Udayavani | May 11, 2012
ಬೆಂಗಳೂರು : ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಅಕ್ರಮ ಗಣಿಗಾರಿಕೆ ವಿರುದ್ಧ ಸಿಬಿಐ ತನಿಖೆಗೆ ಸುಪ್ರೀಂ ಕೋರ್ಟ್ ಆದೇಶಿಸಿರುವುದನ್ನು ಸ್ವಾಗತಿಸಿದ್ದಾರೆ. ರಾಜ್ಯದಲ್ಲಿ ಅಕ್ರಮ ಗಣಿಗಾರಕೆಯನ್ನು ತಡೆಯಲು ಆದೇಶ ನೀಡಿದ್ದೇ ತಾನಾಗಿದ್ದು ಸಿಬಿಐ ತನಿಖೆಯ ಅಗ್ನಿ ಪರೀಕ್ಷೆಯಲ್ಲಿ ತಾನು ಗೆದ್ದು ಬರುವೆನೆಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ.
ಯಡಿಯೂರಪ್ಪ ಅವರ ಕುಟುಂಬ ನಡೆಸುತ್ತಿರುವ ಪ್ರೇರಣಾ ಟ್ರಸ್ಟ್ಗೆ ಸಂದಿರುವ ದೇಣಿಗೆಗಳ ಬಗ್ಗೆಯೂ ಸಿಬಿಐ ತನಿಖೆ ನಡೆಯಲಿದೆ.
"ನಾನು ಮುಖ್ಯಮಂತ್ರಿಯಾಗಿದ್ದಾಗಿನ ಅವಧಿಗೆ ಸಂಬಂಧಿಸಿದ ಅಕ್ರಮ ಗಣಿಗಾರಿಕೆಯ ಕುರಿತಾಗಿ ಸಿಬಿಐ ತನಿಖೆ ನಡೆಸಲು ಸುಪ್ರೀಂ ಕೋರ್ಟ್ ಆದೇಶಿಸಿದೆ. ಆದರೆ 2000 ಇಸವಿಯಿಂದ ಆರಂಭಗೊಂಡು ನನ್ನ ಆಡಳಿತಾವಧಿಯ ವರೆಗಿನ ಅಕ್ರಮ ಗಣಿಗಾರಿಕೆಯನ್ನು ಸಿಬಿಐ ತನಿಖೆ ನಡೆಸಬೇಕೇಂದು ನಾನು ಪ್ರಧಾನಿಯವರನ್ನು ಕೋರಲಿದ್ದೇನೆ' ಎಂದು ಯಡಿಯೂರಪ್ಪ ಅವರು ಮೈಸೂರು ಸಮೀಪದ ನಂಜನಗೂಡಿನಲ್ಲಿ ನಡೆದ ಸಮಾರಂಭವೊಂದರ ಪಾರ್ಶ್ವದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು.
"ನನ್ನ ವಿರುದ್ಧ ರಾಜಕೀಯ ಸಂಚು ನಡೆಸಲಾಗಿದೆ. ಅಂತೆಯೇ ನನ್ನನ್ನು ಅಕ್ರಮ ಗಣಿಗಾರಿಕೆಯಲ್ಲಿ ಸಿಲುಕಿಸಲು ಯತ್ನಿಸಲಾಗುತ್ತಿದೆ. ಏಕೆಂದರೆ ಅದನ್ನು ನಾನು ತಡೆಯಲು ಯತ್ನಿಸಿದ್ದೇನೆ. ಅಧಿಕಾರಿದಲ್ಲಿದ್ದುಕೊಂಡು ಒಳ್ಳೆಯ ಕೆಲಸಗಳನ್ನು ಮಾಡಿದ್ದಕ್ಕಾಗಿ ನಾನು ಸಂಕಷ್ಟಗಳನ್ನು ಎದುರಿಸುವಂತಾಗಿದೆ. ಈ ರಾಜಕೀಯ ಅಗ್ನಿಪರೀಕ್ಷೆಯಲ್ಲಿ ಗೆದ್ದುಬರುವನೆಂಬ ವಿಶ್ವಾಸ ನನಗಿದೆ' ಎಂದು ಯಡಿಯೂರಪ್ಪ "ನಾನು ಸುಪ್ರೀಂ ಕೋರ್ಟ್ ನಿರ್ಧಾರವನ್ನು ಸ್ವಾಗತಿಸುತ್ತೇನೆ' ಎಂದರು.