ಉಪಾಧ್ಯಾಯ ಮೂಡುಬೆಳ್ಳೆ | May 11, 2012
ಈಚೆಗೆ ಕುಂದಾಪುರದಲ್ಲಿ ಸಾಧನಾ ಆರ್ಟ್ ಫೆಸ್ಟ್ ಕಲಾ ಕಾರ್ಯಾಗಾರ ವೈಶಿಷ್ಟ್ಯಪೂರ್ಣವಾಗಿ ನಡೆಯಿತು. ಒಂದು ವಾರಕಾಲ ಚಿತ್ರ ಕಲೆಯ ವಿವಿಧ ವಿಭಾಗಗಳ ವಿವರಣಾತ್ಮಕ ಚಟುವಟಿಕೆ ನಡೆಯಿತು. ಸ್ವಾಮಿ ವಿವೇಕಾನಂದರ 150ನೇ ಜಯಂತಿ ಸಂಭ್ರಮಾಚರಣೆ ಪ್ರಯುಕ್ತ ನಡೆದ ಈ ಕಲಾಶಿಬಿರವನ್ನು ಸಾಧನಾ ಸಂಗಮ ಟ್ರಸ್ಟ್ ಕುಂದಾಪುರ ಮತ್ತು ಆರ್ಟಿಸ್ಟ್ಸ್ ಫೋರಂ, ಉಡುಪಿ ಆಯೋಜಿಸಿದ್ದವು. ಕುಂದಾಪುರ ಪರಿಸರದ ಹಲವಾರು ಮಕ್ಕಳು ಹಾಗೂ ಯುವಕರು ಶಿಬಿರದಲ್ಲಿ ಪಾಲ್ಗೊಂಡು ಖುಷಿಪಟ್ಟರು. ಶೀರೂರು ಸ್ವಾಮೀಜಿ, ಕಲಾವಿದ ರಮೇಶ್ ರಾವ್ ಮೊದಲಾದವರು ಶಿಬಿರವನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ಕಳೆದ ಬಾರಿ ಕಲಾಪ್ರದರ್ಶನವನ್ನು ನಡೆಸಿ ಸಾಕಷ್ಟು ಯಶಸ್ಸನ್ನು ಗಳಿಸಿರುವ ಈ ಸಂಸ್ಥೆ ಈ ಬಾರಿ ದೊಡ್ಡಮಟ್ಟದಲ್ಲಿ ಕಲಾಶಿಬಿರ ನಡೆಸಲು ಉದ್ದೇಶಿಸಿತ್ತು. ಸಂಸ್ಥೆಯ ಸಕ್ರಿಯ ಕಲಾವಿದ ಹಾಗೂ ಸಂಘಟನಾ ಕಾರ್ಯದರ್ಶಿ ಉಪ್ಪುಂದ ಮಂಜುನಾಥ ಮಯ್ಯ ಈ ಕಲಾಶಿಬಿರದ ರೂಪುರೇಷೆಗಳನ್ನು ಸಿದ್ಧಪಡಿಸಿ, ನಾಡಿನ ಹಿರಿಯ ಕಲಾವಿದರನ್ನು ಕರೆಸಿ ಕಾರ್ಯಾಗಾರವನ್ನು ನಡೆಸಿದರು. ಇವರಿಗೆ ಸಹಾಯಕರಾಗಿ ಕೆ. ಕೆ. ರಾಮನ್ ಮತ್ತು ಸುಪ್ರೀತ್ ಇದ್ದರು. ವಿವಿಧ ಸಾಂಸ್ಕೃತಿಕ ಹಾಗೂ ಮನೋರಂಜನಾ ಕಾರ್ಯಕ್ರಮಗಳ ನಡುವೆ ಸಂಪನ್ಮೂಲ ವ್ಯಕ್ತಿಗಳಿಂದ ಚಿತ್ರ ಕಲೆಯ ವಿವಿಧ ವಿಷಯಗಳ ಪ್ರಾತ್ಯಕ್ಷಿಕೆ ನಡೆಯಿತು.
ಜಲವರ್ಣ ಚಿತ್ರಕಲೆಯಲ್ಲಿ ಪೆರ್ಮುದೆ ಮೋಹನ್ ಕುಮಾರ್, ಹಿರಿಯ ಕಲಾವಿದ ಕೋಟೇಶ್ವರದ ಭೋಜು ಹಾಂಡ, ಸುಪ್ರೀತ್, ಶೈಲೇಶ್ ಕೋಟ್ಯಾನ್ ಹಾಗೂ ತೆಕ್ಕಟ್ಟೆ ಲೋಕೇಶ್ ಆಚಾರ್ಯರು ಪ್ರಾತ್ಯಕ್ಷಿಕೆ ನೀಡಿದರು. ಶೀರೂರು ಗ್ರಾಮದ ಮಠದ ಪರಿಸರಕ್ಕೆ ಶಿಬಿರಾರ್ಥಿಗಳನ್ನು ಕರೆದೊಯ್ದು ಸ್ಥಳದಲ್ಲಿಯೇ ನಿಸರ್ಗ ದೃಶ್ಯ ಚಿತ್ರರಚನೆಯ ಪ್ರಾತ್ಯಕ್ಷಿಕೆ ನಡೆಸಿದರು. ನಿಸರ್ಗ ಚಿತ್ರಕ್ಕೆ ನಕ್ಷೆ ರಚನೆ, ವರ್ಣ ಸಂಯೋಜನೆ, ಪೂರ್ಣಗೊಳಿಸುವಿಕೆ ಇತ್ಯಾದಿಯಾಗಿ ಪೂರ್ಣ ವಿವರಗಳನ್ನು ನೀಡಿದರು. ಪರಸ್ಪರ ಚರ್ಚೆ, ವಿಷಯ ನಿರೂಪಣೆಯ ಮೂಲಕ ಚಿತ್ರ ರಚನೆಯ ಕ್ರಮ ಹೆಚ್ಚು ಸ್ಪಷ್ಟವಾಯಿತು.
ಮುಖವಾಡ ರಚನೆ, ಪೇಪರ್ ಕ್ರಾಫ್ಟ್ ಬಗ್ಗೆ ಕಲಾವಿದ ಭೋಜು ಹಾಂಡ, ಕಾವಿಕಲೆ ವಿಧಾನದ ಬಗ್ಗೆ ವೀಣಾ ಶ್ರೀನಿವಾಸ್, ಪೆನ್ಸಿಲಿನಲ್ಲಿ ಭಾವಚಿತ್ರ ರಚಿಸುವ ಬಗ್ಗೆ ನಾಗಪತಿ ಸುಬ್ರಾಯ ಹೆಗಡೆ, ಗಣೇಶ್ ಕುಕ್ಕೆಹಳ್ಳಿ ಪೋಟೈìಟ್ ರಚಿಸುವ ವಿಧಾನವನ್ನು ತಿಳಿಸಿ ಕೊಟ್ಟರು. ಸ್ಲೆ„ಡ್ ಶೋ ಮೂಲಕ ಜಾಗತಿಕ ಕಲೆ-ಕಲಾವಿದರ ಪರಿಚಯವನ್ನು ಸಕು ಪಾಂಗಾಳ ಮಾಡಿಸಿದರು. ಶಿಬಿರದ ಸಮಾರೋಪದ ದಿನ ರಚನೆಗೊಂಡ ಕಲಾಕೃತಿಗಳ ಕಲಾಪ್ರದರ್ಶನ ನಡೆಯಿತು.
ಶಿಬಿರದಲ್ಲಿ ರಚನೆಗೊಂಡ ಕಲಕೃತಿಗಳನ್ನು ಮುಖ್ಯ ವೇದಿಕೆಯಲ್ಲಿ ಪ್ರದರ್ಶಿಸಲಾಯಿತು. ಶೈಲೇಶ್ ಕೋಟ್ಯಾನ್ ರಚಿಸಿದ ಬೆಳದಿಂಗಳ ನಿಸರ್ಗಚಿತ್ರ, ನಾಗಪತಿ ಸುಬ್ರಾಯ ಹೆಗಡೆ ಪೆನ್ಸಿಲಿನಲ್ಲಿ ರಚಿಸಿದ ಶಿವರಾಮ ಕಾರಂತರ ಚಿತ್ರ, ಗಣೇಶ್ ಕುಕ್ಕೆಹಳ್ಳಿ ಸ್ಥಳದಲ್ಲಿಯೇ ರಚಿಸಿದ ಭಾವಚಿತ್ರಗಳು ಕಲಾತ್ಮಕವಾಗಿದ್ದವು. ಪೆರ್ಮುದೆ ಮೋಹನ್ ಕುಮಾರರ ನಿಸರ್ಗ ಚಿತ್ರಗಳು, ಭೋಜು ಹಾಂಡರ ಮುಖವಾಡಗಳು ಆಕರ್ಷಕವಾಗಿದ್ದವು.