ಬೆಂಗಳೂರು:ಉದ್ಯಾನ ನಗರಿ ನಿವಾಸಿಗಳಿಗೆ ಸಿಹಿ ಸುದ್ದಿ. ನಗರಕ್ಕೆ 500 ಎಂಎಲ್ಡಿ (ನಿತ್ಯ ದಶಲಕ್ಷ ಲೀಟರ್) ನೀರು ಒದಗಿಸುವ ಕಾವೇರಿ ನಾಲ್ಕನೇ ಹಂತ ಎರಡನೇ ಘಟ್ಟದ ಯೋಜನೆ ಜುಲೈ ವೇಳೆಗೆ ಪೂರ್ಣಗೊಳ್ಳಲಿದೆ.ಜಲಮಂಡಳಿಯ ಯೋಜನೆಗಳಲ್ಲೇ ಬೃಹತ್ ಯೋಜನೆಯಾದ ಕಾವೇರಿ ನಾಲ್ಕನೇ ಹಂತ ಎರಡನೇ ಘಟ್ಟದ ಕಾಮಗಾರಿ ಕೊನೆಗೂ ಮುಕ್ತಾಯ ಹಂತ ತಲುಪಲಿದ್ದು, ಬಹುತೇಕ ಜುಲೈ ವೇಳೆಗೆ ಪೂರ್ಣಗೊಳ್ಳಲಿದೆ. ಅನಂತರ ನಾಗರೀಕರಿಗೆ 500 ಎಂಎಲ್ಡಿ ನೀರು ಪೂರೈಕೆಯಾಗಲಿದೆ ಎಂದು ಜಲಮಂಡಳಿಯು ಶನಿವಾರ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ತಿಳಿಸಿದೆ.ಮಂಡ್ಯ ಜಿಲ್ಲೆಯ ಮಳವಳ್ಳಿಯಿಂದ ಸುಮಾರು 20 ಕಿ.ಮೀ ದೂರದ ಶಿವ ಬ್ಯಾಲೆನ್ಸಿಂಗ್ ರಿಜರಾÌಯರ್ನಿಂದ ಸುಮಾರು 172 ಕಿ.ಮೀ ದೂರದ ನಗರಕ್ಕೆ ನೀರು ತರಲಾಗುತ್ತಿದ್ದು, ಈ ಪೈಕಿ 166 ಕಿ.ಮೀ ದೂರದವರೆಗೆ ಕೊಳವೆ ಅಳವಡಿಕೆ ಕಾಮಗಾರಿ ಪೂರ್ಣಗೊಂಡಿದೆ. ವಿವಿಧ ಕಡೆಗಳಲ್ಲಿ 4.4 ಕಿ.ಮೀ ಹಾಗೂ ರಿಜರ್ ವಾಯರ್ನ ಆರಂಭದಲ್ಲಿ 1.6 ಕಿ.ಮೀ ಕೊಳವೆ ಅಳವಡಿಕೆ ಮಾತ್ರ ಬಾಕಿ ಉಳಿದಿದೆ ಎಂದು ಜಲಮಂಡಳಿ ಮೂಲಗಳು ತಿಳಿಸಿವೆ.ಶುದ್ಧೀಕರಣ ಘಟಕದ ಕಾಮಗಾರಿ ಶೇ.85 ರಷ್ಟು ಮುಕ್ತಾಯಗೊಂಡಿದೆ. ಪಂಪಿಂಗ್ ಸ್ಟೇಷನ್ ಕಾಮಗಾರಿಯು ಶೇ.85 ರಷ್ಟು ಪೂರ್ಣಗೊಂಡಿದೆ. ನಾರಾಯಣಪುರ, ಜಂಬೂ ಸವಾರಿ ದಿಣ್ಣೆ, ಜಿಕೆವಿಕೆ, ಒ.ಎಂ.ಬಿ.ಆರ್ ಬಡಾವಣೆ ಸೇರಿದಂತೆ 7 ಸ್ಥಳಗಳಲ್ಲಿ ನಿರ್ಮಿಸುತ್ತಿರುವ 11 ಭೂಮಟ್ಟದ ಜಲಾಗಾರಗಳಲ್ಲಿ 5 ಮುಕ್ತಾಯ ಹಂತದಲ್ಲಿವೆ. ಉಳಿದ ಆರು ಜಲಗಾರಗಳು ನಿರ್ಮಾಣ ಪ್ರಗತಿಯಲ್ಲಿದೆ. ಬಾಕಿ ಉಳಿದ ಕಾಮಗಾರಿಯನ್ನು ಕಡಿಮೆ ಅಂತರದಲ್ಲಿ ಮುಗಿಸುವ ನಿರ್ಧಾರ ಕೈಗೊಂಡಿರುವುದಾಗಿ ಮೂಲಗಳು ತಿಳಿಸಿವೆ.ಶನಿವಾರ ಕಾಮಗಾರಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದ ಸಚಿವ ಸುರೇಶ್ ಕುಮಾರ್ ಗುತ್ತಿಗೆದಾರರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಸಾರ್ವಜನಿಕರಿಗೆ ನೀಡಿದ್ದ ಭರವಸೆಯನ್ನು ಉಳಿಸಿಕೊಳ್ಳಲು ಪ್ರಯತ್ನಿಸಬೇಕಿದೆ. ಆದ್ದರಿಂದ ಜುಲೈ ವೇಳೆಗೆ ಕಡ್ಡಾಯವಾಗಿ ಕಾಮಗಾರಿಯನ್ನು ಪೂರ್ಣಗೊಳಿಸಬೇಕಾಗಿ ತಿಳಿಸಿದ್ದಾರೆ ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.