ವಿಶ್ವಸಂಸ್ಥೆ : ಸಿರಿಯಾದ ರಾಜಕೀಯ ಬಿಕ್ಕಟ್ಟಿನ ನಿವಾರಣೆಗೆ ಸಿರಿಯಾ ನೇತೃತ್ವದ ಅಡಕ ರಾಜಕೀಯ ಪ್ರಕ್ರಿಯೆಯನ್ನು ಬೆಂಬಲಿಸುತ್ತಿರುವ ತನ್ನ ಪ್ರತಿಪಾದನೆಯ ಪ್ರಕಾರ ಭಾರತ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಸಿರಿಯಾ ಮೇಲಣ ಅರಬ್ ಲೀಗ್ ಬೆಂಬಲಿತ ಗೊತ್ತುವಳಿಗೆ ಮತ ಹಾಕಿದೆ.ಗೊತ್ತುವಳಿಯಲ್ಲಿ ಸಿರಿಯಾ ಸರಕಾರ ಮತ್ತು ಪೂರ್ತಿ ವಿಪಕ್ಷ ನಡುವೆ ಗಂಭೀರವಾದ ರಾಜಕೀಯ ಸಂವಾದ ಏರ್ಪಡಬೇಕೆಂದು ಹೇಳಲಾಗಿದೆ ಎಂದಿರುವ ಭಾರತ 'ಸಿರಿಯಾದ ನಾಯಕತ್ವವನ್ನು ಸಿರಿಯಾದ ಜನರೇ ನಿರ್ಧರಿಸಬೇಕೆಂದು' ಪ್ರತಿಪಾದಿಸುತ್ತಿದೆ. ಸಿರಿಯಾದ ಎಲ್ಲ ರಾಜಕೀಯ ಶಕ್ತಿಗಳು ಸರಕಾರದ ಜತೆಗೆ ರಚನಾತ್ಮಕವಾದ ಮಾತುಕತೆಯನ್ನು ನಡೆಸಬೇಕೆಂದು ಭಾರತ ಬಯಸುತ್ತಿದೆ. ಇದರಿಂದ ರಾಜಕೀಯ ಪ್ರಕ್ರಿಯೆಗೆ ಅನುಕೂಲವಾಗುವ ಹೊಸ ಶಾಂತಿಯ ಪರಿಸರ ಸೃಷ್ಟಿಯಾಗಲಿದೆ ಎನ್ನುವುದು ಭಾರತದ ನಂಬಿಕೆ.ಸಿರಿಯಾದ ನಾಯಕತ್ವ ಈಗಾಗಲೇ ಪ್ರಕಟಿಸಿರುವ ರಾಜಕೀಯ ಸುಧಾರಣೆಗಳ ಮೇಲೆ, ಸಿರಿಯಾದ ಸಮಾಜದ ಎಲ್ಲ ವರ್ಗಕ್ಕೆ ಸಮ್ಮತವಾಗುವ ರಾಜಕೀಯ ಸಂವಾದವನ್ನು ಪ್ರಾರಂಭಿಸಬೇಕು ಎಂದು 15 ಸದಸ್ಯರಿರುವ ಭದ್ರತಾ ಮಂಡಳಿಗೆ ವಿಶ್ವಸಂಸ್ಥೆಗೆ ಭಾರತದ ಖಾಯಂ ಪ್ರತಿನಿಧಿ ಹರ್ದೀಪ್ ಸಿಂಗ್ ಪುರಿ ವಿವರಿಸಿದ್ದಾರೆ.ಸಿರಿಯಾದ ಸರಕಾರ ಮತ್ತು ಶಸ್ತ್ರಸಜ್ಜಿತ ವಿಪಕ್ಷ ಎಲ್ಲ ರೀತಿಯ ಹಿಂಸಾಚಾರಗಳನ್ನು ಸ್ಥಗಿತಗೊಳಿಸಬೇಕೆಂದು ಹೇಳುವ ಗೊತ್ತುವಳಿಯ ಪರವಾಗಿ ನಿನ್ನೆ ರಾತ್ರಿ ರಶ್ಯಾ ಮತ್ತು ಚೀನ ಮತ ಹಾಕಿವೆ. ಮತದಾನ ಪ್ರಕ್ರಿಯೆ ಮುಗಿದ ಬಳಿಕ ಸುದ್ದಿಸಂಸ್ಥೆಯ ಜತೆಗೆ ಮಾತನಾಡಿದ ಪುರಿ, ಭಾರತ ಅರ್ಹತೆಯನ್ನು ಮಾನದಂಡವನ್ನಾಗಿ ಮಾಡಿಕೊಂಡು ಈ ನಿರ್ಧಾರವನ್ನು ಸ್ವತಂತ್ರವಾಗಿ ಕೈಗೊಂಡಿದೆ ಎಂದು ತಿಳಿಸಿದರು.