ಹೊಸದಿಲ್ಲಿ: ಮುಂಬರುವ ಲಂಡನ್ ಒಲಿಂಪಿಕ್ಸ್ಗೆ ಮುಂಚಿತವಾಗಿ ನಡೆಯುತ್ತಿರುವ ಚತುರಾಷ್ಟ್ರ ಹಾಕಿ ಕೂಟದಲ್ಲಿ ಭಾರತವು ಅಮೋಘ ಹೋರಾಟ ನೀಡಿದರೂ ಹಾಲಿ ಒಲಿಂಪಿಕ್ ಚಾಂಪಿಯನ್ ಜರ್ಮನಿಯೆದುರು 1-2 ಗೋಲುಗಳಿಂದ ಸೋಲನ್ನು ಕಂಡಿದೆ.70 ನಿಮಿಷಗಳ ಕಾದಾಟದ ವೇಳೆ ಭಾರತವು ಜರ್ಮನಿಯೆದುರು ತೀವ್ರ ಪೈಪೋಟಿ ನೀಡಿತು. ಕೊನೆ ಹಂತದಲ್ಲಿ ಎದುರಾಳಿಗೆ ಗೋಲು ಬಿಟ್ಟುಕೊಟ್ಟು ಸೋಲನ್ನು ಒಪ್ಪಿಕೊಂಡಿತು. ಇದು ಭಾರತಕ್ಕೆ ಸತತ ಮೂರನೇ ಸೋಲು ಆಗಿದೆ.ಫಲಿತಾಂಶ ಏನೇ ಇದ್ದರೂ ಭಾರತ 15ನೇ ನಿಮಿಷದಲ್ಲಿ ಗೋಲು ಹೊಡೆದು ಮುನ್ನಡೆ ಸಾಧಿಸಿತ್ತು. ಶಿವೇಂದ್ರ ಸಿಂಗ್ ಗೋಲನ್ನು ಹೊಡೆದಿದ್ದರು. ಆದರೆ 12 ನಿಮಿಷಗಳ ಬಳಿಕ ಕ್ರಿಸ್ಟೋಫರ್ ವೆಸ್ಲೆ ಗೋಲನ್ನು ಹೊಡೆದು ಸಮಬಲ ಸ್ಥಾಪಿಸಿದ್ದರು. ಆಬಳಿಕ ಎರಡೂ ತಂಡಗಳು ಎಚ್ಚರಿಕೆಯ ಆಟವಾಡಿದವು.ಭಾರತ ಈ ಮೊದಲು ಆಸ್ಟ್ರೇಲಿಯಕ್ಕೆ 0-3 ಹಾಗೂ ಇಂಗ್ಲಂಡ್ಗೆ 2-4 ಗೋಲುಗಳಿಂದ ಶರಣಾಗಿತ್ತು. ಮೂರು ಅಥವಾ ನಾಲ್ಕನೇ ಸ್ಥಾನಕ್ಕಾಗಿ ಭಾರತ ತಂಡವು ಆಸ್ಟ್ರೇಲಿಯ ಅಥವಾ ಇಂಗ್ಲಂಡ್ ತಂಡವನ್ನು ಎದುರಿಸಲಿದೆ.