ಅಕ್ಷಯ ಕಾಮತ್ ಬಿ. | Feb 12, 2012
ರಶ್ಮಿ ತುಂಬಾ ಚೂಟಿಯಾದ ಹುಡುಗಿ. ಓದಿನಲ್ಲಿ ಯಾವಾಗಲೂ ಮುಂದು. ನೃತ್ಯ, ನಾಟಕ, ಸಂಗೀತಗಳೂ ಆಕೆಯ ಆಸಕ್ತಿಯ ವಿಷಯಗಳಾಗಿದ್ದವು. ಅವಳ ಬಹುಮುಖ ಪ್ರತಿಭೆ ಕಂಡ ಆಕೆಯ ಶಿಕ್ಷಕರೂ ಹೆತ್ತವರೂ ಅವಳಿಗೆ ಸಾಧ್ಯವಾದ ಸಹಾಯ ಪ್ರೋತ್ಸಾಹ ನೀಡುತ್ತಿದ್ದರು.
ಅವಳ ತರಗತಿಯ ಮತ್ತೂಬ್ಬ ವಿದ್ಯಾರ್ಥಿ ಶಶಾಂಕ. ಹೆಸರಾಂತ ಕ್ರೀಡಾಪಟುವಿನ ಮಗನಾಗಿದ್ದ ಇವನು ಅವರ ಎಲ್ಲಾ ಗುಣಗಳನ್ನು ಪಡೆದುಬಂದಿದ್ದ. ಇವನ ಶಾಲೆಯಲ್ಲಿ ಮಾತ್ರವಲ್ಲ , ಅಂತರ್ಶಾಲಾ ಕ್ರೀಡೋತ್ಸವಗಳಲ್ಲೂ ಇವನು ಸಾಕಷ್ಟು ಪ್ರಶಸ್ತಿಗಳನ್ನು ಬಾಚಿಕೊಂಡು ಬರುತ್ತಿದ್ದ. ಕಲಿಯುವುದರಲ್ಲೂ ರಶ್ಮಿಗೆ ಸರಿಯಾದ ಸ್ಪರ್ಧೆ ನೀಡುತ್ತಿದ್ದ. ಇವರಿಬ್ಬರ ನಡುವೆ ಎಷ್ಟೊಂದು ನಿಕಟವಾದ ಸ್ಪರ್ಧೆ ಇತ್ತು ಎಂದರೆ ಪರೀಕ್ಷೆ ನಡೆದಾಗ ಈ ಬಾರಿ ಇವರಿಬ್ಬರಲ್ಲಿ ಯಾರಿಗೆ ಹೆಚ್ಚಿನ ಅಂಕ ಬರಬಹುದು ಎಂಬ ವಿಷಯವಾಗಿ ಇತರ ಸಹಪಾಠಿಗಳು ಪಂಥ ಕಟ್ಟುತ್ತಿದ್ದರು.
ಶಾಲಾ ವಾರ್ಷಿಕೋತ್ಸವದ ದಿನ ನಿಗದಿಯಾಗುತ್ತಿದ್ದಂತೆ, ಶಾಲೆಯ ವಾರ್ಷಿಕ ಸಂಚಿಕೆಯಲ್ಲಿ ಪ್ರಕಟಿಸುವುದಕ್ಕಾಗಿ ಪ್ರಬಂಧವೊಂದನ್ನು ಬರೆದು ಒಪ್ಪಿಸುವಂತೆ ಲ್ಲಾ ವಿದ್ಯಾರ್ಥಿಗಳಿಗೂ ಸೂಚಿಸಲಾಗಿತ್ತು. "ದೊಡ್ಡೋರಾದ ಮೇಲೆ ನೀವೇನಾಗ ಬಯಸುವಿರಿ' ಕಾರಣ ಸಹಿತ ವಿವರಿಸಿ ಎಂಬುವುದಾಗಿ ವಿಷಯವನ್ನು ನೀಡಲಾಗಿತ್ತು.
ಚಿಕ್ಕಂದಿನಿಂದಲೂ ತಾನೇನಾಗಬೇಕು ಎಂಬುವುದರಲ್ಲಿ ರಶ್ಮಿಗೆ ಸರಿಯಾದ ಕಲ್ಪನೆ ಇತ್ತು. ನೃತ್ಯ, ನಾಟಕ, ಸಂಗೀತಗಳಲ್ಲಿ ಅವಳಿಗಿದ್ದ ಆಸಕ್ತಿ, ಹೆತ್ತವರು ಧಿಧಿಹಾಗೂ ಗುರುಹಿರಿಯರ ಉತ್ತೇಜನ ಇದರಿಂದಾಗಿ ತಾನೊಬ್ಬ ಸಿನೆಮಾ ನಟಿಯಾಗಬೇಕೆಂಬ ಅವಳ ಆಸೆ ಸಾಕಷ್ಟು ಬೆಳೆದು ನಿಂತಿತ್ತು. ಕಲೆಯ ಬಗ್ಗೆ ತನಗಿರುವ ಆಸಕ್ತಿ ಹಾಗೂ ಸಿನೆಮಾ ಜಗತ್ತಿನೊಡನೆ ಸಂಬಂಧಿಸಲ್ಪಟ್ಟ ಹಣ, ಅಂತಸ್ತು, ಆಡಂಬರದ ಬಗ್ಗೆ ಬರೆಯುತ್ತಾ ತಾನೇಕೆ ಸಿನೆಮಾ ನಟಿಯಾಗಬೇಕೆಂದು ಸಾಕಷ್ಟು ಚೆನ್ನಾಗಿಯೇ ಸಮರ್ಥಿಸಿಕೊಂಡಳು.
ಕ್ರೀಡಾಪಟುವಿನ ಮಗನಾದ ಶಶಾಂಕನ ಗುರಿಯೂ ಸ್ಪಷ್ಟವಾಗಿದ್ದಿತ್ತು. ಸದೃಢವಾದ ಶರೀರ ಮತ್ತು ಅಮಿತವಾದ ಕ್ರೀಡಾಸಕ್ತಿ ಅವನನ್ನೊಬ್ಬ ಕ್ರೀಡಾಪಟುವಾಗಿ ರೂಪಿಸಲು ಸಹಾಯಕವಾಗಿದ್ದವು. ಹಣ, ಅಂತಸ್ತು, ವಿದೇಶ ಪ್ರಯಾಣ ಮುಂತಾದ ಆಕರ್ಷಣೆಗಳಿಂದಲೂ ಅವನು ಸಾಕಷ್ಟು ಪ್ರೇರಿತನಾಗಿದ್ದ. ತನ್ನ ಆಶಯವನ್ನು ಕುರಿತು ಬರೆದ ಶಶಾಂಕನ ಪ್ರಬಂಧವೂ ತುಂಬಾ ಬಲವಾಗಿಯೇ ಇತ್ತು.
ರಾಮನೂ ಇವರ ತರಗತಿಯ ಮತ್ತೂಬ್ಬ ವಿದ್ಯಾರ್ಥಿ. ಶ್ರಮಿಕ ರೈತ ಕುಟುಂಬದವನಾಗಿದ್ದ ಇವನಲ್ಲಿ ಸ್ನೇಹ, ಸೌಹಾರ್ದತೆ, ಸಹಕರಣ, ಪರಿಸರ ಕಾಳಜಿ ಮುಂತಾದ ಗುಣಗಳು ಮೈಗೂಡಿಕೊಂಡಿದ್ದವು. ತಾನೊಬ್ಬ ಒಳ್ಳೆಯ ವ್ಯಕ್ತಿಯಾಗಬೇಕು ಎಂಬುವುದು ಅವನ ಆಶಯವಾಗಿದ್ದಿತ್ತು. ಹೆತ್ತವರಿಗೆ ಒಬ್ಬ ಒಳ್ಳೆಯ ಮಗನೆನಿಸಿಕೊಳ್ಳಬೇಕು, ಶಾಲೆಯಲ್ಲಿ ಒಬ್ಬ ಒಳ್ಳೆಯ ವಿದ್ಯಾರ್ಥಿ ಎನಿಸಿಕೊಳ್ಳಬೇಕು, ಮದುವೆಯಾದ ಮೇಲೆ ಆದರ್ಶ ಪತಿ ಎನಿಸಿಕೊಳ್ಳಬೇಕು, ಮಕ್ಕಳಿಗೆ ಒಳ್ಳೆಯ ತಂದೆಯಾಗಬೇಕು, ಸಮಾಜಕ್ಕೆ ಒಬ್ಬ ಜವಾಬ್ದಾರಿಯುತ ನಾಗರಿಕನಾಗಬೇಕು. ಹಾಗೆಯೇ ಪರಿಸರ ಪ್ರೇಮಿ ಎನಿಸಿಕೊಳ್ಳಬೇಕು ಎಂದು ಬರೆಯುತ್ತಾ ಗಳಿಸುವುದಕ್ಕಿಂತ ಕೊಡುವುದರಲ್ಲಿ ಹೆಚ್ಚಿನ ಆನಂದ ಮತ್ತು ಸಾರ್ಥಕತೆ ಇದೆ ಎಂದು ಕಾರಣವನ್ನು ಕೂಡಾ ವಿವರಿಸಿದ್ದ.
ಎಲ್ಲರ ಪ್ರಬಂಧವನ್ನು ಓದಿದ ಶಿಕ್ಷಕರು, ಒಬ್ಬ ಒಳ್ಳೆಯ ವ್ಯಕ್ತಿ ಖಂಡಿತವಾಗಿಯೂ ನಮ್ಮ ಈಗಿನ ಸಮಾಜದ ತುರ್ತು ಆವಶ್ಯಕತೆ. ಆದ್ದರಿಂದ ರಾಮನ ಪ್ರಬಂಧದಲ್ಲಿ ಹೆಚ್ಚಿನ ತೂಕವಿದೆ ಎಂದು ಷರಾ ಬರೆದು ಅವನಿಗೆ ಪ್ರಥಮ ಬಹುಮಾನವನ್ನು ಘೋಷಿಸಿದರು.