Udayavani | Feb 22, 2012
ಮಲ್ಪೆ: ಮಹಾರಾಷ್ಟ್ರದ ರತ್ನಾಗಿರಿಯಲ್ಲಿ ಮಲ್ಪೆ ಬಂದರಿನ ಆಳಸಮುದ್ರ ಬೋಟಿನ ಮೀನುಗಾರರ ಮೇಲೆ ಅಲ್ಲಿನ ಮೀನುಗಾರರು ಹಲ್ಲೆ ನಡೆಸಿ ಬೋಟಿನಲ್ಲಿದ್ದ ಮೀನು ಹಾಗೂ ಇನ್ನಿತರ ಉಪಕರಣಗಳನ್ನು ಲೂಟಿಗೈದ ಹಿನ್ನಲೆಯಲ್ಲಿ ಬುಧವಾರ ಮೀನುಗಾರರ ಕಾರ್ಮಿಕರು ಮೀನುಗಾರಿಕೆಗೆ ತರಳದೆ ಘಟನೆಯನ್ನು ಖಂಡಿಸಿ ಮಲ್ಪೆ ಡೀಪ್ಸೀ ತಾಂಡೇಲ ಸಂಘದ ನೇತೃತ್ವದಲ್ಲಿ ಮಲ್ಪೆ ಬಂದರಿನಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಕಳೆದ ಒಂದು ವಾರದಿಂದ ರತ್ನಾಗಿರಿ ಸಮೀಪ ಸುಮಾರು 25 ನಾಟಿಕಲ್ ಮೈಲಿನಲ್ಲಿ ಮೀನುಗಾರಿಕೆ ನಡೆಸುತ್ತಿರುವಾಗ ಅಲ್ಲಿನ ಪಸೀìನ್ ದೋಣಿಯ ಮೀನುಗಾರರು ಏಕಾಏಕಿ ಬಂದು ದೋಣಿಗೆ ಡಿಕ್ಕಿ ಹೊಡೆದು ದೋಣಿಯನ್ನು ಹಾನಿಗೊಳಿಸಿದ್ದಲ್ಲದೆ ದೋಣಿಯಲ್ಲಿದ ಫಿಶ್ ಫೈಂಡರ್, ಜಿಪಿಎಸ್, ವಯರ್ಲೆಸ್ ಅಲ್ಲದೆ ಹಿಡಿದ ಉತ್ತಮ ಜಾತಿಯ ಮೀನನ್ನು ಲೂಟಿ ಮಾಡಿದ್ದಾರೆ. ಭಯಭೀತರಾದ ಮೀನುಗಾರರು ತಮ್ಮ ಜೀವಕ್ಕೆ ಹಾಗೂ ಬೋಟಿಗೆ ಸೂಕ್ತ ರಕ್ಷಣೆ ನೀಡಬೇಕೆಂದು ಮನವಿ ಮಾಡಿದರು.

ಪ್ರತಿಭಟನಾಕಾರರನ್ನು ಉದೇಶಿಸಿ ಮಾತನಾಡಿದ ಮಲ್ಪೆ ಪ್ರಮೋದ್ ಮಧ್ವರಾಜ್ ಈ ಹಿಂದೆ ದೇವಗಡದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ಇಲ್ಲಿನ ದೋಣಿಗಳನ್ನು ವಶ ಪಡಿಸಿಕೊಂಡ ಸಂದರ್ಭದಲ್ಲಿ ಕೇಂದ್ರದ ಮಂತ್ರಿಗಳ ಮೂಲಕ ಮಾತುಕತೆ ನಡೆಸಿ ಶಾಶ್ವತ ಪರಿಹಾರವನ್ನು ಕಲ್ಪಿಸಿ ಕೊಡಲಾಗಿತ್ತು. ಇದೀಗ ಮತ್ತೆ ಮಹಾರಾಷ್ಟ್ರದ ರತ್ನಾಗಿರಿಯಲ್ಲಿ ಕರ್ನಾಟಕ ರಾಜ್ಯದ ಮೀನುಗಾರರಿಗೆ ತೊಂದರೆ ಉಂಟಾಗಿದೆ. ತೊಂದರೆ ನಿವಾರಿಸುವ ಬಗ್ಗೆ ಆಸ್ಕರ್ ಫೆರ್ನಾಂಡಿಸ್ ಮೂಲಕ ಅಲ್ಲಿನ ಮುಖ್ಯಮಂತ್ರಿಯ ಬಳಿ ಚರ್ಚಿಸಿ ಮೀನುಗಾರರಿಗೆ ಸೂಕ್ತ ರಕ್ಷಣೆಯನ್ನು ನೀಡುವುದು ಮತ್ತು ಶಾಶ್ವತ ಪರಿಹಾರವನ್ನು ಒದಗಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೆನೆ ಎಂದರು.
ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ಬಹುತೇಕ ದೋಣಿಗಳು ಮಂಗಳವಾರದಿಂದ ಮೀನುಗಾರಿಕೆಯನ್ನು ಅರ್ಧಕ್ಕೆ ಮಟಕುಗೊಳಿಸಿ ಹಿಂತಿರುಗಿವೆ. ಸುಮಾರು 500 ಕ್ಕೂ ಅಧಿಕ ಬೋಟ್ಗಳು ಹಿಂತಿರುಗಿ ಮಲ್ಪೆ ಬಂದರಿನಲ್ಲಿ ಲಂಗರು ಹಾಕಿವೆ. ಕೆಲವು ದೋಣಿಗಳು ಕಾರಾವರ ಬಂದರಿನ ದಡ ಸೇರಿವೆ. ಗಂಭೀರ ಗಾಯಗೊಂಡ ಇಬ್ಬರು ಮೀನುಗಾರರು ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಮಸ್ಯೆ ಪರಿಣಾಮಕಾರಿಯಾಗಿ ಇತ್ಯರ್ಥ ಆಗುವವರೆಗೆ ಡೀಪ್ಸೀ ಟ್ರಾಲ್ ಬೋಟ್ ಮೀನುಗಾರಿಕೆ ಅನಿರ್ದಿಷ್ಟಾವಧಿ ಸ್ಥಗಿತವಾಗಲಿದೆ ಎನ್ನಲಾಗಿದೆ.

ಪ್ರತಿಭಟನೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಉದಯ ಕುಮಾರ್ ಶೆಟ್ಟಿ, ಪಾಂಡುರಂಗ ಮಲ್ಪೆ ಮೊದಲಾದವರು ಮಾತನಾಡಿದರು. ತಾಂಡೇಲ ಸಂಘದ ಅಧ್ಯಕ್ಷ ಶಶಿಧರ ಸಾಲಿಯಾನ್, ತಿಮ್ಮಪ್ಪ ಮೊಗೇರ, ರಾಮ ಅಮೀನ್, ಗುರುದಾಸ್ ಸುವರ್ಣ, ರವಿ ಸುವರ್ಣ, ಚಂದ್ರಶೇಖರ, ಮಹದೇವ ಭಟ್ಕಳ, ಕೇಶವ ಬೈಂದೂರು, ಸುರೇಂದ್ರ ಪಡುಕರೆ, ವಿಶ್ವನಾಥ್ ಕುಂದರ್, ಕರುಣಾಕರ ಮೈಂದನ್, ಬೋಜರಾಜ್ ಹೂಡೆ ಮೊದಲಾದವರು ಪಾಲ್ಗೊಂಡಿದ್ದರು.
ಈ ಹಿಂದೆಯೂ ಇಂತಹ ಘಟನೆಗಳು ನಡೆದಿದ್ದವು. ತೀರ ಪ್ರದೇಶದಲ್ಲಿ ಮೀನುಗಾರಿಕೆ ನಡೆಸುವ ಅಲ್ಲಿನ ಪರ್ಸಿನ್ ಮೀನುಗಾರರಿಗೆ ನಮ್ಮಿಂದ ಯಾವ ತೊಂದರೆಯೂ ಇಲ್ಲ. ನಾವು ಆಳ ಸಮುದ್ರದಲ್ಲಿ ಇರುವವರು. ಸಮುದ್ರದಲ್ಲಿ ನಮಗೆ ಯಾವುದೇ ಭದ್ರತೆ ಇಲ್ಲ. ನಮಗೆ ಜೀವ ರಕ್ಷಣೆ ನೀಡಬೇಕು.
- ರವಿ ಸಾಲಿಯಾನ್,ಬೋಟಿನ ತಂಡೇಲ
2 ವರ್ಷಗಳಿಂದ ಇಲ್ಲಿನ ಮೀನುಗಾರರ ಮೇಲೆ ಹಲ್ಲೆ ಲೂಟಿ ನಡೆಯುತ್ತಿದೆ. ಲೂಟಿಕೋರರ ಮೂಲ ಉದೇªಶ ಬೇರೆಯೆ ಇರಬೇಕು. ಅಲ್ಲಿನ ಕಾನೂನು ಪ್ರಕಾರ ಸಮುದ್ರತಟದಿಂದ 12 ನಾಟಿಕಲ್ ಮೈಲು ದೂರ ಮೀನುಗಾರಿಕೆ ನಡೆಸುತ್ತಿದ್ದರೂ ವಿನಾ ಕಾರಣ ಇಲ್ಲಿನ ಮೀನುಗಾರರ ಮೇಲೆ ದೌರ್ಜನ್ಯ ನಡೆಸಿ ಘರ್ಷಣೆಗೆ ದಾರಿ ಮಾಡಿಕೊಡುತ್ತಿದ್ದಾರೆ. ಇದು ಖಂಡನೀಯ, ಕರಾವಳಿಯಲ್ಲೆಡೆ ಮುಕ್ತವಾಗಿ ಮೀನುಗಾರಿಕೆ ನಡೆಸಲು ಸರಕಾರ ಹೊಸ ನೀತಿ ರೂಪಿಸಬೇಕು.
- ಸತೀಶ್ ಅಮೀನ್ ಪಡುಕರೆ,