ನನ್ನ ಲ್ಯಾಂಡ್ಲೈನ್ ಫೋನ್ ಒಂದೇ ಸವನೆ ರಿಂಗಣಿಸುತ್ತಿತ್ತು. ನಾನು ಎದ್ದವನೇ ಮೊದಲು ಗಡಿಯಾರ ನೋಡಿದರೆ ಸಮಯ ಮುಂಜಾನೆಯ 6 ಗಂಟೆ 20 ನಿಮಿಷ. ಸಾಮಾನ್ಯವಾಗಿ ಆ ವೇಳೆಗೆ ನನ್ನ ಮೊಬೈಲ್ ಸ್ವಿಚ್ ಆಫ್ ಆಗಿರುತ್ತಿತ್ತು. ಮುಂಜಾನೆಯ ಆ ಸಂದರ್ಭದಲ್ಲಿ ಲ್ಯಾಂಡ್ಲೈನ್ಗೆ ಫೋನ್ ಬಂದರೆ ಅದು ಯಾವುದೋ ಅಪಾಯದ ಮುನ್ಸೂಚನೆ ಎಂದೇ ನನ್ನ ಅನುಭವ. ಫೋನ್ ಎತ್ತಿದಾಗ ಬಂದ ಮಾಹಿತಿಯೂ ಅದೇ ಆಗಿತ್ತು: ಬಜಪೆಯ ವಿಮಾನ ನಿಲ್ದಾಣದ ಬಳಿ ದುಬಾೖನಿಂದ ಬರುತ್ತಿದ್ದ ವಿಮಾನ ಪತನವಾಗಿದೆ, ಅಪಾರ ಸಾವು ಸಂಭವಿಸಿದೆ.
ಅದು 22-5-2010ನೇ ಶನಿವಾರ. ತತ್ಕ್ಷಣ ನನ್ನ ಸ್ನೇಹಿತರೋರ್ವರಿಗೆ ಕರೆ ಮಾಡಿ ಅವರ ವಾಹನ ತರುವಂತೆ ಕೋರಿದೆ. ವಾಹನ ಬರುವಷ್ಟರಲ್ಲಿ ಹೊರಡಲು ಸಿದ್ಧನಾಗಿದ್ದೆ. ಅದು ಬಜಪೆ ವಿಮಾನ ನಿಲ್ದಾಣಕ್ಕೆ ಸುಮಾರು 20 ನಿಮಿಷಗಳ ಹಾದಿ

ಬಜಪೆ ವಿಮಾನ ದುರಂತ
158 ಮಂದಿ ಸಜೀವ ದಹನ- ಇತಿಹಾಸದಲ್ಲೇ ಭೀಕರ
ಅದು 2010ರ ಮೇ 22ನೇ ದಿನಾಂಕ. ಮಂಗಳೂರಿನ ಬಜಪೆ ವಿಮಾನ ನಿಲ್ದಾಣದ ಬಳಿ ಅಂದು ಸಂಭವಿಸಿದ್ದು ಇತಿಹಾಸದಲ್ಲೇ ಅತ್ಯಂತ ಭೀಕರ ದುರಂತಗಳಲ್ಲೊಂದು. ಈ ದುರಂತದಲ್ಲಿ 158 ಮಂದಿ ಪ್ರಯಾಣಿಕರು ಸಜೀವ ಭಸ್ಮಗೊಂಡಿದ್ದರು. ಕೇವಲ 8 ಮಂದಿ ಮಾತ್ರ ಪವಾಡಸದೃಶವಾಗಿ ಬದುಕಿ ಉಳಿದಿದ್ದರು.
ಬಜಪೆ ವಿಮಾನ ನಿಲ್ದಾಣದ ಒಂದೂವರೆ ಕಿ.ಮೀ. ಅಂತರದ ಕೆಂಜಾರು ಎಂಬಲ್ಲಿ ಈ ದುರಂತ ಸಂಭವಿಸಿತ್ತು. ದುರಂತಕ್ಕೆ ಈಡಾದ ನತದೃಷ್ಠ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನ ಅಂದು ಶನಿವಾರ ಮುಂಜಾನೆ ದುಬಾೖನಿಂದ ಮಂಗಳೂರಿಗೆ ಹೊರಟಿತ್ತು. ಅಲ್ಲಿಂದ 2 ತಾಸು 5 ನಿಮಿಷಗಳ ಯಾನ ಮುಗಿಸಿ ಇನ್ನೇನು ಬಜಪೆ ವಿಮಾನ ನಿಲ್ದಾಣದಲ್ಲಿ ಇಳಿಯಬೇಕು ಅನ್ನುವಷ್ಟರಲ್ಲಿ ದುರಂತ ನಡೆದು ಹೋಗಿತ್ತು. ಮುಂಜಾನೆ 6 ಗಂಟೆ 5 ನಿಮಿಷ- 6 ಗಂಟೆ 6 ನಿಮಿಷದ ನಡುವೆ ವಿಮಾನ ರನ್ವೇಯಿಂದ ಜಾರಿ ಮುಂದೆ ಹೋಗಿ ಪತನವಾಗಿ ಬಿಟ್ಟಿತ್ತು.
166 ಪ್ರಯಾಣಿಕರ ಪೈಕಿ 158 ಮಂದಿ ಸಜೀವದಹನವಾದರು. ಅವರಲ್ಲಿ ಮಕ್ಕಳು- 19, ಶಿಶುಗಳು-4, ಮಹಿಳೆಯರು-33, ಪುರುಷರು-102. ಬದುಕಿ ಉಳಿದವರು- 8 ಮಂದಿ.

ವಿಮಾನ ಇಳಿಯುವ ಮುನ್ನ ಸುರಕ್ಷಾ ಸಂಕೇತಗಳ ವಿನಿಮಯವಾಗಿತ್ತು. ಆದರೆ, ವಿಮಾನ ರನ್ವೇಯಲ್ಲಿ ನಿಲ್ಲದೆ ಮುಂದೆ ಚಲಿಸುತ್ತಾ ಅಲ್ಲಿನ ಸೂಚನಾ ಗೋಪುರದ ಎರಡು ಕಂಬಗಳಿಗೆ ಢಿಕ್ಕಿಯಾಗಿ ಕಂಬ ಮುರಿದು ವಿಮಾನ ಅಲ್ಲಿಂದ ಸುಮಾರು 150 ಮೀಟರ್ ಅಂತರಕ್ಕೆ ಉರುಳಿಬಿತ್ತು. ಅಲ್ಲಿ ಅದರ ರೆಕ್ಕೆ ಮುರಿದು ಮತ್ತೆ ಒಂದಿಷ್ಟು ಮುಂದೆ ಚಲಿಸಿ ಕೆಂಜಾರು ಎಂಬಲ್ಲಿ ಪೂರ್ವದಿಕ್ಕಿನಲ್ಲಿ 150 ಮೀ. ಕೆಳಕ್ಕೆ ಧುಮುಕಿತು. ವಿದ್ಯುತ್ ಸಂಪರ್ಕದ ತಂತಿಗಳನ್ನು ತುಂಡರಿಸುತ್ತಾ ವಿಮಾನ ಪತನವಾಯಿತು. ಭಾರೀ ಸ್ಫೋಟದೊಂದಿಗೆ ಮರಗಳ ನಡುವೆ ಬಿದ್ದ ವಿಮಾನ ಕ್ಷಣಾರ್ಥದೊಳಗೆ ಬೆಂಕಿಗೆ ಆಹುತಿಯಾಯಿತು. ಭಾರೀ ಪ್ರಮಾಣದಲ್ಲಿ ಕಪ್ಪು ಹೊಗೆ ಆಗಮಸಕ್ಕೆ ಚಿಮ್ಮಿತು. ಇದು ದುರಂತ ಸಂಭವಿಸಿದ ಕ್ಷಣದ ಚಿತ್ರಣ. ಇದು ಭಾರತ ಮಾತ್ರವಲ್ಲ, ಜಗತ್ತಿನ ಅತೀ ಭೀಕರ ವಿಮಾನ ದುರಂತಗಳಲ್ಲೊಂದು.
ಈ ದುರಂತಕ್ಕೆ ವಿಮಾನ ಮುಖ್ಯ ಪೈಲಟ್, ಮೂಲತಃ ವಿದೇಶೀಯ ಸರ್ಬಿಯಾದ ಜ್ಲಾಟ್ಕೊà ಗುÉಸಿಕಾ ಅವರ ತಪ್ಪು ನಿರ್ಧಾರವೇ ಕಾರಣವಾಗಿತ್ತು. ದುರಂತದಲ್ಲಿ ಬದುಕುಳಿದವರ ತತ್ಕ್ಷಣದ ಅಭಿಪ್ರಾಯ ಅದೇ ಆಗಿತ್ತು. ಮುಂದೆ, ಬ್ಲಾÂಕ್ಬಾಕ್ಸ್ ದೊರೆತು ಅದರ ವಿಶ್ಲೇಷತೆಯೂ ಈ ಅಭಿಪ್ರಾಯವನ್ನು ದೃಢೀಕರಿಸಿತು. ಈ ನತದೃಷ್ಟ ವಿಮಾನದ ಸಹ ಪೈಲಟ್ ಆಗಿದ್ದವರು ಭಾರತೀಯ ಎಚ್. ಎಸ್. ಅಹ್ಲುವಾಸಿಯಾ.
ದುರಂತದ ಸಂದರ್ಭ ಹೃದಯವಿದ್ರಾವಕವಾಗಿತ್ತು. "ಅಮ್ಮ ಎಲ್ಲಿ.. ಅಪ್ಪ ಎಲ್ಲಿ.. ಅಣ್ಣ ಎಲ್ಲಿ.. ಅಕ್ಕ ಎಲ್ಲಿ.. ಮಾವ ಎಲ್ಲಿ.. ಅಜ್ಜ ಎಲ್ಲಿ.. ಅಜ್ಜಿ ಎಲ್ಲಿ.. ಪುಟ್ಟ ಎಲ್ಲಿ.. ಆಂಟಿ ಎಲ್ಲಿ.. ವಿಮಾನ ದುರಂತದ ಕೆಲವು ತಾಸಿನಲ್ಲಿ ಮಂಗಳೂರಿನ ವೆನಾÉಕ್ ಸರಕಾರಿ ಆಸ್ಪತ್ರೆಯಲ್ಲಿ ಮುಗಿಲು ಮುಟ್ಟುವಂತಿದ್ದ ಆಕ್ರಂದನದ ನಡುವೆ ಕೇಳಿ ಬರುತ್ತಿದ್ದ ಪ್ರಶ್ನೆಗಳಿವು.
ನಿಜಕ್ಕಾದರೆ, ಅಂದು ಈ ಪ್ರಶ್ನೆಗಳಿಗೆ ಯಾರಲ್ಲೂ ಉತ್ತರವಿರಲಿಲ್ಲ. ಉತ್ತರ ಎಂಬುವುದಿದ್ದರೆ ಕಣ್ಣೀರು ಮಾತ್ರ ಆಗಿತ್ತು. ಬಹುತೇಕ ಶವಗಳು ಸುಟ್ಟು ಕರಕಲಾಗಿದ್ದವು. ಮಕ್ಕಳ ಕಳೇಬರಗಳು ಒಂದಿಷ್ಟು ಮುದ್ದೆಯಂತಾಗಿದ್ದವು. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಕಾಸರಗೋಡು, ಕಾಞ್ಞಂಗಾಡ್, ಕಣ್ಣೂರು.. ಹೀಗೆ ವಿವಿಧೆಡೆಯ ಪ್ರಯಾಣಿಕರು ಕರಕಲಾಗಿದ್ದರು. ದುಬಾೖನಲ್ಲಿ ಕಠಿನ ಪರಿಶ್ರಮಗಳಾಗಿ ಊರಲ್ಲಿ ಒಂದಿಷ್ಟು ಬದುಕು ಕಟ್ಟಿಕೊಳ್ಳುವ ಆಶಯದಲ್ಲಿ ಹಿಂತಿರುಗುತ್ತಿದ್ದ ಅನೇಕರಿದ್ದರು.

ಶುಭಕಾರ್ಯಗಳಿಗೆ ಊರಿಗೆ ಬರುವವರಿದ್ದರು. ಮದುವೆ ನಿಶ್ಚಿತಾರ್ಥ ಆದವರಿದ್ದರು. ತಮ್ಮ ಅಥವಾ ಕುಟುಂಬದ ನಿಶ್ಚಿತಾರ್ಥ, ವಧುಪರೀಕ್ಷೆ, ಗೃಹಪ್ರವೇಶ, ಉಪನಯನ, ಸೀಮಂತ, ಮದುವೆ, ನಾಮಕರಣ..' ಹೀಗೆ ಹತ್ತು ಹಲವು ಶುಭ ಕಾರ್ಯ; ಧಾರ್ಮಿಕ ಉತ್ಸವಗಳು, ಮಕ್ಕಳ ಶೈಕ್ಷಣಿಕ ವರ್ಷಾರಂಭ, ರಜೆಯಲ್ಲಿ ಬಂದು- ಹೋಗುವವರು. ಹೀಗೆ ಎಲ್ಲರೂ ಇದ್ದರು. ಆದರೆ, ಮುಖ್ಯ ಪೈಲಟ್ನ "ನಿದ್ದೆ' ಅವರನ್ನು ಚಿರನಿದ್ರೆಗೆ ದೂಡಿತು.
ವಿಮಾನದ ಬಾಗಿಲು ತೆರೆದುಕೊಂಡಾಗ ಹಾರಿದವರು ಅಥವಾ ಬಿದ್ದವರು ಓರ್ವ ವೈದ್ಯಕೀಯ ವಿದ್ಯಾರ್ಥಿನಿ ಸಹಿತ ಎಂಟು ಮಂದಿ. ಅವರಿಗೆ ಮರುಜನ್ಮ ಪಡೆದ ಅನುಭವ. (ಅಂತಿಮ ಭಾಗ: ಮಹಾದುರಂತದ ಬಳಿಕ).

ಕೊನೆಯ ಕ್ಷಣದ ಸಂಭಾಷಣೆ
6:03:35 (ಮುಂಜಾನೆ)- ಸಹ ಪೈಲಟ್= ನಾವು ಜಾಸ್ತಿ ಎತ್ತರದಲ್ಲಿದ್ದೇವೆ.
6:03:42 ಸಹ- ರನ್ವೇ ನಮ್ಮ ಕೆಳಗೇ ಇದೆ.
6:03:43- ಕ್ಯಾಪ್ಟನ್- ಓ ಮೈಗಾಡ್ ಓಕೆ.
6:03:54- ಸಹ- ಲ್ಯಾಂಡಿಂಗ್ ಬದಲು ಒಂದು ಸುತ್ತು ಹಾರಿಸೋಣವೇ ?
6:03:56 ಕ್ಯಾಪ್ಟನ್- ತಪ್ಪು
6:04:06 ಸಹ- ಒಂದು ಸುತ್ತು ಹಾರಾಡಿಸೋಣ.
6:04:07: ಸಹ- ಕ್ಯಾಪ್ಟನ್
6:04:12 ಸಹ- ಎಡವಟ್ಟಾಗಿದೆ.
6:04:38: ಸಹ- ಒಂದು ಸುತ್ತು ಹಾರಾಡಿಸೋಣವೇ ಕ್ಯಾಪ್ಟನ್?
6:04:44: ಸಹ- ವಿಮಾನ ಇಳಿಸಲು ನಮಗೆ ರನ್ವೇಯೇ ಇಲ್ಲ.
6:04:54 ಕ್ಯಾಪ್ಟನ್- ಓ ಮೈಗಾಡ್
6:04:59- ಓ ಬಿಗ್ ವನ್
6:05:00 ಓಹ್.. (ಅನಂತರ ವಾಯ್ಸ ರೆಕಾರ್ಡರ್ನಲ್ಲಿ ಬೇರೇನೂ ದಾಖಲಾಗಿಲ್ಲ)

ಬಜಪೆ ವಿಮಾನ ದುರಂತ: ಇಂದಿಗೆ 2 ವರ್ಷ
155 ಪ್ರಕರಣದಲ್ಲಿ 113 ಕೋಟಿ ರೂ. ಪರಿಹಾರ
ಮಂಗಳೂರಿನ ಬಜಪೆ ಅಂತಾರಾಷ್ಟ್ರೀಯಮಟ್ಟದ ವಿಮಾನ ನಿಲ್ದಾಣದ ಬಳಿ ದುಬಾೖ-ಮಂಗಳೂರು ಏರಿಂಡಿಯಾ ಎಕ್ಸ್ಪ್ರೆಸ್ನ ಇತಿಹಾಸ ಭೀಕರ ವೈಮಾನಿಕ ದುರಂತಕ್ಕೆ ಮೇ 22ರಂದು ಎರಡು ವರ್ಷ. 166 ಪ್ರಯಾಣಿಕರ ಪೈಕಿ 158 ಮಂದಿ ಸಜೀವ ಭಸ್ಮಗೊಂಡಿದ್ದರು. 8 ಮಂದಿ ಪವಾಡಸದೃಶವಾಗಿ ಪಾರಾಗಿದ್ದರು. ಪೈಲಟ್, ಸಹ ಪೈಲಟ್ ಸಹಿತ 8 ಮಂದಿ ಸಿಬಂದಿಯೂ ಮೃತರಾಗಿದ್ದರು.

ಬಜಪೆ ವಿಮಾನ ನಿಲ್ದಾಣ ಈಗ ಸ್ಥಾಪನೆಯ 60 ವರ್ಷಗಳನ್ನು ಪೂರೈಸಿ 61ನೇ ವರ್ಷಕ್ಕೆ ಪಾದಾರ್ಪಣೆಗೈದಿದೆ. ವಿಪರ್ಯಾಸವೆಂದರೆ, 22-5-2010ರಂದು ನಿಲ್ದಾಣ ಸಮೀಪದ ಕೆಂಜಾರುವಿನಲ್ಲಿ ವಿಮಾನ ಪತನ ಹೊಂದಿದ ಒಂದು ವಾರದ ಹಿಂದೆಯಷ್ಟೇ ಬಜಪೆಯಲ್ಲಿ ಅತ್ಯಾಧುನಿಕ ತಾಂತ್ರಿಕ ಸೌಕರ್ಯಗಳ ವಿಮಾನ ನಿಲ್ದಾಣದ ನೂತನ ಟರ್ಮಿನಲ್ ಕಟ್ಟಡ ಉದ್ಘಾಟನೆಯಾಗಿತ್ತು. ಈ ಕಟ್ಟಡದ ಅಧಿಕೃತ ಉದ್ಘಾಟನೆಗೆ ಮೊದಲೇ ಇಲ್ಲಿನ ನೂತನ ರನ್ವೇ ಇತ್ಯಾದಿ ಸೌಲಭ್ಯಗಳ ಬಳಕೆಯಾಗುತ್ತಿತ್ತು. ಗಲ್ಫ್ ದೇಶಗಳಿಗೆ ಮತ್ತು ಗಲ್ಫ್ ದೇಶಗಳಿಂದ ನೇರ ವಿಮಾನ ಯಾನ ಸೌಲಭ್ಯ ಇಲ್ಲಿ ಅನುಷ್ಠಾನಗೊಂಡಿತ್ತು.

ವಿಮಾನ ದುರಂತದಲ್ಲಿ ಮಡಿದ 158 ಮಂದಿ ಕರ್ನಾಟಕ ಮತ್ತು ಕೇರಳ ರಾಜ್ಯದವರು. ಕೆಲವು ದೇಹಗಳನ್ನು ಪತ್ತೆ ಹಚ್ಚಲು ಸಾಧ್ಯವಾಗಿರಲಿಲ್ಲ. ಡಿಎನ್ಎ ಪರೀಕ್ಷೆಗೆ ಒಳಪಡಿಸಲಾಗಿತ್ತು. ಹಲವು ಮೃತ ಶರೀರಗಳ ಸಾಮೂಹಿಕ ಅಂತ್ಯಸಂಸ್ಕಾರವೂ ಅನಿವಾರ್ಯವಾಗಿತ್ತು.
ಆದರೆ, ಮೃತರ ಕುಟುಂಬಗಳಿಗೆ ಪರಿಹಾರ ನೀಡುವ ಪ್ರಕ್ರಿಯೆ ಸುಲಭಸಾಧ್ಯವಾಗಿರಲಿಲ್ಲ. ಕಳೆದ ಎರಡು ವರ್ಷಗಳ ಅವಧಿಯಲ್ಲಿ ಆ ಕುರಿತಂತೆ ಬಗೆಬಗೆಯ ಕಾನೂನು ಹೋರಾಟ, ಪ್ರತಿಭಟನೆ ಇತ್ಯಾದಿಗಳು ನಡೆದವು.
ಅಂತಾರಾಷ್ಟ್ರೀಯ ಒಪ್ಪಂದದ ಪ್ರಕಾರ ಪರಿಹಾರ ನೀಡಬೇಕೆಂದು ಕೆಲವು ಸಂಘಟನೆಗಳು ಆಗ್ರಹಿಸಿದರೆ, ವಿಮಾನ ಯಾನ ಇಲಾಖೆಯು ಕೆಲವು ಕಾನೂನು ತೊಡಕುಗಳನ್ನು ಉಲ್ಲೇಖೀಸಿತ್ತು. ಇನ್ನೂ ಕೆಲವು ಕುಟುಂಬಗಳಲ್ಲಿ ಕಾನೂನು ಸಂಬಂಧಿತ (ವಾರಸುದಾರರು) ತೊಡಕುಗಳೂ ಉಂಟಾದವು.
ಏನಿದ್ದರೂ, ಈ ತಿಂಗಳ ಎರಡನೆಯ ವಾರದ ವೇಳೆಗೆ 155 ಪ್ರಕರಣಗಳಿಗೆ ಸಂಬಂಧಿಸಿ ಪರಿಹಾರ ಕೇಸುಗಳನ್ನು ಇತ್ಯರ್ಥಗೊಳಿಸಲಾಯಿತು. 113 ಕೋಟಿ ರೂ. ಪರಿಹಾರಧನವನ್ನು ಈ ಸಂತ್ರಸ್ತ ಕುಟುಂಬಗಳಿಗೆ ವಿತರಿಸಲಾಯಿತು. ಕೇರಳ ಹೈಕೋರ್ಟ್ ಆದೇಶದ ಪ್ರಕಾರ ಈ ಪೈಕಿ 123 ಪ್ರಕರಣಗಳು ಸಂಪೂರ್ಣವಾಗಿ ಇತ್ಯರ್ಥವಾಗಿದ್ದು, ಉಳಿದ ಪ್ರಕರಣಗಳು ಭಾಗಶಃ ಇತ್ಯರ್ಥಗೊಂಡಿವೆ.
ದುರಂತ ಸಂಭವಿಸಿದ ಬಜಪೆ ಕೆಂಜಾರುವಿನಲ್ಲಿ ಸ್ಮಾರಕ ಸ್ಥಾಪಿಸುವ ಪ್ರಸ್ತಾವವಿತ್ತು. ಮಡಿದವರ ಹೆಸರುಗಳನ್ನು ಇಲ್ಲಿ ದಾಖಲಿಸಲು ನಿರ್ಧರಿಸಲಾಗಿತ್ತು. ಆದರೆ, ಈ ಪ್ರಯತ್ನವೂ ಈಗ ಯಶಸ್ಸನ್ನು ಪಡೆಯಲಿಲ್ಲ. ಪ್ರತಿಭಟನಾಕಾರರು ಅದರ ಮೇಲೂ ಕೋಪ ತೋರಿಸಿದರು ಮತ್ತು ಆ ಸ್ಥಳ ಖಾಸಗಿಯವರಿಗೂ ಸೇರಿದ್ದಾಗಿದೆ.
ವಿಮಾನದ ಬ್ಲಾಕ್ಬಾಕ್ಸ್ ದೊರೆತ ಬಳಿಕ ವಿಮಾನ ದುರಂತಕ್ಕೆ ಕಾರಣವಾದ ಹಿನ್ನೆಲೆಯೂ ತಿಳಿದುಬಂತು. ಅದು ವಿದೇಶೀಪೈಲಟ್ನ ನಿದ್ದೆಯ ಹಿನ್ನೆಲೆಯೂ ಆಗಿತ್ತು. ಸಹ ಪೈಲಟ್ನ ಸಲಹೆಯನ್ನು ಕೂಡಾ ಆತ ನಿರ್ಲಕ್ಷಿಸಿದ್ದು ದುರಂತಕ್ಕೆ ಕಾರಣವಾಗಿತ್ತು.
ಹಾಗೆ ನೋಡಿದರೆ, ಬಜಪೆ ವಿಮಾನ ನಿಲ್ದಾಣದ ನೂತನ ರನ್ವೇಯಿಂದ ಯಾವುದೇ ಸಮಸ್ಯೆ ಇಲ್ಲ. ಹಳೆಯ ನಿಲ್ದಾಣದ ರನ್ವೇ- ಟೇಬಲ್ಟಾಪ್- ಎಂಬ ಸಮಸ್ಯೆಯನ್ನು ಹೊಂದಿದ್ದರೂ 1981ರಲ್ಲಿ ಒಂದು ವಿಮಾನ ರನ್ವೇಯಿಂದ ಜಾರಿದ ಘಟನೆಯ ಹೊರತು (ಯಾವುದೇ ನಷ್ಟ ಸಂಭವಿಸಿರಲಿಲ್ಲ) ಇಲ್ಲಿ ಸಮಸ್ಯೆ ಉಂಟಾಗಿರಲಿಲ್ಲ. ಆದ್ದರಿಂದ, ಸಮಗ್ರ ವ್ಯವಸ್ಥೆಯ ಬಗ್ಗೆ ಇಲ್ಲಿ ಗೊಂದಲವಿಲ್ಲ'.
ಆದರೆ, ಬಜಪೆ ವಿಮಾನ ನಿಲ್ದಾಣವನ್ನು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನಾಗಿ (ಈಗ ಅಂತಾರಾಷ್ಟ್ರೀಯ ಮಟ್ಟ ಅಥವಾ ಕಸ್ಟಮ್ಸ್ ಏರ್ಪೋರ್ಟ್) ಘೋಷಿಸಬೇಕೆಂಬ ಬೇಡಿಕೆ ಮಾತ್ರ ಇನ್ನೂ ಈಡೇರಿಲ್ಲ. ಈಗಿನ ರನ್ವೇಯನ್ನು ವಿಸ್ತರಿಸಬೇಕು. ಈ ಬಗ್ಗೆ ಭೂಸ್ವಾಧೀನತೆ ನಡೆಯಬೇಕು ಎಂಬೆಲ್ಲಾ ಸಬೂಬುಗಳಿವೆ. ಆದರೆ, ಇಚ್ಚಾಶಕ್ತಿಯನ್ನು ರಾಜಕೀಯ ನಾಯಕರು ತೋರ್ಪಡಿಸಿದರೆ ಈ ಆಶಯ ಈಡೇರುತ್ತದೆ. ತನ್ಮೂಲಕ, ಅಂತಾರಾಷ್ಟ್ರೀಯ ವಿಮಾನ ಸಂಸ್ಥೆಗಳು ಇಲ್ಲಿ ತಮ್ಮ ವಿಮಾನಗಳ ಹಾರಾಟ ನಡೆಸಲು ಸಾಧ್ಯ. ಅನೇಕ ವಿದೇಶಗಳಿಗೆ ನೇರ ಯಾನವೂ ಸಾಧ್ಯವಾಗುತ್ತದೆ.
ವಿಮಾನ ನಿಲ್ದಾಣದ ನೂತನ ರಸ್ತೆಯೂ ಅವೈಜ್ಞಾನಿಕ ಎಂಬ ದೂರುಗಳಿವೆ. ಸಂಪರ್ಕ ರಸ್ತೆಯು ತಿರುವುಗಳಿಲ್ಲದೆ, ಏರುತಗ್ಗು ಇಲ್ಲದೆ ನೇರವಾಗಿರಬೇಕು ಎಂಬುದು ಈ ದೂರಿನ ಸಾರಾಂಶ. ಸರಕು ನಿರ್ವಹಣೆಯ ಸೌಲಭ್ಯ ಇಲ್ಲಿ ಸಾಧ್ಯವಾದರೆ ಹಳೆಯ ನಿಲ್ದಾಣ ಕೂಡಾ ಉಪಯುಕ್ತವಾಗಬಹುದು. ಇದು ವಾಣಿಜ್ಯ ವ್ಯವಹಾರ ಸಂಬಂಧಿತ ಸಂಘಸಂಸ್ಥೆಗಳ ಹೊಣೆಗಾರಿಕೆಯೂ ಹೌದು.

ವಿಮಾನ ದುರಂತದಲ್ಲಿ ಬದುಕಿ ಉಳಿದ ಎಂಟು ಮಂದಿಯಲ್ಲಿ ಕನಿಷ್ಠ ನಾಲ್ಕೈದು ಮಂದಿಗೆ ಉದ್ಯೋಗ ದೊರೆಯಬಹುದೆಂಬ ನಿರೀಕ್ಷೆ ಅಥವಾ ಆಶ್ವಾಸನೆಯೂ ಈಡೇರಿಲ್ಲ. ಉದ್ಯೋಗ ನಿರೀಕ್ಷೆಯಲ್ಲಿ ಗಾಯಾಳುಗಳು ಎಂದು ಕಳೆದ ವರ್ಷ ಕೂಡಾ ಮಾಧ್ಯಮಗಳು ಗಮನ ಸೆಳೆದಿದ್ದವು.
ವಿಮಾನ ಪತನವಾದಾಗ, ಅದರ ಬಾಗಿಲು ತೆರೆದುಕೊಂಡ ಸಂದರ್ಭದಲ್ಲಿ ಕೆಳಕ್ಕೆ ಬಿದ್ದ ಜ್ಯೂಯಲ್ ಎಂಬವರು ಅಲ್ಲಿಂದ ಎದ್ದು ಇಮಿಗ್ರೇಶನ್ ಕಚೇರಿಯವರೆಗೆ ನಡೆದುಬಂದು ವಿಷಯ ತಿಳಿಸಿದ್ದರು. ಕೆಎಂಸಿ ವಿದ್ಯಾರ್ಥಿನಿ ಬಾಂಗ್ಲಾದ ಸಬ್ರಿನಾ ಅವರು ವಿಮಾನ ಅಂತಿಮವಾಗಿ ಬಿದ್ದ ಪ್ರದೇಶದ ಮರದ ರೆಂಬೆಗಳಲ್ಲಿ ಸಿಲುಕಿದ್ದು ಅಲ್ಲಿಂದ ಅವರನ್ನು ರಕ್ಷಿಸಲಾಗಿತ್ತು.
ಚಿತ್ರ: ಸತೀಶ್ ಇರಾ.