Udayavani | May 01, 2012
ಉಡುಪಿ: ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸ್ಥಾನಕ್ಕೆ ಈಗಾಗಲೇ ಆಯ್ಕೆಯಾಗಿರುವ ಪುಂಡಲೀಕ ಹಾಲಂಬಿಯವರ ಹೆಸರು ಮೇ 2ರಂದು ಅಧಿಕೃತ ಘೋಷಣೆಯಾಗಲಿದೆ.
ಮೇ 2ರಂದು ಕೇರಳ (ಕಾಸರಗೋಡು ಕೇಂದ್ರ), ಮಹಾರಾಷ್ಟ್ರ, ತಮಿಳುನಾಡು, ಆಂಧ್ರಪ್ರದೇಶ ಈ ನಾಲ್ಕು ಹೊರನಾಡ ಘಟಕಗಳಿಂದ ಬಂದ ಅಂಚೆ ಮತಪತ್ರಗಳನ್ನು ಬೆಂಗಳೂರಿನಲ್ಲಿ ಮೇ 2ರ ಬೆಳಗ್ಗೆ 11 ಗಂಟೆಗೆ ಎಣಿಸಿ ಬಳಿಕ ಘೋಷಣೆ ಮಾಡಲಾಗುವುದು. ಒಟ್ಟು 1,350 ಅಂಚೆ ಮತ ಪತ್ರಗಳನ್ನು ಕೇಂದ್ರ ಸಮಿತಿಯಿಂದ ಕಳುಹಿಸಲಾಗಿದ್ದು 250 ವಿಳಾಸ ಸರಿ ಇಲ್ಲದೆ ಹಿಂದಿರುಗಿದೆ. 1,100ರಲ್ಲಿ 750 ಪತ್ರಗಳು ಬಂದಿರಬಹುದು ಎಂದು ಅಂದಾಜಿಸಲಾಗಿದೆ.
ರವಿವಾರ ನಡೆದ ಚುನಾವಣೆಯಲ್ಲಿ ಪುಂಡಲೀಕ ಹಾಲಂಬಿಯವರಿಗೆ 6,758 ಮತಗಳ ಮುನ್ನಡೆ ಇದ್ದು ಮೇ 2ರ ಅಂಚೆ ಮತಪತ್ರಗಳ ಮತಗಳಲ್ಲಿ ಇನ್ನೂ 300 ಮುನ್ನಡೆ ಸಾಧಿಸಬಹುದು ಎಂದು ಅಂದಾಜಿಸಲಾಗಿದೆ. ಇದರಲ್ಲಿ ಬಹುತೇಕ ಮತಗಳು ಕಾಸರಗೋಡಿನದ್ದಾಗಿರುತ್ತದೆ.
ಕೇರಳ ಘಟಕಾಧ್ಯಕ್ಷರಾಗಿ ಸುಬ್ರಹ್ಮಣ್ಯ ಭಟ್, ತಮಿಳುನಾಡು ಘಟಕದ ಅಧ್ಯಕ್ಷರಾಗಿ ಚೆನ್ನೈ ಕರ್ನಾಟಕ ಸಂಘದ ಅಧ್ಯಕ್ಷ ಕೆ.ಪಿ.ಆಚಾರ್ಯ ಈಗಾಗಲೇ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಆಂಧ್ರಪ್ರದೇಶದ ಘಟಕಕ್ಕೂ ಅವಿರೋಧ ಆಯ್ಕೆ ನಡೆದಿದೆ. ಮಹಾರಾಷ್ಟ್ರ ಘಟಕದಲ್ಲಿ ಮಾತ್ರ ಉಡುಪಿ ಮೂಲದ ಎಚ್.ಪಿ.ಎಲ್.ರಾವ್ ಮತ್ತು ಧಾರವಾಡ ಮೂಲದ ಮುತಾಲಿಕ್ ದೇಸಾಯಿ ನಡುವೆ ಸ್ಪರ್ಧೆ ಇದೆ. ಈ ಫಲಿತಾಂಶವೂ ಮೇ 2ರಂದು ತಿಳಿದುಬರಲಿದೆ.
ಹುಟ್ಟೂರ ಜಾತ್ರೆಗೆ ಹಾಲಂಬಿ
ಕ.ಸಾ.ಪ. ಅಧ್ಯಕ್ಷರಾಗಿ ಆಯ್ಕೆಯಾದ ಪುಂಡಲೀಕ ಹಾಲಂಬಿಯವರು ಮೇ 3ರಂದು ಬೆಂಗಳೂರಿನಲ್ಲಿ ಅಧಿಕಾರ ಸ್ವೀಕರಿಸಿ ಮೇ 5ರಂದು ದ.ಕ., ಉಡುಪಿ ಜಿಲ್ಲೆಗೆ ಬರಲಿದ್ದಾರೆ. ಮೇ 6ರಂದು ಹುಟ್ಟೂರಾದ ಹಾಲಾಡಿಯಲ್ಲಿ ನಡೆಯುವ ಜಾತ್ರೆಯಲ್ಲಿ ಹಾಲಂಬಿ ಪಾಲ್ಗೊಂಡು ಬಳಿಕ ಬೆಂಗಳೂರಿಗೆ ಮರಳುವರು.