ಪಣಂಬೂರು : ಕೆಂಜಾರು ವಿಮಾನ ದುರಂತದಲ್ಲಿ ಗುರುತಿಸಲಾಗದ ಶವಗಳನ್ನು ಕೂಳೂರು ಬಳಿಯ ಕುದುರೆಮುಖ ಅದಿರು ಸಂಸ್ಥೆಯ ಮುಂಭಾಗದ ಪಾಲ್ಗುಣಿ ನದಿ ತೀರದಲ್ಲಿ ದಫನ ಮಾಡಲಾಗಿತ್ತು. ಅಂದಿನ ಕೇಂದ್ರ, ರಾಜ್ಯ ಸರಕಾರಗಳ ಗಣ್ಯ ಮಂತ್ರಿಗಳು, ಹಿರಿಯ ಅಧಿಕಾರಿಗಳ ಸಮ್ಮುಖ ಸರಕಾರಿ ಗೌರವದೊಂದಿಗೆ ಇಲ್ಲಿ ದಫನ ಮಾಡಲಾಗಿತ್ತು. ವಿಮಾನ ದುರಂತದ ನೆನಪು ಇನ್ನೂ ಹಸಿರಾಗಿರುವಾಗಲೇ ಈ ಜಾಗ ಇದೀಗ ಅಕ್ಷರಶಃ ಮಾಯವಾಗಿದೆ.ಅನಾಥ ಶವಗಳನ್ನು ಹೂತ ಜಾಗದ ಮೇಲೆ ಮಣ್ಣು ರಸ್ತೆಯೊಂದು ನಿರ್ಮಾಣವಾಗಿದೆ. ಈ ರಸ್ತೆ ಸಾರ್ವಜನಿಕ ಉಪಯೋಗಕ್ಕೆ ಅಲ್ಲ. ಬದಲಾಗಿ ಮರಳು ಸಾಗಿಸಲು ನಿರ್ಮಾಣಗೊಂಡಿದೆ.ವಿಮಾನ ದುರಂತದ ನೆನಪು ಮಾಸುವ ಮುನ್ನವೇ ಅನಾಥ ಶವಗಳಿಗೆ ಈ ದುಸ್ಥಿತಿ ಬಂದೊದಗಿದೆ. ವಿಮಾನ ದುರಂತದಲ್ಲಿ ಮಡಿದವರ ಕುಟುಂಬಸ್ಥರು ಪರಿಹಾರಕ್ಕಾಗಿ ಇನ್ನೂ ಕೋರ್ಟು ಕಚೇರಿ ಎಂದು ಓಡಾಡಿ ಹೈರಾಣವಾಗುತ್ತಿದ್ದಾರೆ. ಒಂದೆಡೆ ಕೆಂಜಾರಿನಲ್ಲಿ ಮೃತರ ಗೌರವಾರ್ಥ ಹಾಕಲಾಗಿದ್ದ ಹೆಸರುಳ್ಳ ನಾಮಪಲಕ ದ್ವಂಸವಾಗಿದ್ದರೆ ಇತ್ತ ಗುರುತಿಸಲಾಗದ ಶವಗಳನ್ನು ಹೂಳಲಾದ ಜಾಗದಲ್ಲಿ ರಸ್ತೆ ನಿರ್ಮಾಣಗೊಂಡಿದೆ. ಮರಳುಗಾರಿಕೆ ಉಚ್ಛಾ†ಯ ಸ್ಥಿತಿಯಲ್ಲಿದ್ದಾಗ ಪಾಲ್ಗುಣಿ ತಟದಲ್ಲಿ ಮರಳುಗಾರಿಕೆಗೆ ಪೈಪೋಟಿ ಆರಂಭವಾಗಿತ್ತು. ಹೀಗಾಗಿ ಕೂಳೂರು ಬಳಿಯಲ್ಲಿ ಮರಳುಗಾರಿಕೆಯೂ ಜೋರಾಗಿತ್ತು. ಇದೀಗ ಕೇರಳ ಸರಕಾರ ಅಲ್ಲಿನ ನದಿಗಳಲ್ಲಿ ಮರಳು ತೆಗೆಯಲು ಅನುಮತಿ ನೀಡಿದ್ದರಿಂದ ಜಿಲ್ಲೆಯ ಮರಳು ಉದ್ಯಮ ಬೇಡಿಕೆ ಕಳೆದುಕೊಂಡಿದ್ದರೂ ಕಾನೂನು ಮೀರಿ ಸಾಗಾಟ ಮಾತ್ರ ನಿಯಂತ್ರಣಕ್ಕೆ ಬಂದಿಲ್ಲ.