ಕಡಬ : ಸರಕಾರಿ ಉದ್ಯೋಗಕ್ಕಾಗಿ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ತೆರಳುವ ನಿರುದ್ಯೋಗಿ ಉದ್ಯೋಗಾರ್ಥಿಗಳಿಂದ ಬೇಕಾಬಿಟ್ಟಿ ಶುಲ್ಕ ಪಡೆಯುವ ಮೂಲಕ ಕೆಲವು ಸೈಬರ್ ಕೆಫೆಗಳವರು ಸುಲಿಗೆ ಮಾಡುತ್ತಿದ್ದಾರೆ ಎಂದು ಉದ್ಯೋಗಾರ್ಥಿಗಳಿಂದ ಆರೋಪ ವ್ಯಕ್ತವಾಗಿದೆ.ಸರಕಾರಿ ಪ.ಪೂ. ಕಾಲೇಜಿನ ಉಪನ್ಯಾಸಕ ಹುದ್ದೆ ಹಾಗೂ ಪ್ರೌಢಶಾಲಾ ಶಿಕ್ಷಕರ ಹುದ್ದೆಗಾಗಿ ಸರಕಾರ ಆರ್ಜಿ ಆಹ್ವಾನಿಸಿದ್ದು, ರಾಜ್ಯದೆಲ್ಲೆಡೆ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸುವ ಕಾರ್ಯ ಭರದಿಂದ ಸಾಗುತ್ತಿದೆ.ಅರ್ಜಿ ಸಲ್ಲಿಕೆಯ ಮೊದಲ ಹಂತವಾಗಿ ಆನ್ಲೈನ್ನಲ್ಲಿ ಬ್ಯಾಂಕ್ ಚಲನ್ ಪಡೆದುಕೊಂಡು ಬ್ಯಾಂಕ್ಗೆ ಶುಲ್ಕ ಪಾವತಿಸಬೇಕು. ಎರಡನೇ ಹಂತದಲ್ಲಿ ಭಾವಚಿತ್ರ, ಸಹಿ, ಚಲನ್ ಹಾಗೂ ಹಬ್ಬೆಟ್ಟು ಗುರುತನ್ನು ಸ್ಕಾನ್ ಮಾಡಿ ಅಪ್ಲೋಡ್ ಮಾಡಿ ಅರ್ಜಿಯ ಮುದ್ರಿತ ಪ್ರತಿ ಪಡೆಯಬೇಕು. ಇಲ್ಲಿಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಪೂರ್ಣವಾಗುತ್ತದೆ.ಇಂಟರ್ನೆಟ್ ಸಂಪರ್ಕ ಇದ್ದರೆ ಮನೆಯಲ್ಲಿಯೇ ಕುಳಿತು ಈ ಅರ್ಜಿ ಸಲ್ಲಿಸಲು ಸಾಧ್ಯ. ಆದರೆ ಸಮರ್ಪಕ ಮಾಹಿತಿ ಇಲ್ಲದೇ ಇರುವ ಬಹುಪಾಲು ಮಂದಿ ಅರ್ಜಿ ಸಲ್ಲಿಕೆಗಾಗಿ ಸೈಬರ್ಕೆಫೆಗಳನ್ನೇ ಆಶ್ರಯಿಸಿದ್ದಾರೆ. ಕೆಲವು ಬಾರಿ ಸರ್ವರ್ ಸಮಸ್ಯೆ ಇದ್ದರೆ ಮತ್ತೆ ಮತ್ತೆ ಪ್ರಯತ್ನಿಸಬೇಕಾಗುತ್ತದೆ. ಅದನ್ನೇ ಬಂಡವಾಳವಾಗಿಸಿಕೊಂಡಿರುವ ಕೆಲವು ಸೈಬರ್ ಕೆಫೆಗಳವರು ಗರಿಷ್ಠ ಎಂದರೆ 75 ರಿಂದ 100 ರೂ. ಗಳಲ್ಲಿ ಮುಗಿದುಹೋಗುವ ಈ ಪ್ರಕ್ರಿಯೆಗೆ 350 ರೂ. ಗಳ ವರೆಗೆ ಶುಲ್ಕ ವಿಧಿಸುವ ಮೂಲಕ ಪದವಿ ಪಡೆದು ಉದ್ಯೋಗವಿಲ್ಲದೇ ಮೊದಲೇ ಸಂಕಷ್ಟದಲ್ಲಿರುವ ಅಮಾಯಕ ಉದ್ಯೋಗಾರ್ಥಿಗಳನ್ನು ಸುಲಿಗೆ ಮಾಡುತ್ತಿದ್ದಾರೆ.ಸರಕಾರ ಅರ್ಜಿ ಸಲ್ಲಿಕೆ ಪ್ರಕ್ರಿಯೆಯನ್ನು ಸರಳಗೊಳಿಸುವ ಸದುದ್ದೇಶದಿಂದ ಮಾಡಿರುವ ಈ ವ್ಯವಸ್ಥೆಯನ್ನು ಕೆಲವರು ದುರುಪಯೋಗಪಡಿಸುತ್ತಿರುವುದು ಮಾತ್ರ ವಿಷಾದನೀಯ.