ಚೆನ್ನೈ: ಕಾವೇರಿ ನೀರು ಬಿಡಿ ಎಂದು ಆಗಾಗ ತಗಾದೆ ತೆಗೆಯುವ ತಮಿಳುನಾಡು ಸರ್ಕಾರ ಈಗ ಕಾವೇರಿ ನದಿಗೆ ನಾಲ್ಕು ಅಣೆಕಟ್ಟು ಕಟ್ಟಿ ವಿದ್ಯುತ್ ಉತ್ಪಾದಿಸಲು ಅನುಮತಿ ನೀಡಿ ಎಂದು ಕರ್ನಾಟಕ ಸರ್ಕಾರಕ್ಕೆ ದುಂಬಾಲು ಬಿದ್ದಿದೆ.2008ರಲ್ಲೇ ಇದಕ್ಕೆ ಕರ್ನಾಟಕ ಸರ್ಕಾರದ ಅನುಮತಿ ಕೇಳಿದ್ದೇವೆ. ನಂತರ ಕೇಂದ್ರ ಸರ್ಕಾರಕ್ಕೂ ಈ ಬಗ್ಗೆ ಮನವಿ ಮಾಡಿದ್ದೇವೆ. ಇಬ್ಬರೂ ನಮ್ಮ ಕೂಗು ಕೇಳಿಸಿಕೊಳ್ಳುತ್ತಿಲ್ಲ ಎಂದು ತಮಿಳುನಾಡಿನ ಇಂಧನ ಸಚಿವ ನಾಥಮ್ ಆರ್. ವಿಶ್ವನಾಥಂ ಗುರುವಾರ ವಿಧಾನಸಭೆಯಲ್ಲಿ ಅಳಲು ತೋಡಿಕೊಂಡರು.ಕಾವೇರಿ ನದಿಗೆ ಮಂಡ್ಯದ ಶಿವನಸಮುದ್ರದಿಂದ ತಮಿಳುನಾಡಿನ ಮೆಟ್ಟೂರಿನ ನಡುವೆ ನಾಲ್ಕು ಅಣೆಕಟ್ಟು ಕಟ್ಟಿ ಜಲವಿದ್ಯುತ್ ಉತ್ಪಾದಿಸಲು ಯೋಜನೆ ರೂಪಿಸಲಾಗಿದೆ. ರಾಷ್ಟ್ರೀಯ ಜಲವಿದ್ಯುತ್ಛಕ್ತಿ ನಿಗಮದ ಮೂಲಕ ಇದನ್ನು ಜಾರಿಗೊಳಿಸಲಾಗುವುದು. ಆದರೆ, ಕರ್ನಾಟಕ ಸರ್ಕಾರ ಇದಕ್ಕೆ ಸಹಕಾರ ನೀಡುತ್ತಿಲ್ಲ. ಜಂಟಿಯಾಗಿ ಅಣೆಕಟ್ಟು ಕಟ್ಟಲು ಒಪ್ಪಿಗೆಯನ್ನೂ ನೀಡುತ್ತಿಲ್ಲ ಎಂದು ವಿಶ್ವನಾಥಂ ಹೇಳಿದ್ದಾರೆ.ಕೇಂದ್ರ ಸರ್ಕಾರಕ್ಕೆ ಈ ಬಗ್ಗೆ ದೂರು ನೀಡಿದ್ದರೂ ಅದು ಉದಾಸೀನತೆ ತೋರುತ್ತಿದೆ. ಇದರಿಂದಾಗಿ ರಾಜ್ಯದಲ್ಲಿ 1150 ಮೆಗಾವಾಟ್ ವಿದ್ಯುತ್ ಕೊರತೆ ಉಂಟಾಗಿದೆ. ಅನುಮತಿ ಸಿಕ್ಕರೆ ಕಾವೇರಿ ನದಿಯ ಗುಂಟ ಶಿವನಸಮುದ್ರಂ (270 ಮೆ.ವಾ), ಮೇಘದಾಟು (ಮೇಕೆದಾಟು- 400 ಮೆ.ವಾ), ರಸಿಮನಲ್ (360 ಮೆ.ವಾ) ಮತ್ತು ಹೊಗೇನಕಲ್ (120 ಮೆ.ವಾ)ನಲ್ಲಿ ಒಂದೊಂದು ಅಣೆಕಟ್ಟು ಕಟ್ಟಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.ಇದಕ್ಕಾಗಿ 2008ರ ಡಿ.15ರಂದೇ ಕರ್ನಾಟಕ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದೂ ಮಾಹಿತಿ ನೀಡಿದ್ದಾರೆ.ಸಮುದ್ರದಲ್ಲೂ ಗಾಳಿಯಂತ್ರಬೆಟ್ಟ ಗುಡ್ಡಗಳಲ್ಲಿ ಪವನ ವಿದ್ಯುತ್ ಉತ್ಪಾದಿಸುವ ಯಂತ್ರಗಳನ್ನು ನಿಲ್ಲಿಸಿದ ಮೇಲೆ ಇದೀಗ ಸಮುದ್ರದಲ್ಲೂ ಅವುಗಳನ್ನು ಸ್ಥಾಪಿಸಲು ತಮಿಳುನಾಡು ಸರ್ಕಾರ ಮುಂದಾಗಿದೆ. ರಾಜ್ಯದಲ್ಲಿನ ವಿದ್ಯುತ್ ಕೊರತೆ ನಿಭಾಯಿಸಲು ಸಮುದ್ರದಲ್ಲಿ ಪವನ ಯಂತ್ರಗಳನ್ನು ಸ್ಥಾಪಿಸಲಾಗುವುದು ಎಂದು ಇಂಧನ ಸಚಿವರು ತಿಳಿಸಿದ್ದಾರೆ.ಸಮುದ್ರದ ಅಲೆಗಳಿಂದ ವಿದ್ಯುತ್ ಉತ್ಪಾದಿಸುವ ಮೊದಲ ರಾಜ್ಯವಾಗಿಯೂ ತಮಿಳುನಾಡು ಹೊರಹೊಮ್ಮುವ ಸಾಧ್ಯತೆಯಿದೆ. ಇದಕ್ಕೆ ಹಲವು ಖಾಸಗಿ ಕಂಪನಿಗಳು ಮುಂದೆ ಬಂದಿವೆ ಎಂದು ಸಚಿವರು ಹೇಳಿದ್ದಾರೆ.