Udayavani | May 12, 2012
ಎಚ್.ಡಿ.ಕೋಟೆ: ಮುಂಜಾವಿನಲ್ಲಿ ಇನ್ನೂ ಕತ್ತಲಿರುವಾಗ ರಸ್ತೆ ಬದಿ ಮಲಗಿದ್ದವರ ಮೇಲೆ ವಾಹನ ಹರಿದು ಜನ ಸಾವನ್ನಪ್ಪುವ ಹಲವಾರು ದುರ್ಘಟನೆಗಳನ್ನು ಕೇಳಿದ್ದೇವೆ. ಆದರೆ, ಕೆಲಸಕ್ಕೆ ಹೋಗಲೆಂದು ರಸ್ತೆ ಬದಿ ಕಾಯುತ್ತಿದ್ದ ಮಹಿಳೆಯರ ಮೇಲೆ ಕಾರು ಹರಿದು ಐವರನ್ನು ಬಲಿ ಪಡೆದ ಹೃದಯ ವಿದ್ರಾವಕ ಘಟನೆಯೊಂದು ಇಲ್ಲಿಗೆ ಸಮೀಪದ ಹೈರಿಗೆ ಗ್ರಾಮದಲ್ಲಿ ಶನಿವಾರ ನಸುಕಿನಲ್ಲಿ ಸಂಭವಿಸಿದೆ.
ಗಾರ್ಮೆಂಟ್ ಕಾರ್ಖಾನೆಗೆ ಕೆಲಸಕ್ಕೆ ತೆರಳಲೆಂದು ಒಂದೇ ಗ್ರಾಮದ ಮಹಿಳೆಯರು ರಸ್ತೆ ಬದಿ ಕಾಯುತ್ತಿದ್ದಾಗ ಯಮನಂತೆ ಬಂದ ಆಲ್ಟೋ ಕಾರೊಂದು ಅವರ ಮೇಲೆ ಹರಿಯಿತು. ಘಟನೆಯಲ್ಲಿ ನಾಲ್ವರು ಮಹಿಳೆಯರು ಸ್ಥಳದಲ್ಲೇ ಸಾವನ್ನಪ್ಪಿದರೆ, ಮತ್ತೂಬ್ಬ ಮಹಿಳೆ ಆಸ್ಪತ್ರೆಯಲ್ಲಿ ಅಸುನೀಗಿದ್ದಾರೆ. 10 ಮಹಿಳೆಯರು ತೀವ್ರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮೃತ್ಯುವಾದ ಕಾರು: ಮೈಸೂರಿನ ಬೆಳಗೊಳದಲ್ಲಿರುವ ಗೋಪಾಲದಾಸ್ ಅವರ ಗಾರ್ಮೆಂಟ್ ಕಾರ್ಖಾನೆಗೆ ಕೆಲಸಕ್ಕಾಗಿ ಪ್ರತಿನಿತ್ಯ ತಾಲೂಕಿನ ಹೈರಿಗೆ, ಕೃಷ್ಣಾಪುರ, ಅಂತರಸಂತೆ ಮುಂತಾದ ಗ್ರಾಮಗಳಿಂದ 30ಕ್ಕೂ ಹೆಚ್ಚು ಮಹಿಳೆಯರು ಮತ್ತು ಯುವತಿಯರು ತೆರಳುತ್ತಾರೆ. ಎಂದಿನಂತೆ ಶನಿವಾರ ಕೂಡ ಹೈರಿಗೆ ಗ್ರಾಮದಿಂದ ಸುಮಾರು 15 ಮಂದಿ ಯುವತಿಯರು, ಮಹಿಳೆಯರು ಕೆಲಸಕ್ಕೆ ಹೋಗಲು ಮುಂಜಾನೆ 4.30ರ ವೇಳೆಯಲ್ಲಿ ರಸ್ತೆ ಬದಿಯಲ್ಲಿ ಕಾರ್ಖಾನೆಯ ವಾಹನಕ್ಕಾಗಿ ಕಾದು ಕುಳಿತಿದ್ದರು.
ಈ ಸಂದರ್ಭದಲ್ಲಿ ಮೈಸೂರು ಕಡೆಯಿಂದ ಕೋಟೆಯ ನಿವಾಸಿ ಮೆಡಿಕಲ್ ಸಿದ್ದು ಮತ್ತು ಆತನ ಸ್ನೇಹಿತ ಹೊಸ ಕೆಂಪು ಬಣ್ಣದ ಮಾರುತಿ ಆಲ್ಟೋ ಕಾರಿನಲ್ಲಿ (ಕೆಎ 45-ಎಂ1527) ಬಂದು ರಸ್ತೆ ಬದಿಯಲ್ಲಿದ್ದ ಮಹಿಳೆಯರ ಮೇಲೆ ಹರಿಸಿದ ಪರಿಣಾಮ ನಾಲ್ವರು ಸ್ಥಳದಲ್ಲೇ ಮೃತಪಟ್ಟರು. ಗಾಯಗೊಂಡಿದ್ದ ಮತ್ತೋರ್ವ ಮಹಿಳೆ ಚಿಕಿತ್ಸೆ ಫಲಕಾರಿಯಾಗದೆ ಮೈಸೂರಿನ ಕೆ.ಆರ್.ಆಸ್ಪತ್ರೆಯಲ್ಲಿ ಅಸುನೀಗಿದರು.
ಹೈರಿಗೆ ಗ್ರಾಮದ ದಲಿತ ಕುಟುಂಬಕ್ಕೆ ಸೇರಿದ ರಾಜಮ್ಮ(50), ಈಕೆಯ ಮಗಳು ದಿನಮಣಿ(19), ನಾಗಯ್ಯನ ಮಗಳು ಗೀತಾ(19), ದೇವಯ್ಯನ ಮಗಳು ಗೀತಾ(20), ರತ್ನಮ್ಮ (18) ಮೃತಪಟ್ಟ ದುರ್ದೈವಿಗಳು.
ದೇಹ ಚೆಲ್ಲಾಪಿಲ್ಲಿ: ಅಪಘಾತದ ಭೀಕರತೆಗೆ ನಾಲ್ವರ ದೇಹಗಳು ಒಂದೇ ಕಡೆ ಬಿದ್ದಿದ್ದರೆ, ಗೀತಾಳ ದೇಹ ಸುಮಾರು 300 ಮೀ.ಗೂ ಹೆಚ್ಚು ದೂರದಲ್ಲಿ ಬಿದ್ದಿತ್ತು. ಇದೇ ವೇಳೆ ಜೊತೆಯಲ್ಲಿದ್ದ ಸುಮಾರು 10 ಮಹಿಳೆಯರಿಗೆ ತೀವ್ರ ಗಾಯಗಳಾಗಿವೆ. ಡಿಕ್ಕಿ ಹೊಡೆದ ರಭಸಕ್ಕೆ ಕಾರು ಪಲ್ಟಿ ಹೊಡೆದಿದೆ. ಘಟನೆ ನಡೆದ ತಕ್ಷಣ ಕಾರಿನಲ್ಲಿದ್ದ ಇಬ್ಬರೂ ನಾಪತ್ತೆಯಾಗಿ¨ªಾರೆ. ಗಾಯಗೊಂಡವರನ್ನು ಎಚ್.ಡಿ. ಕೋಟೆ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪ್ರತಿಭಟನೆ: ಅಪಘಾತದ ವಿಚಾರ ತಿಳಿಯುತ್ತಿದ್ದಂತೆ ಗ್ರಾಮಸ್ಥರು, ಕುಟುಂಬ ವರ್ಗದವರು, ತಾಲೂಕಿನ ವಿವಿಧ ಸಂಘಟನೆಗಳ ಮುಖಂಡರು ಸ್ಥಳದಲ್ಲಿ ಪ್ರತಿಭಟನೆ ನಡೆಸಿದರು. ಮೃತಪಟ್ಟ ಕುಟುಂಬಗಳಿಗೆ ಸರ್ಕಾರದಿಂದ ತಲಾ 5 ಲಕ್ಷ ರೂ. ಪರಿಹಾರ ಮತ್ತು ಕಾರ್ಖಾನೆಯಿಂದ ತಲಾ 5 ಲಕ್ಷ ಪರಿಹಾರ ನೀಡಬೇಕು. ತಪ್ಪಿತಸ್ಥರನ್ನು ಬಂಧಿಸಬೇಕು. ಜಿÇÉಾ ಉಸ್ತುವಾರಿ ಸಚಿವ ರಾಮದಾಸ್, ಜಿÇÉಾಧಿಕಾರಿಗಳು ಸ್ಥಳಕ್ಕೆ ಆಗಮಿಸಬೇಕು ಎಂದು ಪಟ್ಟುಹಿಡಿದರು.
ಮಧ್ಯಾಹ್ನ 2 ಗಂಟೆಗೆ ಸಂಸದ ಧ್ರುವನಾರಾಯಣ್ ಆಗಮಿಸಿ, ಇಂತಹ ಸನ್ನಿವೇಶದಲ್ಲಿ ಸರ್ಕಾರದಿಂದ 1 ಲಕ್ಷದ ಮೇಲೆ ಪರಿಹಾರ ಕೊಡಲು ಅವಕಾಶವಿಲ್ಲ. ಕೇಂದ್ರ ಸರ್ಕಾರದ ಮೂಲಕ ಕೊಡಿಸಬಹುದಾದ ಪರಿಹಾರವನ್ನು ತಾವು ಕೊಡಿಸುವುದಾಗಿ ಭರವಸೆ ನೀಡಿದ ನಂತರ ಪ್ರತಿಭಟನೆ ಕೈಬಿಡಲಾಯಿತು.