Udayavani | Feb 22, 2012
ತೋಂಟದ ಶ್ರೀ ಹಾಗೂ ಮುರುಘಾಮಠ ಸ್ವಾಮಿಗಳಿಂದ ಚಾಲನೆ

ಧಾರವಾಡ: ಅನುದಾನ ಬಿಡುಗಡೆಗೆ ಆಗ್ರಹಿಸಿ ಕಳೆದ 70 ದಿನಗಳಿಂದ ಶಿಕ್ಷಕರು ನಡೆಸುತ್ತಿರುವ ಹೋರಾಟ ನಿರ್ಣಾಯಕ ಘಟ್ಟ ತಲುಪಿದ್ದು ಶಿಕ್ಷಣ ಖಾತೆ ಮಾಜಿ ಸಚಿವ, ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ನೇತೃತ್ವದಲ್ಲಿ ಬುಧವಾರ ಧಾರವಾಡದಿಂದ ಬೆಂಗಳೂರುವರೆಗಿನ ಪಾದಯಾತ್ರೆಗೆ ಚಾಲನೆ ದೊರೆಯಿತು.
ನಗರದ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರ ಕಚೇರಿ ಎದುರು ಶಿಕ್ಷಕರು ಧರಣಿ ನಡೆಸುತ್ತಿದ್ದು ಅಲ್ಲಿ ಗದುಗಿನ ತೋಂಟದ ಡಾ| ಸಿದ್ಧಲಿಂಗ ಸ್ವಾಮೀಜಿ ಹಾಗೂ ಧಾರವಾಡ ಮುರುಘಾಮಠದ ಮಲ್ಲಿಕಾರ್ಜುನ ಶ್ರೀಗಳು ಪಾದಯಾತ್ರೆಗೆ ಚಾಲನೆ ನೀಡಿದರು. ಫಾದರ್ ಅಲೆಕ್ಸ್ ಡಿಕ್ರೂಜ್, ವಿಜಾಪುರದ ಹಾಶಂಪೀರ ದರ್ಗಾದ ಪೀಠಾಧೀಶ ಸಯ್ಯದ ಶಾ ಮುರ್ತುಜಾ ಹುಸೈನಿ ಉಪಸ್ಥಿತರಿದ್ದು ಪಾದಯಾತ್ರೆಗೆ ಯಶ ದೊರೆಯಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವರಾದ ಪಿ.ಸಿ. ಸಿದ್ಧನಗೌಡರ, ಎ.ಬಿ. ಪಾಟೀಲ, ಅಲ್ಕೋಡ ಹನುಮಂತಪ್ಪ ವಿಧಾನ ಪರಿಷತ್ ಸದಸ್ಯರಾದ ಪುಟ್ಟಣ್ಣ, ಮರಿತಿಬ್ಬೆಗೌಡ, ಹಳಿಯಾಳ ಶಾಸಕ ಸುನೀಲ ಹೆಗಡೆ, ಮಾಜಿ ಶಾಸಕ ವಿನಯ ಕುಲಕರ್ಣಿ, ಎಫ್.ಎಚ್. ಜಕ್ಕಪ್ಪನವರ, ಬಿ.ಡಿ. ಹಿರೇಮಠ, ಬಿ.ವಿ. ಸೋಮಾಪುರ, ಎನ್.ಎಚ್. ಕೋನರೆಡ್ಡಿ, ಇಸ್ಮಾಯಿಲ್ ತಮಟಗಾರ, ಸುರೇಶ ಹಿರೇಮಠ, ಬಿ.ಎಂ. ಹನಸಿ, ಬಿ.ಎಸ್. ಸೊಪ್ಪಿನ, ಮೋಹನ ಅರ್ಕಸಾಲಿ, ಪ್ರೇಮಲತಾ ಹೊರಟ್ಟಿ, ಕಮಲಾ ಹೊಂಬಳ, ಬಿ.ಎಚ್. ದೇಸಾಯಿ, ಬಿ.ಬಿ. ಗಂಗಾಧರಮಠ, ಶಂಕರ ನರೇಂದ್ರ, ರಾಜೇಶ ಹೆಬ್ಬಳ್ಳಿ, ವಸಂತ ಹೊರಟ್ಟಿ, ಜಿ.ಆರ್. ಭಟ್, ಶ್ಯಾಮ ಮಲ್ಲನಗೌಡರ, ಆನಂದ ಕುಲಕರ್ಣಿ, ಎಂ.ಬಿ. ನಾತು, ಮುತ್ತುರಾಜ ಮತ್ತಿಕೊಪ್ಪ, ಚೇತನ ಹೊಸ್ಮನಿ, ಪಾಲಿಕೆ ಸದಸ್ಯೆ ವಿಜಯಲಕ್ಷ್ಮಿ ಲೂತಿಮಠ, ಉರ್ದು ಕಲ್ಚರಲ್ ಫೌಂಡೇಶನ್ ಅಧ್ಯಕ್ಷ ಜಿ.ಎಂ. ದರೋಗಾ ಮೊದಲಾದವರು ಹಾಜರಿದ್ದರು.
ಪಾದಯಾತ್ರೆ ನೇತೃತ್ವ ವಹಿಸಿರುವ ಬಸವರಾಜ ಹೊರಟ್ಟಿ ಅವರಿಗೆ ಮುತ್ತೆ$çದೆಯರು ಆರತಿ ಬೆಳಗಿ ಬೀಳ್ಕೊಟ್ಟರು. ಮಧ್ಯಾಹ್ನ 12:00 ಗಂಟೆಗೆ ಆರಂಭಗೊಂಡ ಪಾದಯಾತ್ರೆ ಸಂಜೆ 7:00 ಗಂಟೆ ಸುಮಾರಿಗೆ ಹುಬ್ಬಳ್ಳಿ ಮೂರುಸಾವಿರ ಮಠ ಆವರಣ ತಲುಪಿತು. ವಿದ್ಯಾಗಿರಿ ಜೆಎಸ್ಎಸ್ ಕಾಲೇಜಿನ ಬಳಿ ಜನತಾ ಶಿಕ್ಷಣ ಸಮಿತಿ ವಿತ್ತಾಧಿಕಾರಿ ಡಾ| ಅಜಿತಪ್ರಸಾದ್ ಹಾಗೂ ಕಾಲೇಜಿನ ಸಿಬ್ಬಂದಿ ಪಾದಯಾತ್ರೆಯನ್ನು ಸ್ವಾಗತಿಸಿದರು.