ಲಖನೌ: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ 5 ವರ್ಷಗಳಲ್ಲಿ ಉತ್ತರಪ್ರದೇಶದ ವರ್ಚಸ್ಸನ್ನೇ ಬದಲಿಸುವುದಾಗಿ ಹೇಳಿರುವ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಹೇಳಿಕೆಯನ್ನು ವ್ಯಂಗ್ಯ ಮಾಡಿರುವ ಬಿಎಸ್ಪಿ, 5 ವರ್ಷದಲ್ಲಿ ವರ್ಚಸ್ಸು ಬದಲಾಯಿಸುವುದಕ್ಕೆ ಅಣ್ಣ-ತಂಗಿ ಬಳಿ ಅಲ್ಲಾವುದ್ದೀನ್ ದೀಪ ಇದೆಯಾ ಎಂದು ಪ್ರಶ್ನಿಸಿದೆ.ಕಾಂಗ್ರೆಸ್ನ ಇಬ್ಬರು ಸ್ಟಾರ್ ಪ್ರಚಾರಕರು ಹೋದಲ್ಲೆಲ್ಲಾ ರಾಜ್ಯದ ವರ್ಚಸ್ಸನ್ನೇ ಬದಲು ಮಾಡುವುದಾಗಿ ಹೇಳುತ್ತಿದ್ದಾರೆ. ಇದೊಂದು ದೊಡ್ಡ ಜೋಕ್. ಅವರಿಗೆ ಉತ್ತರಪ್ರದೇಶದ ಬಗ್ಗೆ ಯಾವುದೇ ಕಾಳಜಿಯೂ ಇಲ್ಲ ಎಂದು ಬಿಎಸ್ಪಿ ರಾಜ್ಯ ಘಟಕದ ಅಧ್ಯಕ್ಷ ಸ್ವಾಮಿ ಪ್ರಸಾದ್ ಮೌರ್ಯ ಟೀಕಿಸಿದ್ದಾರೆ.ಪ್ರಿಯಾಂಕಾ ಗಾಂಧಿಗೆ ನಿಜವಾಗಿಯೂ ಅಮೇಠಿ, ರಾಯ್ಬರೇಲಿ ಸೇರಿದಂತೆ ರಾಜ್ಯದ ಹಿಂದುಳಿದ ಪ್ರದೇಶಗಳ ಅಭಿವೃದ್ಧಿ ಬಗ್ಗೆ ಆಸಕ್ತಿ ಇದ್ದರೆ, ಅವುಗಳ ಅಭಿವೃದ್ಧಿಗೆಂದೇ ರಾಜ್ಯ ಸರ್ಕಾರ ಕೋರಿದ್ದ ಪರಿಹಾರವನ್ನು ಕೇಂದ್ರ ಸರ್ಕಾರದಿಂದ ದೊರಕಿಸಿಕೊಡಬೇಕಿತ್ತು. ಅದನ್ನು ಬಿಟ್ಟು ಇದೀಗ ಚುನಾವಣೆ ಬಂದಾಕ್ಷಣ ರಾಜ್ಯದತ್ತ ಮುಖಮಾಡಿ ನಕಲಿ ಪ್ರೀತಿ ತೋರಿಸುತ್ತಿದ್ದಾರೆ. ಅವರು ಇಲ್ಲಿಗೆ ಬಂದಿರುವುದು ಮತಭಿಕ್ಷೆ ಕೇಳಲಿಕ್ಕೇ ಹೊರತು ರಾಜ್ಯವನ್ನು ಉದ್ಧಾರ ಮಾಡಲಿಕ್ಕೆ ಅಲ್ಲ ಎಂದು ಮೌರ್ಯ ಕಿಡಿಕಾರಿದ್ದಾರೆ.ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರಾಜ್ಯಕ್ಕೆ ಭಾರೀ ನೆರವು ಹರಿದು ಬರಲಿದೆ ಎಂದು ಗಾಂಧಿ-ನೆಹರು ಕುಟುಂಬದ ಕುಡಿಗಳು ಜನರ ದಾರಿ ತಪ್ಪಿಸುತ್ತಿದ್ದಾರೆ. 40 ವರ್ಷ ರಾಜ್ಯವನ್ನು ಆಳಿದ ಕಾಂಗ್ರೆಸ್ ರಾಜ್ಯವನ್ನು ಯಾವ ಸ್ಥಿತಿಯಲ್ಲಿ ಇಟ್ಟಿತ್ತು ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ ಎಂದು ಮೌರ್ಯ ವ್ಯಂಗ್ಯ ಮಾಡಿದ್ದಾರೆ.