ಬೆಂಗಳೂರು: ಐಪಿಎಲ್ನಿಂದ ಹಿಂದೆ ಸರಿದ ಮತ್ತು ಟೀಮ್ ಇಂಡಿಯಾ ಜತೆಗಿನ ಪ್ರಾಯೋಜಕತ್ವ ಒಪ್ಪಂದವನ್ನು ಸಹಾರಾ ಇಂಡಿಯಾ ರದ್ದುಗೊಳಿಸಿರುವ ವಿಚಾರ ತಿಳಿದ ಬಳಿಕ ಐಪಿಎಲ್ ಐದನೇ ಋತುವಿಗಾಗಿ ಆಟಗಾರರ ಹರಾಜು ಪ್ರಕ್ರಿಯೆಯನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮುಂದೂಡಬೇಕಿತ್ತು ಎಂದು ಭಾರತ ತಂಡದ ಮಾಜಿ ನಾಯಕ ಸುನಿಲ್ ಗಾವಸ್ಕರ್ ಅಭಿಪ್ರಾಯಪಟ್ಟಿದ್ದಾರೆ.ಗುತ್ತಿಗೆ ಮುರಿಯಲು ಕೂಡ ನ್ಯಾಯಬದ್ಧವಾದ ವಿದಾನವಿರುವುದು ಅಗತ್ಯ ಮತ್ತು ಹಿಂದೆ ಸರಿಯುವ ನಿರ್ಧಾರ ತೆಗೆದುಕೊಳ್ಳುವ ಮೊದಲು ಸಹಾರಾ ಕೂಡ ಕಾನೂನು ಸಲಹೆ ಪಡೆಯಬೇಕಿತ್ತು ಎಂದು ಅಭಿಪ್ರಾಯಪಟ್ಟ ಗಾವಸ್ಕರ್ ಸಹಾರಾ ಹಿಂದೆ ಸರಿಯುತ್ತಿದೆ ಎಂದು ತಿಳಿದ ಬಳಿಕ ಈ ಬಿಕ್ಕಟ್ಟು ಶಮನಗೊಳ್ಳುವ ತನಕ ಹರಾಜು ಪ್ರಕ್ರಿಯೆಯನ್ನು ಮುಂದೂಡಬಹುದಿತ್ತು ಎಂದರು. ಒಂದು ವೇಳೆ ಪುಣೆ ಐಪಿಎಲ್ ಐದರ ಅಂಗವಾಗಿ ಉಳಿಯದಿದ್ದರೆ ಆ ತಂಡದ ಆಟಗಾರರು ಕೂಡ ಹರಾಜಿಯಲ್ಲಿ ಇರಬೇಕಿತ್ತು ಎಂದರು ಗಾವಸ್ಕರ್.ಮುಂದಿನ ವಾರ ಅಥವಾ 10 ದಿನಗಳಲ್ಲಿ ಈ ವಿಷಯದ ಬಗ್ಗೆ ಖಚಿತ ತೀರ್ಮಾನಗಳು ಬರಬಹುದಾಗಿದೆ ಮತ್ತು ಒಂದು ವೇಳೆ ಪುಣೆ ಐಪಿಎಲ್ ಐದರ ಅಂಗವಾಗಿರದಿದ್ದರೆ ಇನ್ನೊಮ್ಮೆ ಹರಾಜು ಪ್ರಕ್ರಿಯೆ ನಡೆಯುವ ಸಾಧ್ಯತೆಯಿದೆ ಎಂದು ಗಾವಸ್ಕರ್ ತಿಳಿಸಿದರು.ಸಹಾರಾದ ಈ ನಿಲುವಿನಿಂದಾಗಿ ಹೆಚ್ಚು ಕಳವಳಗೊಂಡಿರುವುದು ಪುಣೆ ವಾರಿಯರ್ ತಂಡದ ಆಟಗಾರರು ಮತ್ತು ಇದರಿಂದ ಅವರೆಲ್ಲ ಬಹಳಷ್ಟು ಚಿಂತೆಗೊಳಗಾಗಿದ್ದಾರೆ.ಇದು ಖಂಡಿತವಾಗಿಯೂ ತಪ್ಪು. ಒಂದು ವೇಳೆ ನೀವು ಪುಣೆ ತಂಡದ ಆಟಗಾರರಾಗಿದ್ದರೆ ಖಂಡಿತವಾಗಿಯೂ ನೀವು ಚಿಂತೆಗೊಳಗಾಗುತ್ತೀರಿ. ನೀವು ತಂಡದ ಪರ ಎರಡು ವರ್ಷಗಳ ಒಪ್ಪಂದ ಹೊಂದಿರುತ್ತೀರಿ ಮತ್ತು ಹಠಾತ್ತಾಗಿ ನಿಮ್ಮ ತಂಡ ಆಡುವುದಿಲ್ಲವೆಂದು ತಿಳಿಸಿದರೆ ಸ್ವಾಭಾವಿಕವಾಗಿ ಚಿಂತೆಗೊಳಗಾಗುತ್ತೀರಿ ಎಂದರು ಗಾವಸ್ಕರ್.