ಮುಂಬಯಿ: ಮುಂಬೈ ವಿರುದ್ಧದ 9 ವಿಕೆಟ್ ಅಂತರದ ಗೆಲುವಿನಲ್ಲಿ ಕ್ರಿಸ್ ಗೇಲ್ ಅವರ ಸಿಡಿಲಬ್ಬರ ಬ್ಯಾಟಿಂಗ್ ಹಾಗೂ ಅವರು ಸಲ್ಲಿಸಿದ ಅಜೇಯ 82 ರನ್ನುಗಳ ಕೊಡುಗೆ ನಿರ್ಣಾಯಕವಾಗಿರಬಹುದು, ಆದರೆ ಗೆಲುವಿನ ಎಲ್ಲ ಕ್ರೆಡಿಟ್ ಬೌಲರ್ಗಳಿಗೆ ಸಲ್ಲಬೇಕು ಎಂಬುದು ಗೇಲ್ ಅವರ ಪ್ರಾಮಾಣಿಕ ಅಭಿಪ್ರಾಯ.'ನಿಜ ಹೇಳಬೇಕೆಂದರೆ ನಾವು ಬ್ಯಾಟಿಂಗ್ ಮಾಡುವಾಗ ವಿಕೆಟ್ ಉತ್ತಮವಾಗಿಯೇ ವರ್ತಿಸುತ್ತಿತ್ತು. ಟಾಸ್ ಗೆಲುವು ನಮ್ಮ ಪಾಲಿಗೆ ಉತ್ತಮವಾಗಿ ಪರಿಣಮಿಸಿತು. ಈ ಪರಿಸ್ಥಿತಿಯನ್ನು ನಮ್ಮ ಬೌಲರ್ಗಳೆಲ್ಲ ಚೆನ್ನಾಗಿ ಬಳಸಿಕೊಂಡರು. ಹೀಗಾಗಿ ಅವರಿಗೆ ಈ ಶ್ರೇಯ ಸಲ್ಲಬೇಕು. ಮೊದಲ 6 ಓವರ್ಗಳಲ್ಲೇ ಎದುರಾಳಿ ಬ್ಯಾಟಿಂಗನ್ನು ನಿಯಂತ್ರಿಸುವುದು ಸಾಮಾನ್ಯ ಮಾತಲ್ಲ. ಅದರಲ್ಲೂ ಮುಂಬೈ ಬಲಿಷ್ಠ ಬ್ಯಾಟಿಂಗ್ ಪಡೆಯನ್ನು ಹೊಂದಿರುವಂಥ ತಂಡ. ಈ ಪಂದ್ಯವನ್ನು ಗೆಲ್ಲಿಸಿದ್ದು ಬೌಲರ್ಗಳೇ...' ಎಂದು ಎಡಗೈ ಪವರ್-ಹಿಟ್ಟರ್ ಗೇಲ್ ಹೇಳಿದರು.ಅಪಾಯಕಾರಿ ಬ್ಯಾಟ್ಸ್ಮನ್ಗಳಾದ ಫ್ರ್ಯಾಂಕ್ಲಿನ್ ಹಾಗೂ ರೋಹಿತ್ ಶರ್ಮ ವಿಕೆಟ್ಗಳನ್ನು ದ್ವಿತೀಯ ಓವರಿನಲ್ಲೇ ಉಡಾಯಿಸಿದ ವಿನಯ್ ಕುಮಾರ್ ಆರ್ಸಿಬಿಗೆ ಮೇಲುಗೈ ಒದಗಿಸಿದ್ದರು.ಬಳಿಕ ಗೇಲ್ ಎಂದಿನಂತೆ ಸಿಡಿದು ನಿಂತು 6ನೇ ಅರ್ಧ ಶತಕ ಬಾರಿಸಿ ಅಜೇಯರಾಗಿ ಉಳಿದರು. ಈ ಸರಣಿಯಲ್ಲಿ ಗೇಲ್ ದಾಖಲಿಸಿದ 4ನೇ 80 ಪ್ಲಸ್ ಗಳಿಕೆ ಇದಾಗಿದೆ. 5ನೇ ಐಪಿಎಲ್ನಲ್ಲಿ ಅರ್ಧ ಸಹಸ್ರ ರನ್ ಪೇರಿಸಿದ ಮೊದಲ ಬ್ಯಾಟ್ಸ್ಮನ್ ಎಂಬ ಹೆಗ್ಗಳಿಕೆಯೂ ಈ ಕೆರಿಬಿಯನ್ ದೈತ್ಯನದ್ದಾಗಿದೆ.ಮುಂಬೈನ ಡೇಂಜರಸ್ ಬೌಲರ್ ಆಗಿರುವ ಲಸಿತ ಮಾಲಿಂಗ ವಿರುದ್ಧ ಮಾತ್ರ ಹೆಚ್ಚು ರಿಸ್ಕ್ ತೆಗೆದುಕೊಳ್ಳಲಿಲ್ಲ ಎಂದೂ ಗೇಲ್ ಹೇಳಿದರು. 'ಮಾಲಿಂಗ ಟಿ-20ಯ ಅತ್ಯುತ್ತಮ ಬೌಲರ್ಗಳಲ್ಲೊಬ್ಬರು. ಆರಂಭದಲ್ಲೇ ವಿಕೆಟ್ ಉರುಳಿಸುವಲ್ಲಿ ನಿಸ್ಸೀಮರು. ಅವರನ್ನು ಎದುರು ಹಾಕಿಕೊಳ್ಳದಿರುವುದು ನನ್ನ ಹಾಗೂ ದಿಲ್ಶನ್ ಯೋಜನೆಯಾಗಿತ್ತು. ಇದು ಯಶಸ್ವಿಯೂ ಆಯಿತು...' ಎಂದರು ಗೇಲ್.ಮುಂಬೈಗೆ ಲಭಿಸಿದ್ದು 19 ರನ್ ಮಾಡಿದ ದಿಲ್ಶನ್ ವಿಕೆಟ್ ಮಾತ್ರ. ಇದನ್ನು 9ನೇ ಓವರಿನಲ್ಲಿ ಪ್ರಗ್ಯಾನ್ ಓಜಾ ಉರುಳಿಸಿದ್ದರು.