ಕೃಷ್ಣವೇಣಿ ಕಿದೂರು | Apr 20, 2012
ಸ್ನೇಹಿತೆ ಮೀರಾ ಫೋನ್ ಮಾಡಿ ಕರೆದಿದ್ದಳು. ಹಾಗೆ ಮರುದಿನ ಅವರ ಮನೆಗೆ ಹೋಗಿದ್ದೆ. ಅವಳ ಅಮ್ಮ ಬಂದಿದ್ದರು. ಅಮ್ಮ-ಮಗಳ ಎದುರಿಗೆ ರಾಶಿ ಬಿದ್ದ ಮಿಡಿ ಮಾವಿನಕಾಯಿಗಳ ಗೊಂಚಲುಗಳು. ಅಷ್ಟು ದೂರಕ್ಕೇ ಸೊನೆಯ ಪರಿಮಳ ತುಂಬಿತ್ತು.
""ಉಪ್ಪಿನಕಾಯಿ ಹಾಕಿ ಕೊಡಲು ಅಮ್ಮ ಬಂದಿದ್ದಾರೆ. ಬೆಳಗ್ಗೆ ಮಾವಿನ ಮಿಡಿ ಕೊಯಿಸಿದ್ದೇವೆ. ನಿನಗೆ ಬೇಕಾದಷ್ಟು ತಗೋ' ಮಗಳಿಗೆ ವರ್ಷವೂ ಉಪ್ಪಿನಕಾಯಿಯ ಸೀಸನ್ನಲ್ಲಿ ಹಾಕಿಕೊಡಲು ಅಮ್ಮನೇ ಬರಬೇಕು. ಮೀರಾ ಮಾಡುತ್ತಿದ್ದಳು. ಆದರೆ ಅದು ಸರಿಯಾದ ಸ್ಥಿತಿಯಲ್ಲಿ ಉಳಿಯುತ್ತಿರಲಿಲ್ಲ ಅಷ್ಟೇ. ಎಷ್ಟೇ ಎಚ್ಚರಿಕೆ ವಹಿಸಿ ತಯಾರಿಸಿದರೂ ಹಳಸಲು ಪರಿಮಳ. ಕೊನೆಗೆ ತಾಯಿಯನ್ನು ಕರೆದು ಅವರ ಕೈಲೇ ಅದರ ಕೆಲಸ ಮಾಡಿಸಿಕೊಳ್ಳುತ್ತಿದ್ದಳು. ಅವರು ಸಾಂಪ್ರದಾಯಿಕ ಪದ್ಧತಿಯಲ್ಲಿ ತಯಾರಿಸುವ ಉಪ್ಪಿನಕಾಯಿ ಬಲು ಪರಿಮಳ, ರುಚಿ. ಕೆಡುವುದು ಅಂತಲೇ ಇಲ್ಲ. ನನಗೂ ಅವರು ಬಳಸುವ ವಿಧಾನ, ತಯಾರಿಯ ಮುನ್ನೆಚ್ಚರಿಕೆ ಗಮನಿಸಬೇಕಿತ್ತು.
ಕಾಡುಮಾವಿನ ಮಿಡಿಗಳ ತೊಟ್ಟು ಮುರಿದು ಹಾರುವ ಸೊನೆಯನ್ನು ಆಕೆ ತೆಗೆದಿರಿಸುತ್ತಿದ್ದರು. ಸ್ವಲ್ಪೇ ಸ್ವಲ್ಪ ತೊಟ್ಟು ಉಳಿಸಿ ಅದಕ್ಕೆ ನೀರು ಸೋಕಿಸದೆ ಉಪ್ಪಿನಲ್ಲಿ ಬೆರೆಸಿಡುವುದನ್ನು ನಾವೂ ಗಮನಿಸುತ್ತಿದ್ದೆವು. ಜೊತೆಗೇ ನೆರವಾಗುತ್ತಲೂ ಇದ್ದೆವು. ""ಇಷ್ಟೆಲ್ಲ ಕಷ್ಟ ಬೇಕಾ!
ಅಂಗಡಿಯಲ್ಲಿ ಸಿಗುವುದಿಲ್ವಾ?' ಮಗಳು ತಮಾಷೆಯಾಗಿ ಹೇಳಿದ್ದರೂ ಅವರಿಗೆ ಸಿಟ್ಟು ಬಂದಿತ್ತು.
""ಅಂಗಡಿಯಲ್ಲಿ ಸಿಗ್ತದೆ. ಆದರೆ ಅದು ನಾವು ಜಾಗರೂಕತೆಯಿಂದ ಮನೆ ಮಂದಿಗಾಗಿ ತಯಾರಿಸಿದ್ದೇನೂ ಅಲ್ಲ. ಮಾರಾಟಕ್ಕೆ ಇರಿಸುವ ಉಪ್ಪಿನಕಾಯಿ ಹಾಳಾದರೆ ಹೋಯ್ತು. ಅದಕ್ಕಾಗಿ ಅದಕ್ಕೆ ಏನೆಲ್ಲ ಬೆರೆಸಿರ್ತಾರೆ ಅಂತ ನಾವು ನೋಡಿರುತ್ತೇವಾ? ಒಂದೇ ಒಂದು ಹುಳ ಕಂಡರೂ ಸಾಕು. ಬಾಯಿಗಿಡುವಂತಿಲ್ಲ. ಹುಳ ಆಗಬಾರದು, ಹಳಸಲು ಬರಕೂಡದು, ಬಾಳ್ವಿಕೆ ಬರಬೇಕು, ಲಾಭ ಬೇಕೇಬೇಕು. ಒಂದಕ್ಕೆ ನಾಲ್ಕು ಪಟ್ಟು ಹಣ ತೆತ್ತು ಅದನ್ನು ಖರೀದಿಸುವ ಬದಲಿಗೆ ಒಮ್ಮೆಗೇ ಹಾಕಿ ಇಟ್ಟರೆ ಇಡೀ ವರ್ಷಕ್ಕೂ ಆಗುತ್ತದೆ. ಖರ್ಚು ಕಡಿಮೆ'.
ಅವರು ಹೇಳಿದ್ದೆಲ್ಲ ಸತ್ಯ. ಹಳಸಲು ವಾಸನೆ ಬಡಿಯುವ ಅನೇಕ ವಿಧದ ಉಪ್ಪಿನಕಾಯಿಗಳನ್ನು ನಾವೂ ಕಂಡಿದ್ದೆವು. ಇಲ್ಲಿ ಬಿಸಿಲಿಗೆ ಭರಣಿ ಒಣಗಿಸಲು ಇಟ್ಟಿದ್ದರು. ಹಾಗೇ ಉಪ್ಪಿನಕಾಯಿ ತಯಾರಿಗೆ ಉಪ್ಪು ನೀರು ಕುದಿಸಿ ಬತ್ತಿಸುತ್ತಲೂ ಇದ್ದರಾಕೆ.
ಮಗಳ ಮನೆಯಲ್ಲಿ ಎಂಟು ದಿನಗಳ ಕಾಲ ಇದ್ದ ಅವರು ಎಚ್ಚರಿಕೆಯಿಂದ ಸಾಸಿವೆ, ಮೆಣಸು, ಅರಿಶಿನ ಬೇಕಾದ ಪ್ರಮಾಣದಲ್ಲಿ ಸೇರಿಸಿ ಗೆùಂಡರ್ನಲ್ಲಿ ತಾವೇ ಸ್ವತಃ ನಿಂತು ರುಬ್ಬಿದ್ದರು. ಉಪ್ಪು ನೀರಿನಲ್ಲಿ ಮುಳುಗಿದ್ದ ಸುಕ್ಕುಗಟ್ಟಿದ್ದ ಮಿಡಿ ಮಾವು ಆರಿಸಿ ತೆಗೆದು ರುಬ್ಬಿದ ಮಿಶ್ರಣದಲ್ಲಿ ಹಾಕಿ ಬೆರೆಸಿ ಭರಣಿಗಳಿಗೆ ತುಂಬಿಸಿದ್ದರು. ಅಷ್ಟು ಹೊತ್ತೂ ಅವರು ಬೇರೇನೂ ಮುಟ್ಟಿಸಿಕೊಂಡಿರಲಿಲ್ಲ. ಮಗಳು ಅಮ್ಮನಿಗೆ ದಣಿವಾಯೆ¤àನೋ ಅಂತ ನಿಂಬೆ ಪಾನೀಯ ತಂದರೆ ಅದನ್ನೂ ಮುಟ್ಟಿರಲಿಲ್ಲ ಅವರು. ""ಇಲ್ಲಿ ಅದೆಲ್ಲ ತರಬೇಡ. ಒಂದು ಹನಿ ಇದರ ಮೇಲೆ ಬಿದ್ದರೂ ಉಪ್ಪಿನಕಾಯಿ ಹಳಸಲು ಬರದೆ ಇದ್ದೀತಾ? ಆಮೇಲೆ ಅದೆಲ್ಲ ಈಗ ಬೇಡ'.
ಬಿಗಿಯಾಗಿ ಭರಣಿ ಮುಚ್ಚಳ ಮುಚ್ಚಿ ಅದರ ಮೇಲಿಂದ ಎರಡೆರಡು ಸಾರಿ ಬಟ್ಟೆ ಇಟ್ಟು ಬಿಗಿದು ಕಟ್ಟಿ ಜೋಪಾನವಾಗಿ ಎತ್ತರದಲ್ಲಿರಿಸಿದ ಮೇಲೇ ಅವರು ನೀರು ಮುಟ್ಟಿಕೊಂಡದ್ದು. ಮೀರಾಳಿಗೆ ಸಂತೋಷ.
""ಇನ್ನು ಒಂದು ವರ್ಷಕ್ಕೆ ಹೆದರಿಕೆ ಇಲ್ಲ. ಅಮ್ಮ ಹಾಕಿದ ಉಪ್ಪಿನಕಾಯಿಯ ಪರಿಮಳ, ರುಚಿ ನಾನು ಹೇಗೇ ಮಾಡಿದ್ರೂ ಬರುವುದಿಲ್ಲ. ಸಹಾಯ ಎಷ್ಟು ಬೇಕಾದ್ರೂ ಮಾಡ್ತೇನೆ. ಹಾಕುವ ಕೆಲಸ ಅಮ್ಮನೇ ಮಾಡಬೇಕು'
ಮಾವಿನಮಿಡಿ ಉಪ್ಪಿನಕಾಯಿ ಅಂದರೆ ಉಪ್ಪಿನಕಾಯಿಗಳ ರಾಜ. ಅದಕ್ಕೆ ಅದರದೇ ಆದ ಸ್ಥಾನಮಾನಗಳಿವೆ. ಉಪ್ಪಿನಕಾಯಿಗೆ ಆರಿಸುವ ಮಿಡಿಯೂ ಹದಗಾತ್ರದಲ್ಲಿರಬೇಕು;
ಸೊನೆಗಾರುತ್ತಿರತಕ್ಕದ್ದು. ಅಲ್ಲದೆ ಪರಿಮಳ ಬೇಕೇಬೇಕು. ದಪ್ಪ ಸಿಪ್ಪೆಯ, ಸೊನೆ ಇಲ್ಲದ ಬಲಿತಿರುವ ಕಾಯಿ ಬೇಡವೇ ಬೇಡ. ಪೆಟ್ಟಾದ ಮಿಡಿ ಸಲ್ಲದು. ತಯಾರಿಸುವಾಗಲೂ ಜಾಗರೂಕತೆ ತಪ್ಪಿದರೆ ಅಧ್ವಾನ ಶತಸ್ಸಿದ್ದ. ತಣ್ಣೀರಿನ ಹನಿಯೂ ಅಲ್ಲಿ ಬೆರೆಯಬಾರದು. ಇಷ್ಟೆಲ್ಲ ಎಚ್ಚರ ವಹಿಸಿ ಉಪ್ಪು , ಸಾಸಿವೆ, ಮೆಣಸು, ಅರಿಶಿನಗಳನ್ನು ಅದರದೇ ಪ್ರಮಾಣದಲ್ಲಿ ಅರೆದು ಬೆರೆಸಿ ಮುಚ್ಚಿರಿಸತಕ್ಕದ್ದು. ನಂತರದ ಸಮಯದಲ್ಲಿ ಪಾಕ ಸಮನಾಗಿ ಉಪ್ಪು , ಹುಳಿ, ಖಾರದ ಹೊಂದಾಣಿಕೆಯಾಗಿ ಅದ್ಭುತ ರುಚಿ ಕೊಡುವ ಮಾವಿನಮಿಡಿ ಉಪ್ಪಿನಕಾಯಿ ಆಗಿ ಉಣ್ಣುವವರ ನಾಲಿಗೆ ರುಚಿ ತಣಿಸುತ್ತದೆ.
ಲಿಂಬೆ, ಅಂಬಟೆ, ಸೌತೆ, ತೊಂಡೆ, ನೆಲ್ಲಿಕಾಯಿ, ಕ್ಯಾರೆಟ್, ಕರಂಡೆಕಾಯಿಯನ್ನು ಬಳಸಿಯೂ ಉಪ್ಪಿನಕಾಯಿ ತಯಾರಿಸಬಹುದು. ಚೆನ್ನಾಗಿಯೂ ಇರುತ್ತದೆ. ಆದರೆ ಈ ಮೊದಲೇ ಹೇಳಿದಂತೆ ಮಾವಿನ ಮಿಡಿಯ ಉಪ್ಪಿನಕಾಯಿ ತಯಾರಿಸಬಹುದು. ಚೆನ್ನಾಗಿಯೂ ಇರುತ್ತದೆ. ಆದರೆ ಈ ಮೊದಲೇ ಹೇಳಿದಂತೆ ಮಾವಿನ ಮಿಡಿಯ ಉಪ್ಪಿನಕಾಯಿಗೇ ಅಗ್ರಸ್ಥಾನ. ಅದುವೇ ಉಪ್ಪಿನಕಾಯಿ ಕ್ಷೇತ್ರದ ರಾಜಾಧಿರಾಜ. ವರ್ಷ ವರ್ಷಗಳಿಂದಲೂ ಅದರದೇ ಸಾರ್ವಭೌಮತ್ವ. ಮನೆಮನೆಗಳಲ್ಲಿ ಬಳಕೆಗೆ ಬೇಕು. ನಿತ್ಯ ನಿತ್ಯ ಬೆಳಗಿನ ತಿಂಡಿಯಿಂದ ಆರಂಭವಾದರೆ ರಾತ್ರಿಯ ಊಟದ ತನಕವೂ ಉಪ್ಪಿನಕಾಯಿ ಉಣ್ಣುವವರಿದ್ದಾರೆ. ಅನಾರೋಗ್ಯದಿಂದಾಗಿ ಬಾಯಿರುಚಿ ಕೆಟ್ಟರೆ ಅಂಥ ಕಾಲದಲ್ಲಿ ಒದಗುವ ಅಪದ್ಭಾಂಧವನೇ ಉಪ್ಪಿನಕಾಯಿ. ರುಚಿಗೆಟ್ಟ ನಾಲಿಗೆಗೆ ಅದು ರುಚಿ ತಂದುಕೊಡುತ್ತದೆ. ವಾಂತಿ, ವಾಕರಿಕೆಯನ್ನು ತಡೆಯುತ್ತದೆ. ಜಡಿಮಳೆಗೆ ಸ್ವಾದಭರಿತ ಉಪ್ಪಿನಕಾಯಿ ಇದ್ದ ಆ ರುಚಿ ಉಂಡವನೇ ಬಲ್ಲ.
ಫೆಬ್ರವರಿ, ಮಾರ್ಚ್ ತಿಂಗಳು ಉಪ್ಪಿನಕಾಯಿ ಮಾಡುವವರಿಗೆ ಪ್ರಶಸ್ತ. ಕಾಡುಮಾವಿನ ಮಿಡಿ ಸಿಕ್ಕಿದರೆ ಶ್ರೇಷ್ಠ. ಅದೇ ತಾನೇ ಕೊಯಿದ ಮಾವಿನಮಿಡಿ ಕಂಡರೆ ಉಪ್ಪಿನಕಾಯಿ ಪ್ರಿಯರ ನಾಲಿಗೆ ನೀರೂರುತ್ತದೆ. ಎಷ್ಟೇ ಬೆಲೆ ತೆತ್ತಾದರೂ ಒಯ್ಯುತ್ತಾರೆ.
ಸಾಂಪ್ರದಾಯಿಕ ಉಪ್ಪಿನಕಾಯಿಗೆ ಅತೀವ ಬೇಡಿಕೆ ಇದೆ. ವಿಶೇಷವೇನೆಂದರೆ ಎಲ್ಲರಿಗೂ ಅದನ್ನು ತಯಾರಿಸಲು, ಸರಿಯಾದ ರುಚಿ ಹೊಂದಾಣಿಕೆ ತಿಳಿಯದು. ಉಪ್ಪಿನಕಾಯಿಗೆ ಎಷ್ಟು ಪ್ರಾಶಸ್ತ್ಯವಿದೆಯೆಂದರೆ ಅದರ ಬಗ್ಗೆ ನಾಣ್ನುಡಿಗಳೇ ಇವೆ.
ಸಾಂಪ್ರದಾಯಿಕ ವಿಧಾನದ, ಯಾವುದೇ ಪ್ರಿಸರ್ವೇಟಿವ್ ಬಳಸದೆ ದೀರ್ಘಕಾಲ ಉಳಿಯುವ ಉಪ್ಪಿನಕಾಯಿ ತಯಾರಿಕೆ ನಿಧಾನವಾಗಿ ಅಳಿಯುವ ಹಂತದಲ್ಲಿದೆ.