ದಾಗಿದ್ದರೂ ಸ್ವಲ್ಪ ಪ್ರಮಾಣದ್ದಾದರೂ ಚಿನ್ನ ತನ್ನ ಪಾಲಿನದಾಗಿಸಿಕೊಳ್ಳಬೇಕೆಂಬ ಮನುಷ್ಯನ ಹಂಬಲ ಹೆಚ್ಚಿನದ್ದು ಮತ್ತು ಅದನ್ನು ಜೋಪಾನ ಮಾಡುವ ಕಾಳಜಿ ಅದಕ್ಕಿಂತ ಹೆಚ್ಚಿನದ್ದು. ನಾವು ಇಷ್ಟು ಇಷ್ಟ ಪಟ್ಟು ಕೊಳ್ಳುವ ಚಿನ್ನಾಭರಣ ಕಳೆದು ಹೋಗಬಾರ್ಧು ಅಂತ ಮಾಡುವ ಜೋಪಾನದ ಹಾಗೆ ಕರಗಿಯೂ ಹೋಗ್ಬಾರ್ಧು ಅನ್ನುವ ಜಾಗ್ರತೆಯೂ ಮುಖ್ಯ ಅಲ್ವಾ?
ಈ ಚಿನ್ನ ಆಧುನಿಕ ಆವರ್ತಕ ಕೋಷ್ಟಕದ 79 ನೇ ಮನೆಯ ನಿವಾಸಿ. ಆ ಮನೆಯಲ್ಲಿ ಇದನ್ನು ಕರೆಯೋದು ಅರ್ಥಾತ್ ರಸಾಯನಶಾಸ್ತ್ರದ ಪರಿಭಾಷೆಯಲ್ಲಿ ಚಿನ್ನದ ಹೆಸರು ಓರಮ್ . ಏನೋ ಚಿನ್ನದ ಕಥೆ ಹೇಳ್ತಾ ಇದ್ದವಳು ಇದ್ದಕ್ಕಿದ್ದಂತೆ ವಿಜ್ಞಾನದ ಕಥೆ ಶುರು ಮಾಡಿದು ಅಂತ ಅಂದೊಳ್ಳಬೇಡಿ.
ಹೌದು, ಹಳೇ ಚಿನ್ನದ ಒಡವೆ ಆಗಿದ್ರೆ ಪದೇ ಪದೇ ಹಾಕೊಂಡು ಡಲ್ ಹೊಡೀತಾ ಇರತ್ತೆ ಆಗೇನ್ ಮಾಡ್ತೀರಿ ? ಹ್ಞುಂ, ಗೊತ್ತು ಪಾಲಿಶ್ಗೆ ಕೊಡ್ತೀರಿ ಅಂತ. ಅದೇ ಹೊತ್ತಿಗೆ ನಮ್ ಮನೆ ಎದುರಿಗೆ ಬಂದು, “”ಅಮ್ಮ , ನಿಮ್ಮ ಮನೆಯಲ್ಲಿ ಹಳೆ ಚಿನ್ನದೊಡವೆ ಇದ್ದರೆ ಕೊಡೀಮ್ಮ. ನಾವು ನಿಮ್ಮ ಎದುರಿಗೆ ಥಳ ಥಳ ಅಂತ ಪಾಲಿಶ್ ಮಾಡಿ ಕೊಡ್ತೇವೆ” ಅನ್ನುತ್ತಾರೆೆ. ನೀವು “”ಇಲ್ಲಾ, ಬೇಡ” ಅಂದ್ರೂ, “”ನಿಮ್ಗೆ ನಂಬಿಕೆ ಬರ್ಲಿಲ್ವಾ? ಅಮ್ಮ ಒಂದು ಚಿಕ್ಕ ಕಿವಿಯೋಲೆ ಕೊಟ್ಟು ನಮ್ಮ ಕೈ ಚಮತ್ಕಾರ ನೋಡೀಮ್ಮ. ಮತ್ತೂ ಒಪ್ಪದಿದ್ರೆ ನೀವು ಕೈಲಾದಷ್ಟು ಚಾರ್ಜ್ ಕೊಡೀಮ್ಮ” ಅಂದು ಬಿಡುತ್ತಾರೆ. ಮಾತಿಗೆ ಮರುಳಾಗಿ ಕೊಟ್ಟ ಕಿವಿಯೋಲೆ ಕೈಯಲ್ಲೇನೋ ಪಾಲಿಶ್ ನಂತರ ಥಳಥಳ ಅಂತ ಹೊಳೆಯೋದೇನೋ ನಿಜ. ನಂಬಿಕೆ ಬರ್ಲಿಕ್ಕೆ ಮತ್ತೇನು ಬೇಕು? ಮನೆ ಒಳಗಿನ ಮತ್ತಷ್ಟು ಚಿನ್ನ ಹೊರಗೆ ಅನುಮಾನ ಬೇಕಾ?
ಹೌದು, ಈ ಹೊಳಪಿನ ಮುಂದೆ ಬೇರೇನು ಕಾಣಲ್ಲ. ಈ ಭರದಲ್ಲಿ ಅದರ ಮೊದಲಿನ ತೂಕಕ್ಕೂ ನಂತರದ ತೂಕಕ್ಕೂ ವ್ಯತ್ಯಾಸ ಏನಾದ್ರು ಗಮನಿಸಬಹುದಾ? ಯಾಕೆ ತೂಕದ ಬಗ್ಗೆ ಮಾತಾಡ್ತಾ ಇದ್ದಾಳೆ ಅಂತ ಅನುಮಾನ ಕಾಡ್ತಾ ಉಂಟಾ? ನಿಮ್ಮ ಚಿನ್ನವನ್ನು ಹೊಳೆಯಿಸಲು ಅವರು ಉಪಯೋಗಿಸಿದ ಆ ದ್ರಾವಣ ಯಾವುದು ಅಂತ ನಿಮ್ಗೆ ಗೊತ್ತಾ? ಅದೇನು ಸೋಪಲ್ಲ, ನೀರಲ್ಲ, ಮ್ಯಾಜಿಕ್ ಲಿಕ್ವಿಡ್ ಕೂಡ ಅಲ್ಲ !
ಆ ದ್ರಾವಣ ಪೊಟ್ಯಾಶಿಯಂ ಸಯನೈಡ್. ಈ ಪೊಟ್ಯಾಶಿಯಂ ಅದೇ ಬಂಗಾರದೂರಿನ 19ನೇ ಮನೆಯ ನಿವಾಸಿ. ಇನ್ನು ಈ ಊರ ಹೊರಗಿನ ಸಯನೈಡ್ ಬಗ್ಗೆ ಕೇಳಿದ್ದೀರಲ್ವಾ? ಅದೊಂದು ಸಂಯುಕ್ತ ರಾಸಾಯನಿಕ. ಇವೆರಡು ರಾಸಾಯನಿಕ ಬಂಧದೊಂದಿಗೆ ಸೇರಿ ಪೊಟ್ಯಾಶಿಯಂ ಸಯನೈಡ್ ಉಂಟಾಗುತ್ತದೆ. ಈ ದ್ರಾವಣದಲ್ಲಿ ಚಿನ್ನವನ್ನು ಪಾಲಿಶ್ ಮಾಡಿದ್ರೆ ಅರ್ಧಾಂಶ ಚಿನ್ನ ದ್ರಾವಣದ ಪಾಲಾಗುತ್ತದೆ ಅನ್ನೋದು ವಿಜ್ಞಾನ ಹೇಳುವ ಸತ್ಯಾಂಶ.
ಇದ್ರಿಂದ ಈವರೆಗೆ ಲಾಭ ಹೇಗೆ ಅಂತ ಕೇಳ್ತಿದ್ದೀರಾ? ಆ ದ್ರಾವಣದಲ್ಲಿರುವ ಚಿನ್ನವನ್ನ ಬೇರ್ಪಡಿಸ್ತಾರೆ. ಹನಿ ಹನಿ ಸೇರಿ ಹಳ್ಳ ಅಂದರೆ ಆಯ್ತಲ್ಲಾ ಅವರ ಜೀವನೋಪಾಯ. ಹೀಗೆ ಚಿನ್ನವನ್ನು ಬೇರ್ಪಡಿಸಲು ಮತ್ತೆ ಅದೇ ಊರಿನ 30ನೇ ಮನೆಯ ನಿವಾಸಿ ಸತುವನ್ನು ಕರೆಯುತ್ತಾರೆ ! ಇದು ತಾನು ಪೊಟ್ಯಾಶಿಯಂ ಸಯನೈಡ್ನೊಂದಿಗೆ ಬಂಧನಕ್ಕೊಳಪಟ್ಟು , ಚಿನ್ನವನ್ನು ವಿಮುಕ್ತಿಗೊಳಿಸುತ್ತದೆ. ಆನಂತರ ಸೋಸುವಿಕೆ ವಿಧಾನ ಬಳಸಿ ಚಿನ್ನವನ್ನ ಪಡೀತಾರೆ. ಒಂದಿಷ್ಟು ವಿಜ್ಞಾನ ತಿಳಿದವರು ಇಂತಹ ವಂಚಿಸುವ ಕೆಲಸ ಮಾಡ್ತಾರೆ ಅನ್ನೋದು ವಿಷಾದದ ಸಂಗತಿ.
ನಿಜ, ಪಾಲಿಶ್ಗೆ ಕೊಟ್ಟ ಮೊದಲೊಮ್ಮೆ, ಪಾಲಿಶ್ ಮುಗಿಸಿದ ನಂತರ ಮರಳಿಸುವ ಮುನ್ನ ಒಮ್ಮೆ ಚಿನ್ನಾಭರಣದ ತೂಕವನ್ನು ನಿಮ್ಮ ಕಣ್ಣೆದುರೆ ಪರೀಕ್ಷಿಸಿ ತೋರಿಸಿ, ಹೊಳಪನ್ನು ಹೆಚ್ಚಿಸಿ ಕೊಡುವ ಹಾಗೆ ಮಾಡಿದ ಕೆಲಸದಷ್ಟೇ ಬಿಲ್ ಹಾಕಿ ಕೊಡುವ ಆಭರಣ ಮಳಿಗೆಗಳೇ ಸುರಕ್ಷಿತ ಅನ್ನುವ ತಿಳುವಳಿಕೆ ಕೊಟ್ಟ ನಮ್ಮ ಕೆಮಿಸ್ಟ್ರಿ ಸರ್ ಥ್ಯಾಂಕ್ಯೂ ಸೊ ಮಚ್…
ಪಲ್ಲವಿ ಶೇಟ್
ತೃತೀಯ ಬಿ. ಎಸ್ಸಿ.
ಜಿ. ಶಂಕರ್ ಸರಕಾರಿ ಪ್ರಥಮ ದರ್ಜೆ ಕಾಲೇಜು ಉಡುಪಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Income Tax; ಕಾಂಗ್ರೆಸ್ ಗೆ ಐಟಿ ಶಾಕ್; 1700 ಕೋಟಿ ರೂ ನೋಟಿಸ್ ನೀಡಿದ ಆದಾಯ ತೆರಿಗೆ ಇಲಾಖೆ
ನಟ, ಕಾಂಗ್ರೆಸ್ ಮಾಜಿ ಸಂಸದ ಗೋವಿಂದ “ಶಿಂಧೆ ಸೇನೆ’ ಸೇರ್ಪಡೆ
ಕಂಗನಾ ವಿರುದ್ಧ ಪೋಸ್ಟ್: ಕೈ ನಾಯಕಿಗೆ ಟಿಕೆಟ್ ಡೌಟ್
Chandigarh: ಪುತ್ರನ ಬೆನ್ನಲ್ಲೇ ಪುತ್ರಿ ಜತೆಗೆ ಸಾವಿತ್ರಿ ಜಿಂದಾಲ್ ಬಿಜೆಪಿಗೆ
Vijayapura; ಬಂಜಾರರನ್ನು ಅವಮಾನಿಸಿಲ್ಲ, ವೋಟ್ ಬೇಡ ಎಂದಿಲ್ಲ: ಜಿಗಜಿಣಗಿ