ನವದೆಹಲಿ : ಹೆಚ್ಚಾಗಿ ಶಾಂತಚಿತ್ತರಾಗಿ ಗೋಚರಿಸುವ ಕೇಂದ್ರ ವಿತ್ತ ಸಚಿವ ಪ್ರಣಬ್ ಮುಖರ್ಜಿ ಅವರು ಯಾವಾಗಲೂ ಬಿಕ್ಕಟ್ಟು ಪರಿಹರಿಸುವ ಚಾಣಾಕ್ಯನೆಂದೇ ಪ್ರಸಿದ್ಧಿ. ಆದರೆ ಲೋಕಸಭೆಯಲ್ಲಿ ಗುರುವಾರ ಅವರು ತಾಳ್ಮೆ ಕಳೆದುಕೊಂಡು ಕೂಗಾಡಿದ್ದು ಕೋಲಾಹಲಕ್ಕೆ ನಾಂದಿ ಹಾಡಿತು.ಸದನದಲ್ಲಿ ಏರ್ಸೆಲ್ ಮ್ಯಾಕ್ಸಿಸ್ ಹಗರಣ ಮತ್ತು ಗೋಣಿಚೀಲ ಅಭಾವ ವಿಷಯಗಳು ಪ್ರಸ್ತಾಪವಾಗಿ ವಿಪಕ್ಷಗಳು ಗದ್ದಲ ಎಬ್ಬಿಸಿದವು. ಆಗ ಬಿಜೆಪಿಯ ಯಶವಂತ ಸಿನ್ಹಾ ಅವರು ಏರ್ಸೆಲ್ ಹಗರಣಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಪಿ.ಚಿದಂಬರಂ ವಿರುದ್ಧ ವಾಗ್ಧಾಳಿ ನಡೆಸಿದಾಗ ಅವರ ವಿರುದ್ಧ ಕುಪಿತಗೊಂಡ ಪ್ರಣಬ್ ಮುಖರ್ಜಿ ತಾಳ್ಮೆ ಕಳೆದುಕೊಂಡು ಕೂಗಾಡತೊಡಗಿದರು. ಅವರು ಬಳಸಿದ ಪದದ ಬಗ್ಗೆ ಪ್ರತಿಪಕ್ಷಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.ಆದರೆ ಸಂಜೆ ಈ ಬಗ್ಗೆ ಸದನದಲ್ಲಿ ಕ್ಷಮೆ ಕೋರಿದ ಮುಖರ್ಜಿ, 'ನನ್ನ ಆ ನಡವಳಿಕೆ ಬಗ್ಗೆ ವಿಷಾದವಿದೆ. ದಯವಿಟ್ಟು ಕ್ಷಮಿಸಿ. ಆ ಕ್ಷಣದಲ್ಲಿ ನಾನು ಅದೇಕೆ ಆ ರೀತಿ ಕೂಗಾಡಿದೆನೋ ಗೊತ್ತಾಗುತ್ತಿಲ್ಲ' ಎಂದು ಹೇಳಿ ವಿವಾದಕ್ಕೆ ತೆರೆಯೆಳೆದರು.