ಬೆಂಗಳೂರು: ವಿಧಾನಸಭೆಯಲ್ಲಿ ಬ್ಲೂಫಿಲಂ ವೀಕ್ಷಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬುಧವಾರ ಸದನ ಸಮಿತಿಯ ಮೊದಲ ಸಭೆ ನಡೆಯಲಿದೆ.ಆಡಳಿತಾರೂಢ ಬಿಜೆಪಿಯ ಶ್ರೀಶೈಲಪ್ಪ ಬಿದರೂರು ಅಧ್ಯಕ್ಷತೆಯ ಸಮಿತಿ ಸಭೆ ಬುಧವಾರ ಬೆಳಗ್ಗೆ 11 ಗಂಟೆಗೆ ವಿಧಾನಸೌಧದಲ್ಲಿ ನಡೆಯಲಿದ್ದು, ಪ್ರತಿಪಕ್ಷಗಳ ಸದಸ್ಯರ ಗೈರಿನ ನಡುವೆಯೇ ಸಭೆ ಮುಂದುವರೆಯಲಿದೆ.ಈಗಾಗಲೇ ಪ್ರಕರಣದಲ್ಲಿ ಸಿಲುಕಿರುವ ಶಾಸಕರಾದ ಲಕ್ಷ್ಮಣ ಸವದಿ, ಸಿ.ಸಿ.ಪಾಟೀಲ್ ಮತ್ತು ಕೃಷ್ಣ ಪಾಲೇಮಾರ್ ಅವರು ಸ್ಪೀಕರ್ಗೆ ನೀಡಿರುವ ವಿವರಣೆಯನ್ನು ಸದನ ಸಮಿತಿಗೆ ವರ್ಗಾಯಿಸಲಾಗಿದೆ. ಹೀಗಾಗಿ ಮೊದಲ ಸಭೆಯಲ್ಲಿ ಶಾಸಕರ ಈ ವಿವರಣೆಯನ್ನು ಪರಾಮರ್ಶಿಸುವ ಸಾಧ್ಯತೆಯಿದೆ. ಅಲ್ಲದೆ, ವಿಚಾರಣೆಗೂ ಹಾಜರಾಗುವಂತೆ ಮೂವರಿಗೂ ನೋಟಿಸ್ ಜಾರಿಗೊಳಿಸುವ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ ಎನ್ನಲಾಗಿದೆ.ಬಿಜೆಪಿ ಸಾಸಕರಾದ ಬಿ.ಸುರೇಶ್ಗೌಡ, ಎಸ್.ಆರ್.ವಿಶ್ವನಾಥ್ ಮತ್ತು ನೆಹರು ಓಲೇಕಾರ್ ಅವರು ಸದನ ಸಮಿತಿ ಸದಸ್ಯರಾಗಿದ್ದಾರೆ. ಪ್ರತಿಪಕ್ಷಗಳ ಪೈಕಿ ಕಾಂಗ್ರೆಸ್ ಶಾಸಕರಾಗಿದ್ದ ಡಾ.ಎಚ್.ಸಿ.ಮಹದೇವಪ್ಪ, ಅಮರೇಗೌಡ ಬಯ್ನಾಪುರ ಹಾಗೂ ಜೆಡಿಎಸ್ ಶಾಸಕ ದಿನಕರ ಶೆಟ್ಟಿ ಸಮಿತಿಯಿಂದ ಹೊರಬರುವುದಾಗಿ ಪ್ರಕಟಿಸಿದ್ದಾರೆ.