Udayavani | May 09, 2012
ಮಂಗಳೂರು : ಈ ಬಾರಿ ಹೊಸದಾಗಿ ಪ್ರಕಟಿಸಿರುವ 8ನೇ ತರಗತಿಯ ಹಿಂದಿ ಪಠ್ಯಪುಸ್ತಕದಲ್ಲಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರ ಬದುಕು - ಸಾಧನೆಯ ಪರಿಚಯ ಪ್ರಕಟವಾಗಿದೆ.
'ಧರ್ಮಾಧಿಕಾರಿ ಡಾ| ವೀರೇಂದ್ರ ಹೆಗ್ಗಡೆ' ಎಂಬ ಶಿರೋನಾಮೆಯ 18ನೇ ಅಧ್ಯಾಯ.

ಸರಕಾರದ ಪಠ್ಯಪುಸ್ತಕ ರಚನಾ ಸಮಿತಿ ಈ ನಿರ್ಧಾರವನ್ನು ಕೈಗೊಂಡು ಈಗಾಗಲೇ ಪಠ್ಯಪುಸ್ತಕವನ್ನು ಮುದ್ರಿಸಿದೆ. ಈ ಮೂಲಕ ಧರ್ಮಾಧಿಕಾರಿಗಳ ಧಾರ್ಮಿಕ, ಸಾಂಸðತಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಕ್ಷೇತ್ರದ ಕೊಡುಗೆಗಳನ್ನು ಪಠ್ಯಪುಸ್ತಕದಲ್ಲಿ ನಮೂದಿಸಲಾಗಿದೆ.
8ನೇ ತರಗತಿಗಾಗಿ ಈ ವರ್ಷ ಪ್ರಕಟಿಸಿರುವ ನೂತನ ಪಠ್ಯಪುಸ್ತಕದ 18ನೇ ಅಧ್ಯಾಯವಾಗಿ ವೀರೇಂದ್ರ ಹೆಗ್ಗಡೆ ಅವರ ವ್ಯಕ್ತಿ ಪರಿಚಯವನ್ನು 'ಧರ್ಮಾಧಿಕಾರಿ ಡಾ| ವೀರೇಂದ್ರ ಹೆಗ್ಗಡೆ' ಎಂಬ ಶಿರೋನಾಮೆಯೊಂದಿಗೆ ರಚಿಸಲಾಗಿದೆ. ಪುಸ್ತಕದ ಪುಟಸಂಖ್ಯೆ 82ರಿಂದ 84ರ ವರೆಗೆ ಮೂರು ಪುಟಗಳಲ್ಲಿ ವೀರೇಂದ್ರ ಹೆಗ್ಗಡೆ ಕುರಿತ ಮಾಹಿತಿ ನೀಡಲಾಗಿದೆ. 85ನೇ ಪುಟದಲ್ಲಿ ಈ ಬಗ್ಗೆ ಪ್ರಶ್ನೆಗಳನ್ನು ಕೇಳಲಾಗಿದೆ.
ಸಾಮಾಜಿಕ ಕ್ಷೇತ್ರದಲ್ಲಿ ಹೆಗ್ಗಡೆ ಅವರ ಸಾಧನೆಯನ್ನು ಪಠ್ಯದಲ್ಲಿ ಪ್ರಕಟಿಸಲಾಗಿದೆ. 38 ವರ್ಷಗಳಿಂದ ಕ್ಷೇತ್ರದಲ್ಲಿ ನಡೆಸಿಕೊಂಡು ಬರುತ್ತಿರುವ ಸಾಮೂಹಿಕ ವಿವಾಹ, ಕ್ರಾಂತಿಯನ್ನೇ ದಾಖಲಿಸಿದ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ, ಸಮಾಜದ ಬಡವರ ಹಾಗೂ ಮಹಿಳೆಯರ ಸಶಕ್ತೀಕರಣದ ಹಂತ, ರುಡ್ಸೆಡ್ ಸಂಸ್ಥೆಯ ಸಾಧನೆಗಳು ಸೇರಿದಂತೆ ಇತರ ಸಾಮಾಜಿಕ ಕ್ಷೇತ್ರದ ಬೆಳವಣಿಗೆಯಲ್ಲಿ ಹೆಗ್ಗಡೆಯವರ ಪಾತ್ರವನ್ನು ಪಠ್ಯದಲ್ಲಿ ವಿವರಿಸಲಾಗಿದೆ.
39 ಅಡಿಯ ಬಾಹುಬಲಿ ವಿಗ್ರಹದ ಸ್ಥಾಪನೆ, ಮಹಾಮಸ್ತಕಾಭಿಷೇಕ, 1997ರಲ್ಲಿ ನಡೆದ ಬೃಹತ್ ಧರ್ಮ ಜಾಗೃತಿ ಸಮ್ಮೇಳನ, ಇತರ ದೇವಾಲಯಗಳ ಅಭಿವೃದ್ಧಿ, ಅತ್ಯಾಕರ್ಷಕ ಭೋಜನ ಶಾಲೆ ಹೀಗೆ ಹಲವಾರು ಧಾರ್ಮಿಕ ಸಂಗತಿಗಳನ್ನು ವಿವರಿಸಲಾಗಿದೆ. 51ನೇ ಅಖೀಲ ಭಾರತ ಸಾಹಿತ್ಯ ಸಮ್ಮೇಳನ, ಮಂಜುವಾಣಿ ಪತ್ರಿಕೆ, ಯೋಗ ಮತ್ತು ನೈತಿಕ ಶಿಕ್ಷಣ, ಪ್ರಾಚೀನ ವಸ್ತುಸಂಗ್ರಹಾಲಯ, ಅಮೆರಿಕದಲ್ಲಿ ನಡೆದ ಅಕ್ಕ ಸಮ್ಮೇಳನದಲ್ಲಿ ಭಾಗವಹಿಸಿದ ವಿವರ ಎಲ್ಲವೂ ಪಠ್ಯದಲ್ಲಿ ಪ್ರಕಟಗೊಂಡಿವೆ.
'ಜನ್ ಸೇವಾ ಹೀ ಜನಾರ್ದನ್ ಸೇವಾ ಹೇ, ಪರೋಪಕಾರಂ ಇದಂ ಶರೀರಂ-ಯಹ್ ಉಕ್ತೀ ಡಾ| ವೀರೇಂದ್ರ ಹೆಗ್ಗಡೆ ಜೀ ಕೇಲಿಯೇ ಸೌ ಪ್ರತಿಶತ್ ಸತ್ಯ ಹೇ.. ಎಂಬ ಮಾತಿನೊಂದಿಗೆ 8ನೇ ತರಗತಿಯ 18ನೇ ಪಾಠ ಆರಂಭಗೊಳ್ಳುತ್ತದೆ. ವೀರೇಂದ್ರ ಹೆಗ್ಗಡೆಯವರ ಜನ್ಮ ವಿವರ, ಶಾಲಾ ಜೀವನ, ಪಟ್ಟಾಭಿಷೇಕ, ಕಾರಿನ ಹವ್ಯಾಸದ ಬಗ್ಗೆಯೂ ಪಠ್ಯದಲ್ಲಿ ಮಾಹಿತಿ ಇದೆ. ಛಾಯಾಗ್ರಹಣಕ್ಕೆ ಸಂಬಂಧಿಸಿದ ಹೆಗ್ಗಡೆಯವರ ಆಸಕ್ತಿಯೂ ಪಠ್ಯದಲ್ಲಿ ನಮೂದಾಗಿದೆ.