ಕಾಶೀನಾಥ್ ಪುತ್ರನ ಮಧ್ಯರಾತ್ರಿಯ ಪ್ರಸಂಗ ಮತ್ತೆ ಶುರುವಾಗಿದೆ. ಅಕಾಲಿಕ ಮಳೆ, ಗಾಳಿ ಮತ್ತು ಚಳಿಯಿಂದಾಗಿ "12 ಅ ಮಧ್ಯರಾತ್ರಿ' ಚಿತ್ರದ ಚಿತ್ರೀಕರಣ ತಡವಾಗಿತ್ತಂತೆ. ನಿರ್ಮಾಪಕರು ಬೇರೊಂದು ಕಡೆಗೆ ಹೋಗಿದ್ದರಿಂದಲೂ ಚಿತ್ರೀಕರಣ ಕೆಲ ದಿನಗಳ ಕಾಲ ಸ್ಥಗಿತವಾಗಿತ್ತಂತೆ. ಅಂತೂ ಕಳೆದ ನವೆಂಬರ್ನಿಂದ ಮಳೆ, ಗಾಳಿ, ಚಳಿ ಎಲ್ಲವೂ ನಿಂತು ಹೋದ ಮೇಲೆ ಮತ್ತೆ ಚಿತ್ರಕ್ಕೆ ಚಾಲನೆ ದೊರೆತಿದೆ. ಹೀಗಾಗಿ ಶೇ.80 ರಷ್ಟು ಚಿತ್ರೀಕರಣ ಕಂಪ್ಲೀಟ್ ಆಗಿದೆಯಂತೆ. ಹೀಗೆ ಚಿತ್ರ ತಡವಾಗಿದ್ದಕ್ಕೆ ಒಂದಷ್ಟು ಕಾರಣಗಳನ್ನು ಕೊಡುತ್ತಾ ಹೋದರು ಕಾಶೀನಾಥ್.ಬಹುತೇಕ ರಾತ್ರಿ ವೇಳೆಯಲ್ಲೇ ಚಿತ್ರೀಕರಿಸಲಾಗಿದೆ. ಇದು ಪಕ್ಕಾ ಸಸ್ಪೆನ್ಸ್ ಚಿತ್ರ. ಹಾಗಾಗಿ ಇಲ್ಲಿ ಹಾಡುಗಳು ಬೇಕೋ ಬೇಡವೋ ಎಂಬ ಗೊಂದಲವಿತ್ತು. ಈಗಲೂ ಆ ಬಗ್ಗೆ ಚರ್ಚೆ ನಡೆಸುತ್ತಿದ್ದೇವೆ. ಇನ್ನು, ನಿರ್ದೇಶಕ ಕಾರ್ತಿಕ್ ಒಳ್ಳೆಯ ಕಥೆ ಹೆಣೆದಿದ್ದಾರೆ. ಅಂದುಕೊಂಡಿದ್ದಕ್ಕಿಂತಲೂ ಸೊಗಸಾಗಿ ನಿರೂಪಿಸಿದ್ದಾರೆ. ನನಗೂ ಇಲ್ಲೊಂದು ಪಾತ್ರ ಕೊಟ್ಟಿದ್ದಾರೆ. ಪುತ್ರ ಅಭಿಮನ್ಯು ಜೊತೆ ಮೊದಲ ಸಲ ನಟಿಸಿದ್ದೇನೆ. ಇನ್ನುಳಿದಂತೆ ನಿರ್ಮಾಪಕ ವಿಜಯ್ಕುಮಾರ್ ಚಿತ್ರಕ್ಕೆ ಎಲ್ಲವನ್ನೂ ಪೂರೈಸಿದ್ದಾರೆ. ಕನ್ನಡಕ್ಕೆ ಇದೊಂದು ಹೊಸತರಹದ ಚಿತ್ರವಾಗಲಿದೆ' ಎಂದಷ್ಟೇ ಹೇಳಿ ಸುಮ್ಮನಾದರು ಕಾಶೀನಾಥ್.ನಿರ್ದೇಶಕ ಕಾರ್ತಿಕ್ಗೆ ಕಾಶೀನಾಥ್ ಕೊಟ್ಟ ಧೈರ್ಯ ಮತ್ತು ಪ್ರೋತ್ಸಾಹ ದಿಂದ ಸಸ್ಪೆನ್ಸ್ ಚಿತ್ರ ನಿರ್ದೇ ಶಿಸಲು ಸಾಧ್ಯವಾ ಗಿದೆಯಂತೆ. ಶೀರ್ಷಿಕೆಯ ಅರ್ಥ ವಿವರಿಸಿದ ಅವರು, ಈ ತಂಡ ಫೇಸ್ವ್ಯಾಲ್ಯೂ ಇಲ್ಲದೇ ಇರೋ ಫೇಸ್ಬುಕ್ ಇದ್ದಂತೆ. ಯಾರಿಗೂ ನಾವು ಪರಿಚಯವಿಲ್ಲ. ನಮ್ಮನ್ನು ಗುರು ಕಾಶೀನಾಥ್ ಅವರು ಟ್ವಿಟ್ಟರ್ ಆಗಿ ಇಡೀ ಟೀಮ್ ಅನ್ನು ಕ್ಯಾರಿ ಮಾಡುತ್ತಿದ್ದಾರೆ ಅಂತ ಹೇಳಿಕೊಂಡರು. ಚಿತ್ರದ ಬಗ್ಗೆ ನಾನು ಹೆಚ್ಚು ಹೇಳ್ಳೋದಿಲ್ಲ. ಪ್ರತಿಯೊಂದು ದೃಶ್ಯವೂ ಸಸ್ಪೆನ್ಸ್ನಲ್ಲೇ ಸಾಗುತ್ತದೆ. ಅಭಿಮನ್ಯು ನಿರೀಕ್ಷೆ ಮೀರಿ ನಟಿಸಿದ್ದಾರೆ. ತಂಡದ ಶ್ರಮ ಮತ್ತು ನಿರ್ಮಾಪಕರ ಪ್ರೋತ್ಸಾಹದಿಂದ ಚಿತ್ರ ಚೆನ್ನಾಗಿ ಮೂಡಿಬರುತ್ತಿದೆ ಎಂದರು ಕಾರ್ತಿಕ್.ನಟನಾಗುವ ಕನಸು ಹೊತ್ತು ಬೆಂಗಳೂರಿಗೆ ಬಂದ ವಿಜಯ್ಕುಮಾರ್, ಆಗಿದ್ದು ಮಾತ್ರ ನಿರ್ಮಾಪಕ. ಮೊದಲ ಚಿತ್ರವಾದ್ದರಿಂದ ಅನೇಕ ಸಮಸ್ಯೆ ಎದುರಾಗಿದ್ದು ನಿಜ. ನಾನಿಲ್ಲಿ ನಿರ್ಮಾಪಕನಷ್ಟೇ. ಆದರೆ, ಎಲ್ಲವನ್ನೂ ಕಾಶೀನಾಥ್ ಅವರೇ ನಿಭಾಯಿಸಿದ್ದಾರೆ. ಅವರು ಹುಟ್ಟುಹಾಕಿದ ನಿರ್ಮಾಪಕರ ಟ್ರೈನಿಂಗ್ ಇನ್ಸ್ಟಿಟ್ಯೂಟ್ನಲ್ಲಿ ಸಾಕಷ್ಟು ಅನುಭವ ಪಡೆದಿದ್ದೇನೆ. ಇಲ್ಲಿ ಥೇರಿಗಿಂತ ಪ್ರಯೋಗವೇ ಜಾಸ್ತಿ. ಎಲ್ಲಿ ಹಣ ಉಳಿಸಬೇಕು. ಯಾವುದಕ್ಕೆ ಏನು ಬೇಕು ಎಂಬುದನ್ನಿಲ್ಲಿ ಹೇಳಿಕೊಟ್ಟಿದ್ದಾರೆ. ಈ ಚಿತ್ರ ಒಳ್ಳೆಯ ಹೆಸರು ತಂದುಕೊಡುತ್ತೆ ಎಂಬ ವಿಶ್ವಾಸವಿದೆ ಎಂದರು ವಿಜಯ್ಕುಮಾರ್.ಅಭಿಮನ್ಯು ಇಲ್ಲಿ ಕಾಲೇಜ್ ಹುಡುಗನಾಗಿ ಕಾಣಿಸಿಕೊಂಡಿದ್ದಾರಂತೆ. ನಿರ್ದೇಶಕರು ಸೆಟ್ನಲ್ಲೇ ಎಲ್ಲವನ್ನೂ ವಿವರಿಸುತ್ತಿದ್ದರು. ಹಾಗಾಗಿ ಚೆನ್ನಾಗಿ ಅಭಿನಯಿಸಲು ಸಾಧ್ಯವಾಗಿದೆ. ಈ ಚಿತ್ರದ ಮೂಲಕ ಹೊಸ ಐಡೆಂಟಿಟಿ ಸಿಗುತ್ತದೆ ಎಂಬ ವಿಶ್ವಾಸ ನನ್ನದು ಎಂದರು ಅಭಿಮನ್ಯು.ನಾಯಕಿ ದಿವ್ಯಾಶ್ರೀಧರ್ ಕೂಡ ಅಭಿಮನ್ಯು ಮಾತನ್ನೇ ಅನುಕರಿಸಿದರು. ಪ್ರತಿಮಾ ವಿಜಯ್ಕುಮಾರ್, ಛಾಯಾಗ್ರಾಹಕ ಉಮಾಪತಿ ಇತರರು ಈ ವೇಳೆ ಚಿತ್ರದ ಅನುಭವ ಹಂಚಿಕೊಂಡರು.