ಚಿತ್ರಗಳು: ಕೀರ್ತಿ ಮಂಗಳೂರು
ಬಾಹುಬಲಿ ಸ್ವಾಮಿಯಾ ಮಸ್ತಕಾಭಿಷೇಕ..
ಶ್ರೀ ಗೋಮಟೇಶ್ವರ: ಬಾಲ್ಯದಿಂದಲೂ ನನ್ನ ಅತಿ ಪ್ರೀತಿಯ ಚಿಂತನೆ. ನಾನು ಐದನೆಯ ತರಗತಿಯಲ್ಲಿ ಇದ್ದೆ ಅಂತ ನೆನಪು. ಮನೆಮಂದಿಯೆಲ್ಲ ಮರುದಿನ ಅಕ್ಕನಮನೆ- ಇನ್ನಕ್ಕೆ ಹೊರಡುವ ಸಿದ್ಧತೆಯಲ್ಲಿದ್ದೆವು. ಇನ್ನ ಅಂದರೆ, ಕಾರ್ಕಳ ತಾಲೂಕಿನ ಬೆಳ್ಮಣ್ ಮತ್ತು ಫಲಿಮಾರು ನಡುವಿನ ಊರು. ನಮ್ಮ ಮನೆ ಕಾರ್ಕಳದ ನೀರೆಬೈಲೂರು. ಬೈಲೂರಿನಿಂದ 8 ಮೈಲು ಕಾರ್ಕಳಕ್ಕೆ. ಅಲ್ಲಿಂದ ಸುಮಾರು 16 ಮೈಲು ಸಾಂತೂರು ಕೊಪ್ಪಲಕ್ಕೆ. ಕೊಪ್ಪಲದಿಂದ ಇನ್ನಕ್ಕೆ ಆಕಾಲದಲ್ಲಿ ಒಂದೂವರೆ ಮೈಲು ಕಾಲ್ನಡಿಗೆ.
ವೇಣೂರಿನ ನಗುಮೊಗದ ಬಾಹುಬಲಿ

ಸಿದ್ಧತೆ ನಡೆಯುತ್ತಿದ್ದಂತೆ ಅಪ್ಪ- ""ಕಾರ್ಕಳದಲ್ಲಿ ಅವಕಾಶವಾದರೆ ಬಸ್ನಿಂದ ಗೊಮ್ಮಟೇಶ್ವರನನ್ನು ಮನು ನೋಡಬಹುದು' ಎಂದರು. ನಾನು ಬುದ್ಧಿ ತಿಳಿದ ಬಳಿಕ ಪ್ರಥಮ ಬಾರಿಯಾಗಿ ಆ ಹಾದಿಯಲ್ಲಿ ಹೋಗುವವನಿದ್ದೆ. ಗೋಮಟೇಶ್ವರ: ಏನು ವಿಶೇಷ ? ಕತೆ ಏನು? ಕಾರ್ಕಳದಲ್ಲಿ ನಾನು ನೋಡುವುದಾದರೂ ಹೇಗೆ? ಹೀಗೆ ಪ್ರಶ್ನೆಗಳ ಮೇಲೆ ಪ್ರಶ್ನೆಗಳು. ""ಅಮ್ಮಾ, ಗೋಮಟೇಶ್ವರ ಕತೆ ಹೇಳುತ್ತೀರಾ?' ಅಂತ ಕೇಳಿದೆ. ""ರಾತ್ರಿ ಊಟ ಆಗಲಿ. ಆ ಮೇಲೆ ಹೇಳೆ¤àನೆ. ಕತೆ ಕೇಳುತ್ತಾ ನಿದ್ದೆ ಮಾಡು. ಬೆಳಗ್ಗೆ ಕಾರ್ಕಳದಲ್ಲಿ ನೋಡು' ಎಂದರು.
ಸಂಜೆಯ ಬಳಿಕ ಇದೇ ಚಿಂತೆ. ಗಬಗಬನೆ ಊಟ ಮಾಡಿದೆ. ಅಮ್ಮನಿಗೂ ಬೇಗಬೇಗ ಊಟ ಮಾಡುವಂತೆ ಒತ್ತಾಯಿಸಿದೆ. ಅಮ್ಮ ಕತೆ ಆರಂಭಿಸಿದರು.
** ** ** **
ಕ್ಷೀರಾಭಿಷೇಕದ ಸಂಭ್ರಮ

ಭರತಖಂಡದ ಬಲುದೊಡ್ಡ ಸಾಮ್ರಾಜ್ಯ. ಪೌದನಪುರ ಅದರ ಕೇಂದ್ರ. ಆದಿನಾಥನಿಗೆ ಯಶಸ್ವಿನಿ ಎಂಬ ಪತ್ನಿಯಲ್ಲಿ ಭರತನ ಸಹಿತ ನೂರು ಪುತ್ರರು, ಬ್ರಾಹ್ಮಿ ಎಂಬ ಪುತ್ರಿ. ಇನ್ನೋರ್ವ ಪತ್ನಿ ಸುನಂದಾದೇವಿಯಲ್ಲಿ ಜನಿಸಿದ್ದು ಬಾಹುಬಲಿ ಎಂಬ ಪುತ್ರ; ಸುಂದರಿ ಎಂಬ ಪುತ್ರಿ. ಒಟ್ಟಾಗಿ ಭರತನೇ ಹಿರಿಯ ಪುತ್ರ. ಆತ ಮುಂದೆ ರಾಜ್ಯ ಆಳುವವನಾಗಿದ್ದ. ಆದರೂ, ಆದಿನಾಥರು ಇಬ್ಬರಿಗೂ ಸಮಾನ ಪ್ರಾಶಸ್ತÂ ನೀಡಿದರು. ಯುದ್ಧವಿದ್ಯೆಗಳಲ್ಲಿಯೂ ಅವರು ಪಾರಂಗತರಾದರು.
ವೇಣೂರಿನ ಬಾಹುಬಲಿಗೆ ಚಂದನದ ಅಭಿಷೇಕ
ಆ ಸಂದರ್ಭದಲ್ಲಿ ದೀಕ್ಷೆ ವಹಿಸಿಕೊಳ್ಳಲು ಮುಂದಾದ ಆದಿನಾಥರು ತಮ್ಮ ರಾಜ್ಯವನ್ನು ಮಕ್ಕಳಲ್ಲಿ ಹಂಚಿಕೊಡುತ್ತಾರೆ. ಹಿರಿಯವನಾದ್ದರಿಂದ ಭರತನು ಅರಸ; ಬಾಹುಬಲಿಯು ಯುವರಾಜ. ಕಾಲ ಕ್ರಮೇಣ ಭರತನ ಆಯುಧ ಶಾಲೆಯಲ್ಲಿ ಚಕ್ರರತ್ನವು ಉದ್ಭವಿಸುತ್ತದೆ. ಸಾಂಪ್ರದಾಯದಂತೆ ದಿಗ್ವಿಜಯಕ್ಕೆ ಹೊರಟ ಭರತನು ಆರು ಖಂಡಗಳನ್ನು ಗೆದ್ದು ಹಿಂತಿರುಗತ್ತಾನೆ. ಆದರೆ, ಮರಳಿ ಪುರಪ್ರವೇಶದ ಸಂದರ್ಭದಲ್ಲಿ ಚಕ್ರ ಒಳಬರಲು ನಿರಾಕರಿಸುತ್ತದೆ. ಭರತನಿಗೆ ತಲೆಬಾಗದ ಅರಸರಿದ್ದಾರೆಂದು ಇದರ ಸೂಚನೆ. ಸಹೋದರರೇ ಆ ಅರಸರು. ಭರತನ ಸೂಚನೆಯಂತೆ ಶಾಸನ ಬರೆದುಕೊಟ್ಟ ಸಹೋದರರು ಭರತನ ದುರಾಸೆಯಿಂದ ಜಿಗುಪ್ಸೆಗೊಂಡು ಆದಿನಾಥರಲ್ಲಿ ದೀಕ್ಷೆ ಪಡೆಯುತ್ತಾರೆ. ಬಾಹುಬಲಿ ಮಾತ್ರ ಈಗ ಯುದ್ಧಸನ್ನದ್ಧ.
(ಕತೆಗೆ ಪೂರಕವಾಗಿ ಈಗ ಸಂಗ್ರಹಿಸಿದ ಆಕರ: ತ್ಯಾಗ ಸಂದೇಶ- ಸ್ಮರಣ ಸಂಚಿಕೆ) ಈ ಯುದ್ಧದಿಂದ ಪ್ರಜೆಗಳ ಸಾವುನೋವು ಸಂಭವಿಸಬಾರದು ಎಂಬ ಉದ್ದೇಶದಿಂದ ಭರತ ಬಾಹುಬಲಿಗಳಿಬ್ಬರೇ ಧರ್ಮಯುದ್ಧಕ್ಕೆ ತೀರ್ಮಾನಿಸುತ್ತಾರೆ).
ಬಾಹುಬಲಿ ಹೆಸರೇ ಸೂಚಿಸುವಂತೆ ಮಹಾಪರಾಕ್ರಮಶಾಲಿ. ದೃಷ್ಠಿಯುದ್ಧ, ಜಲಯುದ್ಧ, ಮಲ್ಲಯುದ್ಧಗಳಲ್ಲೆಲ್ಲಾ ಬಾಹುಬಲಿಗೇ ಜಯ. ಭರತನನ್ನು ಎತ್ತಿ ಹಿಡಿದ ಬಾಹುಬಲಿಯು ಆತನನ್ನು ನೆಲಕ್ಕೆ ಅಪ್ಪಳಿಸದೆ ಕೆಳಕ್ಕೆ ಇಳಿಸಿದಾಗ, ಭರತನು ಚಕ್ರರತ್ನವನ್ನು ಪ್ರಯೋಗಿಸುತ್ತಾನೆ. ಆ ಚಕ್ರರತ್ನವು ಬಾಹುಬಲಿಯನ್ನು ನಮಿಸುತ್ತದೆ. ಆ ಕ್ಷಣದಲ್ಲಿ, ಸಹೋದರನ ದುರಾಸೆಯ ಬಗ್ಗೆ ಜಿಗುಪ್ಸೆಗೊಂಡ ಬಾಹುಬಲಿಯು ತಾನು ಗೆದ್ದ ಸಾಮ್ರಾಜ್ಯವನ್ನು ಭರತನಿಗೆ ಹಿಂತಿರುಗಿಸಿ, ತಾನು ಆದಿನಾಥರಲ್ಲಿ ದೀಕ್ಷೆ ಪಡೆದು ತಪೋನಿರತರಾಗುತ್ತಾರೆ. ಮಾನಕಷಾಯವನ್ನು ತ್ಯಜಿಸಿ ಕೇವಲ ಜ್ಞಾನವನ್ನು ಪಡೆಯುತ್ತಾರೆ. ಶಾಂತಿ ತ್ಯಾಗದ ಸಂದೇಶವನ್ನು ಪಡೆಯುತ್ತಾರೆ. ಶಾಂತಿತ್ಯಾಗದ ಸಂದೇಶವನ್ನು ಮನುಕುಲಕ್ಕೆ ಸಾರುತ್ತಾರೆ.
** ** ** **
ಎಂತಹಾ ಅದ್ಭುತವಾದ ತ್ಯಾಗ. ಎಂತಹಾ ವಿಶಿಷ್ಠವಾದ ಶಾಂತಿ. ಮರುದಿನ ಕಾರ್ಕಳಕ್ಕೆ ಬಂದು ಇನ್ನದ ಕಡೆಗೆ ತೆರಳುವ ಬಸ್ನಲ್ಲಿ ನನ್ನನ್ನು ಎಡಭಾಗದಲ್ಲಿ ಕುಳ್ಳಿರಿಸುತ್ತಾರೆ. ಆನೆಕೆರೆ ದಾಟಿದ ಕೂಡಲೇ ನನ್ನನ್ನು ನಿಲ್ಲಿಸು ಸೂಚಿಸುತ್ತಾರೆ. ಸಹಪ್ರಯಾಣಿಕರದ್ದೂ ಸಹಸ್ಪಂದನ! ಬಸ್ ನಿಧಾನಗತಿಯಲ್ಲಿ ಚಲಿಸುತ್ತಿದ್ದಂತೆ ಗೋಮಟೇಶ್ವರ ವಿಗ್ರಹದ ದರ್ಶನವಾಗುತ್ತದೆ. ಕರ್ಗಲ್ಲಿನ ಬೆಟ್ಟದ ಮೇಲೆ ವಿರಾಜಮಾನ. ಬಸ್ ಮೂಲಕ ಶಿರಭಾಗವಷ್ಟೇ ಸ್ಪಷ್ಟವಾಗಿ ಕಾಣಿಸುತ್ತದೆ.
ಇನ್ನದಿಂದ ಹಿಂದೆ ಬರುವಾಗ, ಇಲ್ಲೇ ಇಳಿದು ಗೋಮಟಬೆಟ್ಟಕ್ಕೆ ಹೋಗೋಣ ಎಂಬ ಆದಿನದ ಆಶ್ವಾಸನೆಯನ್ನು ಎರಡೇ ದಿನದಲ್ಲಿ ಅಪ್ಪ ಕಾರ್ಯರೂಪಕ್ಕೆ ತಂದರು! ನಾನು ಗೊಮ್ಮಟನನ್ನು ನೋಡಿದೆ. ಎಂತಹಾ ಅದ್ಭುತ ಅನುಭವ. ಇಂದಿಗೂ ಆ ಕ್ಷಣವನ್ನು ಊಹಿಸಿ ನಾನು ರೋಮಾಂಚನಗೊಳ್ಳುತ್ತೇನೆ.
** ** ** **
ಕರ್ನಾಟಕದಲ್ಲಿರುವ ಬಾಹುಬಲಿಯ ನಾಲ್ಕು ಏಕಶಿಲಾ ವಿಗ್ರಹಗಳು ಶಿಲ್ಪಕಲಾ ಸೌಂದರ್ಯಕ್ಕೆ ಸಂಬಂಧಿಸಿ ಜಗತ್ತಿನ ಅದ್ಭುತಗಳೆಂದೇ ಹೇಳಬಹುದು.
ಶ್ರವಣಬೆಳಗೊಳದ ಇಂದ್ರಗಿರಿಯ ಬೆಟ್ಟದಲ್ಲಿ ನಿಂತಿರುವ 58.8 ಅಡಿ ಎತ್ತರದ ಬಾಹುಬಲಿಯನ್ನು ಕ್ರಿ.ಶ. 981ರಲ್ಲಿ ಚಾವುಂಡರಾಯ ಕೆತ್ತಿಸಿದ. ಕಾರ್ಕಳದಲ್ಲಿ 42 ಅಡಿ ಎತ್ತರದ ಬಾಹುಬಲಿಯನ್ನು ಕ್ರಿ.ಶ. 1432ರಲ್ಲಿ ಭೈರರಸ ವೀರ ಪಾಂಡ್ಯ ಪ್ರತಿಷ್ಠಾಪಿಸಿದ. ತಿಮ್ಮಣ್ಣರಸ ಅಜಿಲರು ವೇಣೂರಿನಲ್ಲಿ 1604 ರಲ್ಲಿ 35 ಅಡಿ ಎತ್ತರದ ಬಾಹುಬಲಿಯನ್ನು ಪ್ರತಿಷ್ಠಾಪಿಸಿದರು. ಆಧುನಿಕ ಕಾಲಘಟ್ಟದಲ್ಲಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ 1982ರಲ್ಲಿ 39 ಅಡಿ ಎತ್ತರದ ಬಾಹುಬಲಿಯನ್ನು ಪ್ರತಿಷ್ಠಾಪಿಸಿದರು.
ಬಾಹುಬಲಿಗೆ ಸಾಮಾನ್ಯವಾಗಿ 12 ವರ್ಷಗಳಿಗೊಮ್ಮೆ ಮಹಾಮಸ್ತಕಾಭಿಷೇಕ ನಡೆಯುತ್ತದೆ.
** ** ** **
ಬಾಹುಬಲಿ ಏಕಶಿಲಾಮೂರ್ತಿ. ಸರ್ವಸ್ವವನ್ನೂ ತ್ಯಾಗ ಮಾಡಿದ ಮಹಾಚೇತನ. ಈ ಸಂದೇಶಗಳ ಆರಾಧನೆಯೇ ಮಹಾಮಸ್ತಕಾಭಿಷೇಕ.
ಈ ನಿಟ್ಟಿನಲ್ಲಿ ಆಧ್ಯಾತ್ಮಿಕ ಆಶಯಗಳೊಂದಿಗೆ ವೈಜ್ಞಾನಿಕ ಕಾರಣಗಳೂ ಇವೆ. ಬಾಹುಬಲಿ ಏಕಶಿಲಾ ಮೂರ್ತಿ. ಇತರ ದೇವತಾಮೂರ್ತಿಗಳಿಗಿಲ್ಲದ ವೈಶಿಷ್ಟÂ ಬಾಹುಬಲಿಗಿದೆ. ಈ ಮೂರ್ತಿಗೆ ಗರ್ಭಗುಡಿಯ ರಕ್ಷಣೆ ಇಲ್ಲ. ಮಳೆ ಗಾಳಿ ಬಿಸಿಲು ಇತ್ಯಾದಿ ಪ್ರಾಕೃತಿಕ ಘಟನೆಗಳು ಸಂಭವಿಸುತ್ತಲೇ ಇರುತ್ತವೆ. ಆದ್ದರಿಂದ, ದಿವ್ಯಮೂರ್ತಿಯನ್ನು ಪಾವನಗೊಳಿಸುವ ಆಶಯ ಮಹಾಮಸ್ತಕಾಭಿಷೇಕಕ್ಕೆ ಇರುತ್ತದೆ.
ಎಳನೀರು, ಹಾಲು, ಅಕ್ಕಿಹಿಟ್ಟು, ಗಂಧಚಂದನ ಮುಂತಾದ ಅಭಿಷೇಕಗಳು ನಡೆಯುತ್ತವೆ. ಒಂದೊಂದು ಅಭಿಷೇಕಕ್ಕೂ ಒಂದೊಂದು ರೂಪ ತಳೆಯುವ ಬಾಹುಬಲಿಯನ್ನು ನೋಡುವುದು ಅದ್ಭುತವಾದ ಅನುಭವ.
** ** ** **
ವೇಣೂರಿನ ಶ್ರೀ ಬಾಹುಬಲಿಗೆ ಈಗ ಮಹಾಮಸ್ತಕಾಭಿಷೇಕದ ಸಂಭ್ರಮ.
ಕಳೆದ 28 ವರ್ಷಗಳಲ್ಲಿ ಪತ್ರಕರ್ತನಾಗಿ ನಾನು ಆರು ಮಹಾಮಸ್ತಕಾಭಿಷೇಕಗಳನ್ನು ನೋಡಿದ್ದೇನೆ- ವರದಿ ಮಾಡಿದ್ದೇನೆ; ಶ್ರವಣ ಬೆಳಗೊಳ, ವೇಣೂರು ತಲಾ ಒಂದು ಬಾರಿ, ಕಾರ್ಕಳ, ಧರ್ಮಸ್ಥಳ ತಲಾ ಎರಡು ಬಾರಿ. ಪ್ರತಿಯೊಂದು ಕೂಡಾ ವಿಶಿಷ್ಠವಾದ ಅನುಭವ. ಈಗ ವೇಣೂರಿನ ಬಾಹುಬಲಿಯ ಮಹಾಮಸ್ತಕಾಭಿಷೇಕ ನೋಡುವ ಅವಕಾಶ ಒದಗಿ ಬಂದಿದೆ.
ರಂಗ್ಮಾ ರಂಗ್ಮಾ ರಂಗ್ಮಾರೇ ಪ್ರಭು, ಸಾರಾಹಿ ರಂಗ್ಮಾ ರಂಗ್ ಗಯೋರೇ.. ಹಾಡು ಗೋಮಟನ ಸಾನಿಧ್ಯದಲ್ಲಿ ಪ್ರತಿಧ್ವನಿಸಲಿದೆ.