ಬೆಳ್ತಂಗಡಿ: ಶಾಸಕ ಕೆ. ವಸಂತ ಬಂಗೇರ ಅವರು ಬುಧವಾರ ಕೊಕ್ಕಡ ವೈದ್ಯನಾಥೇಶ್ವರ ದೇವಸ್ಥಾನದಲ್ಲಿ ನಡೆಸಿದ ಸಂಧಾನ ಯಶಸ್ವಿಯಾಗಿದ್ದು ಅಂಗಡಿ ಮಾಲಕರು ರಸ್ತೆ ವಿಸ್ತರಣೆಗೆ ನೆರವಾಗುವ ಭರವಸೆ ನೀಡಿದ್ದಾರೆ.ಕೊಕ್ಕಡ ಪೇಟೆಯ ಇಕ್ಕೆಲಗಳಲ್ಲಿ ಅಂಗಡಿಗಳಿರುವ ಕಾರಣ ಎರಡು ಘನ ವಾಹನಗಳು ಏಕಕಾಲದಲ್ಲಿ ಸಂಚರಿಸುವುದು ಅಸಾಧ್ಯವಾಗಿದೆ. ದೇವಸ್ಥಾನದ ಜಾಗದಲ್ಲಿ ಈ ಹಿಂದಿನಿಂದಲೂ ಅಂಗಡಿ ವ್ಯವಹಾರಗಳನ್ನು ಸ್ಥಳ ಬಾಡಿಗೆ ನೆಲೆಯಲ್ಲಿ ನಡೆಸಿಕೊಂಡು ಬಂದವರು ಇದ್ದಾರೆ. ಈ ಕಟ್ಟಡಗಳು ಹಳೆಯದಾಗಿವೆೆ. ಕಟ್ಟಡಗಳ ದಟ್ಟಣೆಯಿಂದಾಗಿ ಸಂಚಾರದಲ್ಲಿ ತೊಡಕಾಗುವ ಕಾರಣ ರಸ್ತೆ ಅಗಲಗೊಳಿಸಲು ಹಿಂದಿನ ಸಹಾಯಕ ಕಮಿಷನರ್ ಡಾ| ಹರೀಶ್ ಕುಮಾರ್ ಸಭೆ ಕರೆದಿದ್ದರು. ಅನೇಕ ಸಭೆಗಳಾಗಿತ್ತು. ಹಲವರು ಅಗಲಗೊಳಿಸಲು ಒಪ್ಪಿದರೆ ಇನ್ನೊಂದಷ್ಟು ಮಂದಿಯ ವಿರೋಧವೂ ಇತ್ತು.ಈ ಮಧ್ಯೆ ಹೋರಾಟಗಾರ ಶ್ರೀಧರ ಗೌಡ ಅವರ ನೇತೃತ್ವದಲ್ಲಿ ಎಸ್ಎಂಎಸ್ ಚಳವಳಿಯೂ ನಡೆದಿತ್ತು. ಶ್ರೀಧರ ಗೌಡರು ಫೆ. 23ರಿಂದ ಉಪವಾಸ ಸತ್ಯಾಗ್ರಹ ಕೂರುವುದಾಗಿ ಹೇಳಿಕೆ ನೀಡಿದ್ದರು.ಬುಧವಾರ ತಹಶೀಲ್ದಾರ್ ಕುಸುಮ ಕುಮಾರಿ ಹಾಗೂ ಶಾಸಕರ ನೇತೃತ್ವದಲ್ಲಿ ಸಭೆ ನಡೆಸಲಾಯಿತು. ಸಮಾಲೋಚನಾ ಸಭೆಯಲ್ಲಿ ಅಂಗಡಿ ಮಾಲಕರು ತಮ್ಮ ಅಹವಾಲನ್ನು ಮುಂದಿಟ್ಟರು. ಕೊನೆಗೂ ಸಂಧಾನದ ಮೂಲಕ ಸಭೆಯನ್ನು ಮುಗಿಸುವಲ್ಲಿ ಯಶಸ್ವಿಯಾಗಲಾಯಿತು. ಎರಡೂ ಕಡೆಗಳಲ್ಲಿ ರಸ್ತೆ ಅಗಲಗೊಳಿಸುವುದು, ಅಂಗಡಿ ಮಾಲಕರ ಮೂಲಕಟ್ಟಡಕ್ಕೆ ಧಕ್ಕೆ ಬರದಂತೆ ವಿಸ್ತರಿತ ಕಟ್ಟಡವನ್ನು ತೆಗೆಯುವಂತೆ ನಿರ್ಣಯಕ್ಕೆ ಬರಲಾಯಿತು.ಕೊಕ್ಕಡ ಪಂಚಾಯತ್ ಅಧ್ಯಕ್ಷ ಕುಶಾಲಪ್ಪ ಗೌಡ, ಕಂದಾಯ ನಿರೀಕ್ಷಕ ನಾರಾಯಣ ಗೌಡ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪುರುಷೋತ್ತಮ, ಮಾಜಿ ಅಧ್ಯಕ್ಷ ಸೆಬಾಸ್ಟಿಯನ್, ಸುಬ್ರಹ್ಮಣ್ಯ ಶಬರಾಯ ಮೊದಲಾದವರು ಇದ್ದರು.