Udayavani | Feb 22, 2012
ಜೇವರ್ಗಿ: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಶೋಷಿತ ವರ್ಗಗಳ ಧ್ವನಿಯಾಗಿ, ಎಲ್ಲ ಸಮಾಜದ ಅಭಿವೃದ್ಧಿಗಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ ಎಂದು ಸಚಿವ ರೇವು ನಾಯಕ ಬೆಳಮಗಿ ಶ್ಲಾಘಿಸಿದರು.
ತಾಲೂಕಿನ ನಾಗರಹಳ್ಳಿ ಗ್ರಾಮದಲ್ಲಿ ಸಂತ ಸೇವಾಲಾಲ ಮಹಾರಾಜರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಹಿಂದಿನ ಸರಕಾರಗಳು ದಲಿತ ಹಾಗೂ ಹಿಂದುಳಿದ ವರ್ಗಗಳ ಬಗ್ಗೆ ಕೇವಲ ಹೇಳಿಕೆ ನೀಡಿ ಸುಮ್ಮನಾಗುತ್ತಿದ್ದವು. ಆದರೆ, ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬಂದ ನಂತರ ಅಲ್ಪಾವಧಿಧಿಯಲ್ಲಿ ಅಗಾಧ ಸಾಧನೆ ಮಾಡಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಿಬೋಳ ಮಾತನಾಡಿ, ತಾಲೂಕಿನ ಯಡ್ರಾಮಿ, ನಾಗರಹಳ್ಳಿ, ಅಂಬರಖೇಡ ಸೇರಿದಂತೆ 6 ತಾಂಡಾಗಳಲ್ಲಿ ಸಮುದಾಯ ಭವನಗಳ ನಿರ್ಮಾಣ ಹಾಗೂ ನಾಗರಳ್ಳಿ ತಾಂಡಾ ಅಭಿವೃದ್ಧಿಗಾಗಿ ರೂ.20 ಲಕ್ಷ ಬಿಡುಗಡೆ ಮಾಡಲಾಗಿದೆ ಎಂದು ಹೇಳಿದರು.
ಮುಗಳನಾಗವದ ಜೇಮಸಿಂಗ ಮಹಾರಾಜರು, ಏವೂರ ತಾಂಡಾದ ಸೋಮಸಿಂಗ ಮಹಾರಾಜರು, ಹಾಣಗೇರಿ ತಾಂಡಾದ ಲಿಂಬಾಜಿ ಮಹಾರಾಜರು, ಆಲೂರ ತಾಂಡಾದ ಶಿವಾನಂದ ಮಹಾರಾಜರು, ಕೇಸರಟ್ಟಿಯ ಸೋಮಲಿಂಗ ಮಹಾಸ್ವಾಮಿಗಳ ಸಾನ್ನಿಧ್ಯ ವಹಿಸಿದ್ದರು.
ಶಾಸಕ ವಾಲ್ಮೀಕಿ ನಾಯಕ, ಸುಭಾಷ ರಾಠೊಡ, ದಂಡಪ್ಪ ಸಾಹು ಕುರಳಗೇರಾ, ಧರ್ಮಣ್ಣ ದೊಡ್ಮನಿ, ಉಮೇಶ ಜಾಧವ, ತಾಪಂ ಸದಸ್ಯರಾದ ನೀಲಾಬಾಯಿ ಚವ್ಹಾಣ, ಬಸವರಾಜ ಕುರಳಗೇರಾ, ಮಲ್ಲಿಕಾರ್ಜುನ ಬಿರಾದಾರ, ಪಿಎಸ್ಐ ಕಲ್ಲದೇವರು, ಪುಂಡಲಿಕ ಚವ್ಹಾಣ, ಅಲ್ಲಿಸಾಬ ಬಗರಿಕರ ಮಳ್ಳಿ, ದಲಿತಸೇನೆ ಅಧ್ಯಕ್ಷ ಶ್ರೀಕುಮಾರ ಮಳ್ಳಿ, ತುಳಜಾರಾಮ ರಾಠೊಡ ಹಾಜರಿದ್ದರು.
ಅರುಣ ರಾಠೊಡ ನಿರೂಪಿಸಿದರು. ಭಗವಂತರಾಯ ಬೆಣ್ಣೂರ ಸ್ವಾಗತಿಸಿದರು.