ಸ್ಕಂಧ | Apr 16, 2012
ಮೊದಲು ಆರಂಭವಾದ ಚಿತ್ರ ಮೊದಲು ತೆರೆಕಾಣಬೇಕು, ನನಗೆ ಇದು ಒಪ್ಪಿಗೆ ಅಂತ ಇಲ್ಲೇ ಬರೆದುಕೊಡಿ. ನಾನು ನನ್ನ ಚಿತ್ರವನ್ನು ಮುಂದೂಡಲು ಸಿದ್ಧ ' ಎಂದು ನಿರ್ಮಾಪಕರ ಸಂಘದ ಅಧ್ಯಕ್ಷ ಮತ್ತು ಇದೇ ತಿಂಗಳಲ್ಲಿ ತಮ್ಮ ಕಠಾರಿವೀರ, ಸುರಸುಂದರಾಂಗಿ ಚಿತ್ರದ ಬಿಡುಗಡೆಯ ಯೋಚನೆಯಲ್ಲಿರುವ ಮುನಿರತ್ನ ನೇರಪ್ರಸಾರದ ಕಾರ್ಯಕ್ರಮದಲ್ಲಿ ಸವಾಲು ಹಾಕಿದ್ದು ಗಾಡ್ ಫಾದರ್ ಚಿತ್ರದ ಕೆ. ಮಂಜು ಅವರಿಗೆ.
"ಈ ಎಲ್ಲ ಮಾತುಗಳೂ ವಾಣಿಜ್ಯ ಮಂಡಳಿಯಲ್ಲಿ ಇತ್ಯರ್ಥವಾಗಬೇಕು, ಇಲ್ಲಲ್ಲ ' ಎಂದರು ಮಂಜು. ಈ ಮಾತಿನ ಹಿಂದೆ ಉಪೇಂದ್ರ ಅಭಿನಯದ ನಾಲ್ಕು ಚಿತ್ರಗಳಿದ್ದವು. ವರ್ಷಗಳ ಹಿಂದೆ ಸೆಟ್ಟೇರಿ, ಬೇರೆ ಬೇರೆ ಕಾರಣಗಳಿಂದ ನನೆಗುದಿಗೆ ಬಿದ್ದಿರುವ ರಾಜೇಂದ್ರಸಿಂಗ್ ಬಾಬು ನಿರ್ದೇಶನದ ಭೀಮೂಸ್ ಬ್ಯಾಂಗ್ ಬ್ಯಾಂಗ್ ಕಿಡ್ಸ್, ಇದೇ ತಿಂಗಳಲ್ಲಿ ತೆರೆಕಾಣುವುದಾಗಿ ಹಠ ಹಿಡಿದಿರುವ ಕಠಾರಿವೀರ, ಸುರಸುಂದರಾಂಗಿ, ಗಾಡ್ ಫಾದರ್ ಮತ್ತು ಕಲ್ಪನಾ. ಮೊದಲ ಎರಡು ಚಿತ್ರಗಳಲ್ಲಿ ರಮ್ಯಾ ನಾಯಕಿಯಾದರೆ, ಗಾಡ್ಫಾದರ್ ನವನಟಿ ಸೌಂದರ್ಯಾ ಜಯಮಾಲಾ ಅವರ ಮೊದಲ ಚಿತ್ರ. ಕಲ್ಪನಾದ ನಾಯಕಿ
ಲಕ್ಷ್ಮೀ ರೈ.
ಇತ್ತೀಚೆಗೆ ಸಾಕಷ್ಟು ಸುದ್ದಿಯಲ್ಲಿದ್ದಾರೆ, ತಾರೆ ಲಕ್ಷ್ಮೀ ರೈ. ಚೆನ್ನೈಯಲ್ಲಿ ಐಪಿಎಲ್ ಉದ್ಘಾಟನೆಗೆ ಚಾರ್ಟರ್ಡ್ ವಿಮಾನದಲ್ಲಿ ಆಕೆ ಮುಂಬೈಯಿಂದ ಬಂದರು ಎನ್ನುವ ವದಂತಿಯನ್ನು ಅಲ್ಲಗಳೆಯಲು ಆಕೆ ಹರಸಾಹಸ ಪಡಬೇಕಾಯಿತು. ನಟನಟಿಯರು, ಉದ್ಯಮದವರನ್ನು ಕರೆತರಲು ನಿಯೋಜಿಸಿದ್ದ ವಿಮಾನದಲ್ಲೇ ನಾನೂ ಬಂದೆ ಎಂದರೂ ವದಂತಿ ಅದಾಗಲೇ ರೆಕ್ಕೆಪುಕ್ಕ ಕಟ್ಟಿ ಹಾರತೊಡಗಿತ್ತು.
ಲಕ್ಷ್ಮೀ ರೈ ಕನ್ನಡದ ಹುಡುಗಿ. ಈಗಾಗಲೇ ಮೂವತ್ತರವರೆಗೆ ಚಿತ್ರಗಳಲ್ಲಿ ಅಭಿನಯಿಸಿರುವ ಈಕೆಗೆ ಹೆಚ್ಚು ಅವಕಾಶಗಳನ್ನು ನೀಡಿದ್ದು ತಮಿಳು ಹಾಗೂ ಮಲಯಾಳ ಚಿತ್ರರಂಗಗಳು. ತೆಲುಗು ಚಿತ್ರಗಳಲ್ಲೂ ಅಭಿನಯಿಸಿದ ಈಕೆಗೆ ಕನ್ನಡದಲ್ಲೂ ಒಂದೆರಡು ಅವಕಾಶಗಳಿದ್ದವು. ವಾಲ್ಮೀಕಿ, ಸ್ನೇಹನಾ ಪ್ರೀತೀನಾ ಮತ್ತು ಮಿಂಚಿನ ಓಟಗಳ ನಂತರ ಲಕ್ಷ್ಮೀ ರೈಗೆ ಅವಕಾಶ ಇಲ್ಲಿ ತಂದುಕೊಟ್ಟದ್ದು ಆಕೆ ಅಭಿನಯಿಸಿದ ತಮಿಳು ಚಿತ್ರ ಕಾಂಚನ. ಈ ಚಿತ್ರದ ಕನ್ನಡ ಅವತರಣಿಕೆಯೇ ಕಲ್ಪನಾ. ಮೂಲಚಿತ್ರದಲ್ಲಿ ಅಭಿನಯಿಸಿದ ಪಾತ್ರವೇ ಇಲ್ಲೂ ಆಕೆಯ ಪಾಲಿಗೆ ಬಂದಿದೆ.
ಮೂಲ ಚಿತ್ರದ ಗೆಲುವಿನಂತೆ ಇಲ್ಲೂ ಯಶಸ್ಸನ್ನು ನಿರೀಕ್ಷಿಸುತ್ತಿದ್ದೇನೆ ಎನ್ನವ ಲಕ್ಷ್ಮೀ ರೈಗೆ ಹಿಂದಿ ಚಿತ್ರರಂಗದಿಂದಲೂ ಆಹ್ವಾನವಿದೆಯಂತೆ. ದಕ್ಷಿಣದಲ್ಲಿ ಸಾಕಷ್ಟು ಅವಕಾಶಗಳಿವೆ. ಹಿಂದಿ ಚಿತ್ರರಂಗಕ್ಕೆ ಹೋಗುವ ಯೋಚನೆಯಂತೂ ಇದೆ. ಆದರೆ, ಹೋಗುವ ಮೊದಲು ಸಾಕಷ್ಟು ಸಿದ್ಧತೆಯನ್ನು ಮಾಡಿಕೊಳ್ಳಬೇಕು ಎನ್ನುತ್ತಾರೆ ಆಕೆ.
ಉಪೇಂದ್ರ ಅವರ ವಿವಾಹ ವಾರ್ಷಿಕೋತ್ಸವದಂದು ಸೆಟ್ಟೇರಿದ ಕಲ್ಪನಾ ತೆರೆಕಾಣುವ ದಿನದ ಬಗ್ಗೆ ಈಗಲೇ ಏನೂ ಹೇಳಲಾಗದು. ಇಬ್ಬರು ಘಟಾನುಘಟಿ ನಿರ್ಮಾಪಕರು ನಾಮುಂದೆ, ತಾ ಮುಂದೆ ಎಂದು ಬೀದಿಗಿಳಿದಿದ್ದಾರೆ. ಈ ನಡುವೆ ಭೂತ, ಪ್ರೇತ, ಮಾಟ, ಮಂತ್ರವೂ ಸೇರಿದ ಕಥೆ ಎನ್ನಲಾದ ಕಲ್ಪನಾದಲ್ಲಿ ಈ ಸ್ಪರ್ಧೆಯ ನಡುವೆ ಪವಾಡ ಸದೃಶವಾಗಿ ಸಿದ್ಧವಾಗಿ ತೆರೆಗೆ ಬಂದರೆ ಆಶ್ಚರ್ಯವಿಲ್ಲ ಎನ್ನುತ್ತಿದೆ ಗಾಂಧೀನಗರ.